ಮನೋರಂಜನೆ

ಅಬ್ಬರ, ಆಡಂಬರ ಇಲ್ಲದ ಗಂಭೀರ ಚಿತ್ರ

Pinterest LinkedIn Tumblr


ಬೆಳ್ಳಂಬೆಳಿಗ್ಗೆ ನಗರದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಾಲ್ಕು ಜನ ಮೃತಪಟ್ಟು, ಒಬ್ಬರ ಕಾಲು ಮುರಿದಿದೆ … “ಇದೀಗ ಬಂದ ಸುದ್ದಿ’ ಚಿತ್ರವು ಶುರುವಾಗುವುದು ಇಂಥದ್ದೊಂದು ದುರ್ಘ‌ಟನೆಯಿಂದ. ಅವರೆಲ್ಲರೂ ತಮ್ತಮ್ಮ ಕೆಲಸದ ಸಲುವಾಗಿ ಮನೆಯಿಂದ ಬೆಳಿಗ್ಗೆ ಬೇಗ ಹೊರಟಿರುತ್ತಾರೆ. ಎಲ್ಲರೂ ಆ ಬಸ್‌ ಸ್ಟಾಂಡ್‌ನ‌ಲ್ಲಿ ಜಮೆಯಾಗುತ್ತಾರೆ. ಬಸ್‌ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಒಂದು ಕಾರು ಯರ್ರಾಬಿರ್ರಿ ವೇಗವಾಗಿ ಬರುವುದು ಕಾಣುತ್ತದೆ.

ಆ ಕಾರನ್ನು ಓಡಿಸುತ್ತಿರುವವನು ವಿಪರೀತ ಕುಡಿದು ಚಿತ್ತಾಗಿರುತ್ತಾನೆ. ಆ ನಶೆಯಲ್ಲೇ ನಾಲ್ಕು ಜನರನ್ನು ಸಾಯಿಸಿ, ಇನ್ನೊಬ್ಬಾಕೆಯ ಕಾಲು ಮುರಿದಿರುತ್ತಾನೆ. ತನಿಖೆ ಶುರುವಾಗುತ್ತದೆ. ಅವರನ್ನೆಲ್ಲಾ ಸಾಯಿಸಿದವ ಪ್ರಭಾವಶಾಲಿಯ ಮಗ. ಅವನು ಇನ್‌ಸ್ಪೆಕ್ಟರ್‌ ತಂದೆಯ ಮೇಲೆ ಪ್ರಭಾವ ಹಾಕಿ ಕೇಸ್‌ ಹಳ್ಳ ಹಿಡಿಸುವ ಪ್ರಯತ್ನ ಮಾಡುತ್ತಾನೆ. ಆ ಇನ್‌ಸ್ಪೆಕ್ಟರ್‌ಗೆ ಒಂದು ಕಡೆ ಪ್ರಭಾವಶಾಲಿಯ ಋಣ, ಇನ್ನೊಂದು ಕಡೆ ಸತ್ತವರ ಕುಟುಂಬಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ.

ಈ ಎರಡರಲ್ಲಿ ಆ ಇನ್‌ಸ್ಪೆಕ್ಟರ್‌ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ? “ಇದೀಗ ಬಂದ ಸುದ್ದಿ’ ಒಂದು ಸರ್‌ಪ್ರೈಸ್‌ ಚಿತ್ರ ಎಂದರೆ ತಪ್ಪಿಲ್ಲ. ಈ ವಾರ ಬಿಡುಗಡೆಯಾದ ನಾಲ್ಕು ಚಿತ್ರಗಳ ಪೈಕಿ ಅತೀ ಕಡಿಮೆ ನಿರೀಕ್ಷೆಯ ಚಿತ್ರ ಎಂದರೆ ಅದೇ. ಹಾಗಂತ ಕಡೆಗಣಿಸಿದರೆ, ಒಂದೊಳ್ಳೆಯ ಚಿತ್ರ ಮಿಸ್‌ ಮಾಡಿಕೊಂಡಂತೆ. ಈ ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳಿಲ್ಲ, ದೊಡ್ಡ ಬಜೆಟ್‌ ಇಲ್ಲ ಅಥವಾ ದೊಡ್ಡ ಮಟ್ಟದಲ್ಲಿ ಪ್ರಚಾರ ಸಹ ಮಾಡಿಲ್ಲ. ಇಲ್ಲೊಂದು ಒಳ್ಳೆಯ ಸಂದೇಶವಿದೆ.

ಆ ಸಂದೇಶವನ್ನು ಹೇಳುವುದಕ್ಕೆ ಒಂದಿಷ್ಟು ಕುಟುಂಬದ ಕಥೆಗಳನ್ನು ಹೇಳಲಾಗಿದೆ. ಇಲ್ಲಿ ಅಬ್ಬರವಾಗಲೀ, ಆಡಂಬರವಾಗಲೀ ಇಲ್ಲ. ಒಂದು ಅಪಘಾತವು ಬರೀ ಒಂದಿಷ್ಟು ಜನರನ್ನು ಸಾಯಿಸುವುದಷ್ಟೇ ಅಲ್ಲ, ಅವರ ಸುತ್ತಮುತ್ತಲಿನ ಜನರ ಕನಸನ್ನು ಹೇಗೆ ಛಿದ್ರಗೊಳಿಸುತ್ತದೆ, ಹೇಗೆ ಅವರ ಮನಸ್ಸಿಗೆ ಆಳವಾದ ಆಘಾತ ನೀಡುತ್ತದೆ ಎಂಬುದನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ಎಸ್‌.ಆರ್‌. ಪಾಟೀಲ್‌. ಅಪಘಾತಗಳ ಕುರಿತು ಹಲವು ಚಿತ್ರಗಳು ಇದುವರೆಗೂ ಬಂದಿವೆ.

