ಮನೋರಂಜನೆ

ಪ್ರತಾಪ್ ಸಿಂಹಗೆ ನಟಿ ರಶ್ಮಿಕಾ ಮಂದಣ್ಣ ಧನ್ಯವಾದ

Pinterest LinkedIn Tumblr


ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿರುವ ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಈಗಾಗಲೇ ಅನೇಕ ಸ್ಯಾಂಡಲ್‍ವುಡ್ ಕಲಾವಿದರು ಬೆಂಬಲಿಸಿದ್ದು, ಇದೀಗ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ಈ ಅಭಿಯಾನದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಸಂಸದರ ಕಾರ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಧನ್ಯವಾದ ತಿಳಿಸಿದ್ದಾರೆ.

ಮೊದಲಿಗೆ ರಶ್ಮಿಕಾ ಮಂದಣ್ಣ, ‘ತುಂಬಾ ಮುಖ್ಯವಾಗಿ ಬೇಕಾಗಿರುವುದು ಅಂದರೆ ಅದು ಆಸ್ಪತ್ರೆ ಹಾಗೂ ನಮ್ಮ ಕೂರ್ಗ್ ನಲ್ಲಿ ಆಸ್ಪತ್ರೆ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರ ಪ್ರಯಾಣಿಸಬೇಕು. ಅದರ ಬದಲು ಕೊಡಗಿನಲ್ಲಿ ಆಸ್ಪತ್ರೆ ಇದ್ದರೆ ಜನರಿಗೆ ತುಂಬಾನೇ ಸಹಾಯವಾಗುತ್ತದೆ. ದಯವಿಟ್ಟು ಸ್ಪಂದಿಸಿ ಎಂದು ಸಿಎಂಗೆ ಟ್ಯಾಗ್ ಮಾಡಿ #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

ನಟಿ ರಶ್ಮಿಕಾ ಮಾತ್ರವಲ್ಲದೇ ಕಿಚ್ಚ ಸುದೀಪ್, ಶಿವಣ್ಣ, ಹರ್ಷಿಕಾ ಪೂಣ್ಣಚ್ಚ ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದೆಲ್ಲವನ್ನು ಗಮನಿಸಿದ ಸಂಸದ ಪ್ರತಾಪ್ ಸಿಂಹ ಅವರು, “ಕೊಡಗು ಆಸ್ಪತ್ರೆ ಅಭಿಯಾನ ಕುರಿತಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲೂ ಮನವಿ ಪತ್ರವನ್ನು ಬರೆದಿದ್ದೇನೆ. ಅಷ್ಟೇ ಅಲ್ಲದೇ ಈ ಅಭಿಯಾನಕ್ಕೆ ಮೋದಿಜೀ ಸರ್ಕಾರ ಕೂಡ ಸಂಪೂರ್ಣ ಸಹಕಾರ ನೀಡುತ್ತದೆಂಬ ಭರವಸೆಯನ್ನು ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ನಮ್ಮ ಮನವಿಯನ್ನು ಇಷ್ಟು ಬೇಗ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಸರ್. ಇದು ನಮಗೆ ತುಂಬಾ ಮುಖ್ಯವೆನಿಸುತ್ತದೆ” ಎಂದು ಪ್ರತಾಪ್ ಸಿಂಹ ಅವರ ಟ್ವೀಟನ್ನು ಟ್ಯಾಗ್ ಮಾಡಿ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.

ಕೊಡಗು ಕ್ಷೇತ್ರದಲ್ಲಿ ತುರ್ತು ಚಿಕಿತ್ಸೆಗಾಗಿ ಒಂದು ಹೈಟೆಕ್ ಆಸ್ಪತ್ರೆ ಅವಶ್ಯಕತೆ ಇದೆ ಎಂದು #WeNeedEmergencyHospitalInKodagu ಕೊಡಗು ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ಮೂಲಕ ಅಭಿಯಾನವೊಂದು ಆರಂಭವಾಗಿದೆ.

Comments are closed.