ಹೊಂಬಾಳೆ ಫಿಲಂಸ್.. ಅಂದಾಕ್ಷಣ ನೆನಪಾಗೋದೇ ವಿಶ್ವದ ಗಮನ ಸೆಳೆದ ಕೆಜಿಎಫ್ ಸಿನಿಮಾ. ಬರೀ ಕಮರ್ಷಿಯಲ್ ಸಿನಿಮಾಗಳಿಗೇ ಫಿಕ್ಸ್ ಆಗದ ಕನ್ನಡದ ಈ ನಂ.1 ಪ್ರೊಡಕ್ಷನ್ ಬ್ಯಾನರ್, ಸದ್ಯ ದೇಶಪ್ರೇಮ ಸಾರೋಕ್ಕೆ ಮುಂದಾಗಿದೆ. ಈ ಮೂಲಕ ದೇಶದ ಬಗ್ಗೆ ಅಭಿಮಾನ ಹಾಗೂ ಗೌರವ ಹೆಚ್ಚಿಸೋದ್ರ ಜೊತೆಗೆ ಸಾಮಾಜಿಕ ಸೇವೆಗೂ ಕೈಹಾಕಿದೆ.
ವಿಜಯ್ ಕಿರಗಂದೂರು.. ಬರೀ ಬ್ಯುಸಿನೆಸ್ಗೆ ಮಾತ್ರ ಸೀಮಿತವಾಗಿದ್ದ ಈ ವ್ಯಕ್ತಿ, ಯಾವಾಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರೋ, ಅಂದಿನಿಂದಲೇ ಅವ್ರ ಸಿನಿಮಾ ಪ್ರೀತಿಗೆ ಪ್ರೇಕ್ಷಕ ಶರಣಾಗಿಬಿಟ್ಟ. 2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ತಮ್ಮ ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ನಿನ್ನಿಂದಲೇ ಅನ್ನೋ ಸಿನಿಮಾ ಮಾಡಿದ್ರು.
ನಿನ್ನಿಂದಲೇ ನಿರೀಕ್ಷೆ ಮಟ್ಟ ತಲುಪಲಿಲ್ಲವಾದ್ದರಿಂದ, ಅದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾಗೆ ಮುಂದಾದ್ರು. ಅದೂ ಸಹ ವಿಮರ್ಶಾತ್ಮಕವಾಗಿ ಅಷ್ಟಕ್ಕಷ್ಟೆ ಎನ್ನುವಂತಾಯಿತು. ಕಮರ್ಷಿಯಲಿ ಸಕ್ಸಸ್ ಆದ್ರೂ ಸಹ, ಬ್ಯಾನರ್ಗೆ ಬ್ಲಾಕ್ ಬಸ್ಟರ್ ಹಿಟ್ ಅನ್ನೋ ಪಟ್ಟ ಸಿಗಲೇ ಇಲ್ಲ. ಅಷ್ಟಕ್ಕೇ ಸುಮ್ಮನಾಗದ ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರು, ಎಲ್ಲಿ ಕಳೆದುಕೊಂಡೆವೋ ಅಲ್ಲೇ ಹುಡುಕಬೇಕು ಅನ್ನೋ ಸಿದ್ದಾಂತವನ್ನ ಪಾಲಿಸಿದ್ರು.
ಸೋಲೇ ಗೆಲುವಿನ ಸೋಪಾನ ಅನ್ನೋ ಹಾಗೇ, ವಿಜಯ್ ಕಿರಗಂದೂರು ಎರಡು ಸಿನಿಮಾಗಳ ನಂತ್ರ ಮತ್ತೆ ಮಾಯಾಲೋಕದಲ್ಲಿ ತಮ್ಮ ಓಟ ಮುಂದುವರೆಸಿ, ಅದೇ ಪುನೀತ್ ಹಾಗೂ ಯಶ್ ಜೊತೆ ಗೆಲುವಿನ ಸಿಂಚನ ಬೀರಿದರು. ರಾಜಕುಮಾರ ಹಾಗೂ ಕೆಜಿಎಫ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸಾರ್ವಕಾಲಿಕ ದಾಖಲೆಗಳನ್ನ ಬರೆಯೋ ಮೂಲಕ ಫಿಲ್ಮ್ ಮೇಕರ್ಗಳಿಗೆ ಹೊಂಬಾಳೆ ಫಿಲಂಸ್ ಬ್ಯಾನರ್ ರೋಲ್ ಮಾಡೆಲ್ ಆಗಿ ಪರಿಣಮಿಸಿತು.