ಆದರೆ, ಎಸ್‌.ಆರ್‌. ಪಾಟೀಲ್‌ ಇಡೀ ಘಟನೆಯನ್ನು ಬೇರೆ ತರಹ ನೋಡುವ ಪ್ರಯತ್ನವನ್ನು ಮಾಡಿದ್ದಾರೆ. ಇಲ್ಲಿ ಬರೀ ಅಪಘಾತ, ಆ ನಂತರದ ವಶೀಲಿಬಾಜಿಯಷ್ಟೇ ಮುಖ್ಯವಲ್ಲ, ಸತ್ತಿರುವವರ ಕುಟುಂಬದವರ ನೋವಿನ ಜೊತೆಗೆ, ಅಪಘಾತ ಮಾಡಿದವರ ಮನಸ್ಥಿತಿಯನ್ನು ಸಹ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಅವರು ಯಾವುದೇ ದೊಡ್ಡ ಸಂದೇಶ ಇಟ್ಟುಕೊಂಡು ಪಾಠ ಮಾಡುವುದಕ್ಕೆ ಹೋಗಿಲ್ಲ.

ಕುಡಿದು ವಾಹನ ಚಲಾಯಿಸಬೇಡಿ ಮತ್ತು ಎಲ್ಲರೂ ತಮ್ಮ ಸಾಮಾಜಿ ಜವಾಬ್ದಾರಿಯನ್ನು ಅರಿತುಕೊಳ್ಳಿ ಎಂಬ ಸಣ್ಣ ಸಂದೇಶವನ್ನು ಮನಮುಟ್ಟುವಂತೆ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ. ಬಹುಶಃ ಈ ಚಿತ್ರದ ಬಗ್ಗೆ ಬರುವ ಪ್ರಮುಖ ಅಪಸ್ವರ ಎಂದರೆ, ಚಿತ್ರವನ್ನು ಬೇರೆ ತರಹ ಮುಗಿಸಬಹುದಿತ್ತು ಎಂದು. ಅದು ಬಿಟ್ಟರೆ, ಚಿತ್ರದ ಬಗ್ಗೆ ತಪ್ಪು ಹುಡುಕುವುದು ಕಷ್ಟ. ಅಷ್ಟು ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ ಪಾಟೀಲ್‌. ಚಿತ್ರದಲ್ಲಿ ಅವರು ಒಂದೇ ಒಂದು ಅನವಶ್ಯಕ ಎಂಬ ಮಾತು, ದೃಶ್ಯ ಸೇರಿಸುವುದಿಲ್ಲ.

ಎಷ್ಟು ಬೇಕೋ ಅಷ್ಟು ಮತ್ತು ಅದನ್ನೂ ಬೇರೆ ತರಹ ನಿರೂಪಿಸುವುದಕ್ಕೆ ಪ್ರಯತ್ನಿಸಿದ್ದಾರೆ ಅವರು. ಒಂದು ಕುಟುಂಬದ ಕಥೆ ಹೇಳುತ್ತಲೇ, ಅಲ್ಲೊಂದು ದೃಶ್ಯ ತೋರಿಸುತ್ತಲೇ, ಅದರ ಮುಂದುವರೆದ ಭಾಗವಾಗಿ ಇನ್ನೊಂದು ಕುಟುಂಬದ ಕಥೆಯನ್ನು ಶುರು ಮಾಡುತ್ತಾರೆ. ಇಲ್ಲಿ ಬರೀ ಚಿತ್ರಕಥೆಯಷ್ಟೇ ಅಲ್ಲ, ಛಾಯಾಗ್ರಹಣ ಮತ್ತು ಸಂಕಲನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಮತ್ತು ಛಾಯಾಗ್ರಾಹಕ ಸತೀಶ್‌ ರಾಜೇಂದ್ರನ್‌ ಹಾಗೂ ಸಂಕಲನಕಾರ ನವೀನ್‌ ಕುಮಾರ್‌ ಕೆಲಸವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಎರಿಕ್‌ ಜಾನ್ಸನ್‌ ಹಿನ್ನೆಲೆ ಸಂಗೀತ ಸಹ ಗಮನಸೆಳೆಯುತ್ತದೆ. ಚಿತ್ರದಲ್ಲಿ ಎಲ್ಲಾ ಹೊಸ ಮುಖಗಳೇ. ಅದ್ಭುತ ಅಂತಲ್ಲದಿದ್ದರೂ ಎಲ್ಲರಿಂದ ಗಮನಸೆಳೆಯುವ ಅಭಿನಯವನ್ನು ತೆಗೆಸಿದ್ದಾರೆ ಪಾಟೀಲ್‌. ಆ ಮಟ್ಟಿಗೆ ಎಲ್ಲರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಚಿತ್ರ: ಇದೀಗ ಬಂದ ಸುದ್ದಿ
ನಿರ್ಮಾಣ: ಎಸ್‌.ಆರ್‌. ಪಾಟೀಲ್‌
ನಿರ್ದೇಶನ: ಎಸ್‌.ಆರ್‌. ಪಾಟೀಲ್‌
ತಾರಾಗಣ: ಬಲರಾಮ್‌, ಮಾಧವ್‌, ಶಿವಕುಮಾರ್‌, ಕಾವ್ಯ, ಲೋಕೇಶ್ವರಿ ಮುಂತಾದವರು

* ಚೇತನ್‌ ನಾಡಿಗೇರ್‌

-Udayavani

Comments are closed.