ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್ಬಾಸ್ ಮನೆಯಲ್ಲಿರುವುದು ಈ ಶನಿವಾರದವರೆಗೆ ಮಾತ್ರ. ಅತಿಥಿಯಾಗಿರುವ ಅವರು ಯಾವುದೇ ಟಾಸ್ಕ್ಗಳಲ್ಲಿ ಪಾಲ್ಗೊಳ್ಳದಿದ್ದರೂ ಉಳಿದ ಸ್ಪರ್ಧಿಗಳ ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಚಲನಚಿತ್ರ ಕ್ಷೇತ್ರದ ಹಳೇ ಕಲಾವಿದರ ಬಗೆಗಿನ ಕುತೂಹಲಕಾರಿ, ಆಸಕ್ತಿದಾಯಕ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ. ಮೊನ್ನೆ ನಟ ದಿನೇಶ್ ಅವರ ನಿಜಜೀವನದ ಹಾಸ್ಯ ಘಟನೆಗಳನ್ನು ಹೇಳಿ ಇಡೀ ಬಿಗ್ಬಾಸ್ ಮನೆಯನ್ನು ನಗೆಗಡಲಿನಲ್ಲಿ ತೇಲಿಸಿದ್ದರು.
ಇದೀಗ ಕಲರ್ಸ್ ಕನ್ನಡ ಪೋಸ್ಟ್ ಮಾಡಿರುವ ಹೊಸ ಪ್ರೊಮೋ ಒಂದರಲ್ಲಿ ರವಿ ಬೆಳಗೆರೆಯವರು ನಟ ಶಂಕರ್ನಾಗ್ ಹಾಗೂ ನಟಿ ಮಂಜುಳಾ ಅವರಿಗೆ ಸಂಬಂಧಪಟ್ಟ ದುರಂತದ ವಿಷಯವನ್ನು ತಿಳಿಸಿದ್ದಾರೆ. ಕಾಫಿ ಕುಡಿಯುತ್ತ ಅವರು ಹೇಳಿದ ಕತೆ ಕೇಳಿ ಉಳಿದ ಸ್ಪರ್ಧಿಗಳು ಹೌದಾ? ಎಂದು ಆಶ್ಚರ್ಯಚಕಿತರಾಗಿ ಕೇಳಿದ್ದನ್ನು ವಿಡಿಯೋ ತುಣುಕಲ್ಲಿ ನೋಡಬಹುದು.
ನಟಿ ಮಂಜುಳಾ ಅವರ ಎದುರು ಮೊದಲ ಬಾರಿ ಶಂಕರ್ನಾಗ್ ಅವರನ್ನು ಕರೆದುಕೊಂಡು ಬಂದು ಇವರೇ ನಿಮ್ಮ ಸಿನಿಮಾದ ಹೀರೋ ಎಂದು ಪರಿಚಯಿಸಿದಾಗ, ಯಾವ್ಯಾವುದೋ ಕೋತಿಯನ್ನೆಲ್ಲ ಕರೆದುಕೊಂಡು ಬಂದು ಹೀರೋ ಎನ್ನುತ್ತೀರಿ ಎಂದು ಮಂಜುಳಾ ಶಂಕರ್ನಾಗ್ ಎದುರೇ ಹೇಳಿದರು. ಆದರೆ ದುರಂತವೆಂದರೆ ಮಂಜುಳಾ ಬೆಂಕಿ ಅನಾಹುತದಲ್ಲಿ ಮೃತಪಟ್ಟಾಗ ಅವರ ಮೃತದೇಹವನ್ನು ತಂದಿದ್ದೇ ಶಂಕರ್ನಾಗ್ ಎಂದು ರವಿ ಬೆಳಗೆರೆಯವರು ಹಳೇ ದಿನಗಳನ್ನು ನೆನಪಿಸಿಕೊಂಡರು.
Comments are closed.