ಸಿನಿಮೇತರವಾಗಿಯೂ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು. ಇದಕ್ಕೆ ಕಳೆದ ವರ್ಷಾಂತ್ಯದಲ್ಲಿ ಮಂಡ್ಯದ ಪಾಂಡವಪುರ ಬಸ್ ದುರಂತ ಸಾಕ್ಷಿ. ಅಂದು ಅಲ್ಲಿ ಅಸುನೀಗಿದ ಕುಟುಂಬಗಳಿಗೆ ಕೆಜಿಎಫ್ ನಿರ್ಮಾಪಕರು ಸಹಾಯಹಸ್ತ ನೀಡಿದ್ದರು. ಇದೀಗ ಅವ್ರ ಹಾದಿಯಲ್ಲೇ ಅವ್ರ ಪತ್ನಿ ಶೈಲಜಾ ಕಿರಗಂದೂರು ಕೂಡ ಸಾಮಾಜಿಕ ಕೆಲಸಗಳಿಗೆ ಮುಂದಾಗಿದ್ದಾರೆ.
73ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶಪ್ರೇಮ ಸಾರೋ ಅಂತಹ ಮಕ್ಕಳ ಆಲ್ಬಮ್ ಹಾಡೊಂದನ್ನ ಲಾಂಚ್ ಮಾಡಿರೋ ಶೈಲಜಾ ಕಿರಗಂದೂರು, ಸಮಾಜಮುಖಿ ಕೆಲಸಕ್ಕೂ ಮುಂದಾಗಿದ್ದಾರೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಸಾಥ್ ಕೊಟ್ಟಿರೋದು ವಿಶೇಷ.
ಇನ್ನು ಹಾಡೊಂದನ್ನ ರಿಲೀಸ್ ಮಾಡಿ ಕೈತೊಳೆದುಕೊಳ್ಳದ ಶೈಲಜಾ ಕಿರಗಂದೂರು, ತಮ್ಮ ಊರಿನ ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಮುಂದಾಗಿರೋದು ಗಮನಾರ್ಹ ವಿಷಯವೇ ಸರಿ. ಹೌದು, ಅಳಿವಿನ ಅಂಚಿನಲ್ಲಿರೋ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಶಿಥಿಲಾವಸ್ಥೆಯ್ಲಲಿವೆ. ಅದ್ರಲ್ಲೂ 200ಕ್ಕೂ ಅಧಿಕ ಮಕ್ಕಳಿರೋ ತಮ್ಮದೇ ಕಿರಗಂದೂರು ಶಾಲೆಯ ಸ್ಥಿತಿ ನೋಡಿ, ಅದನ್ನ ಸರಿಪಡಿಸಲು ಶೈಲಜಾ ಪಣ ತೊಟ್ಟಿದ್ದಾರೆ.
ಒಟ್ಟಾರೆ, ಬರೀ ಹಣ ಮಾಡೋ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡೋ ಗಾಂಧಿನಗರದ ಫಿಲ್ಮ್ ಮೇಕರ್ಗಳ ಮುಂದೆ, ಇಂತಹ ಸಮಾಜಮುಖಿ ನಿರ್ಮಾಪಕರು ನಮ್ಮೊಂದಿಗಿರೋದು ನಿಜಕ್ಕೂ ಮೆಚ್ಚಲೇಬೇಕು.
Comments are closed.