ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇದೇ 16ರಂದು ನಡೆಯಲಿದ್ದು, ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ. ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯ, ನನ್ನ ಹುಟ್ಟುಹ್ಬಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದುಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್ಗಳನ್ನೇ ಬಳಸಿ. ವಂದನೆಗಳೊಂದಿಗೆ ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್” ಎಂದು ಪತ್ರವನ್ನು ಹಾಕಿದ್ದಾರೆ
ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅಪ್ಪಾಜಿ ತಮ್ಮಿಂದ ದೂರವಾದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆ ಕೊಡುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂ ಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ಈಡೇರಿಸುತ್ತೀರಿ ಎನ್ನವ ನಂಬಿಕೆ ಇದೆ ಎಂದು ಪೋಸ್ಟ್ ಮಾಡಿದ್ದರು.
Comments are closed.