ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣವನ್ನು ಪೊಲೀಸರು ಬಿ-ಸಮರಿ ದಾಖಲಿಸಿದ್ದರು. ಈ ಕೇಸ್ ಕ್ಲೋಸ್ ಮಾಡಿದ್ದಕ್ಕೆ ನಟಿ ತನುಶ್ರೀ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ತನುಶ್ರೀ ದತ್ತಾ ಅವರ ವಕೀಲ ನಿತಿನ್ ಸತ್ಪುತೆ, ಸಮರಿ ರಿಪೋರ್ಟ್ ಬಗ್ಗೆ ನಮಗೆ ಓಸ್ವಿವರ್ ಪೊಲೀಸ್ ಠಾಣೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪೊಲೀಸರು ಬಿ ಅಥವಾ ಸಿ ಸಮರಿ ದಾಖಲಿಸಿಕೊಂಡರೆ ಅದು ಅಂತಿಮವಾಗುವುದಿಲ್ಲ. ಇದನ್ನು ನಾವು ನ್ಯಾಯಲಯದಲ್ಲಿ ನಿರಾಕರಿಸಬಹುದು. ಕೋರ್ಟ್ನಲ್ಲಿ ವಿಚಾರಣೆ ನಡೆದ ಮೇಲೆ ನ್ಯಾಯಾಲಯ ನಿರ್ಧಾರ ಮಾಡಿದರೆ, ಪೊಲೀಸರು ಮತ್ತೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ನಾನಾ ಪಾಟೇಕರ್ ಅವರನ್ನು ರಕ್ಷಿಸಲು ಪೊಲೀಸರು ಅಜಾಗರೂಕತೆ ತೋರಿದ್ದಾರೆ. ಅನೇಕ ಸಾಕ್ಷಿಗಳು ಇದ್ದರೂ ಸಹ ಅವರು ತಮ್ಮ ಹೇಳಿಕೆಯಲ್ಲಿ ಅದನ್ನು ದಾಖಲಿಸಲಿಲ್ಲ. ಶೈನಿ ಶೆಟ್ಟಿ ಹೇಳಿಯನ್ನು ಭಾಗಶಃ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಹಾಗಾಗಿ ನಾವು ಸಮರಿ ರಿಪೋರ್ಟ್ ತಿರಸ್ಕರಿಸುತ್ತಿದ್ದೇವೆ. ನಾವು ಬಾಂಬೈ ಹೈ ಕೋರ್ಟ್ನಲ್ಲಿ ರಿಟ್ ಪೆಟಿಶನ್ ದಾಖಲಿಸುತ್ತೇವೆ. ಅಲ್ಲದೆ ಈ ಪ್ರಕರಣವನ್ನು ಸಿಐಡಿ ಅಥವಾ ಬೇರೆ ಕ್ರೈಂ ಬ್ರ್ಯಾಂಚ್ಗೆ ವರ್ಗಾಯಿಸಲು ಹೇಳಿದ್ದೇವೆ ಎಂದು ವಕೀಲ ನಿತಿನ್ ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ವರ್ಷ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಈ ಸಂಬಂಧ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಕೈಬಿಟ್ಟಿದ್ದರು. ಈ ಮೂಲಕ ಭಾರತದಲ್ಲಿನ ಮೊದಲ ಮೀಟೂ ಪ್ರಕರಣ ಸೋಲು ಕಂಡಿತ್ತು.
ಕಳೆದ ವರ್ಷ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ವಿರುದ್ಧ ತಮ್ಮ ಚಿತ್ರ `ಹಾರ್ನ್ ಓಕೆ ಪ್ಲೀಸ್’ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಆರೋಪಿಸಿದ್ದರು. ಡ್ಯಾನ್ಸ್ ಮಾಡುವ ವೇಳೆ ನನಗೆ ಮುಜುಗರವಾಗುವಂತ ಸ್ಟೆಪ್ಸ್ಗಳನ್ನು ಹಾಕಲು ಒತ್ತಾಯಿಸುತ್ತಿದ್ದರು ಎಂದು ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ, ದೂರು ನೀಡಿದ್ದರು. ಅಲ್ಲದೆ ಈ ರೀತಿ ಕಿರುಕುಳ ಕೊಟ್ಟಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೂಡ ಕೇಳಿರಲಿಲ್ಲ. ಬಳಿಕ ತನುಶ್ರೀ ಅವರು ಚಿತ್ರದಿಂದ ಹೊರನಡೆದಿದ್ದರು. ಬಳಿಕ ರಾಖಿ ಸಾವಂತ್ ಆ ಹಾಡಿಗೆ ನಾನಾ ಪಾಟೇಕರ್ ಜೊತೆ ಹೆಜ್ಜೆ ಹಾಕಿದ್ದರು.
Comments are closed.