ಮನೋರಂಜನೆ

ಸಾಮಾನ್ಯ ಸ್ಟೋರಿಗೆ ಪುನೀತ್‌ ನಟನೆಯೇ ಟಾನಿಕ್‌: ಅಂಜನಿಪುತ್ರ ಚಿತ್ರ ವಿಮರ್ಶೆ

Pinterest LinkedIn Tumblr


ಕಲಾವಿದರು: ಪುನೀತ್‍ರಾಜ್‍ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಕೃಷ್ಣ, ಸಾಧುಕೋಕಿಲ, ಚಿಕ್ಕಣ್ಣ, ರವಿಶಂಕರ್, ಮುಖೇಶ್ ತಿವಾರಿ ಅಖಿಲೇಶ್, ವಿಜಯಕಾಶಿ, ಗಿರಿ, ಹರಿಣಿ, ಶಂಕರ್ ನಾರಾಯಣ್.
ನಿರ್ದೇಶಕಎ ಹರ್ಷ
ಚಿತ್ರದ ವಿಧDrama
ಅವಧಿ2 hrs. 19 Min.

*ಹರೀಶ್‌ ಬಸವರಾಜ್‌

ಪುನೀತ್‌ ರಾಜ್‌ಕುಮಾರ್‌ ಚಿತ್ರಗಳೆಂದರೆ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿರುತ್ತದೆ. ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ನಿರ್ಮಿಸಿದ ‘ರಾಜಕುಮಾರ’ ಚಿತ್ರದ ನಂತರ, ಪುನೀತ್‌ ಅಭಿನಯದ ‘ಅಂಜನಿಪುತ್ರ’ ಬಿಡುಗಡೆಯಾಗಿದೆ. ಅಂಜನಿಪುತ್ರ ತಮಿಳಿನ ‘ಪೂಜೈ’ ಸಿನಿಮಾದ ರೀಮೇಕ್‌ ಚಿತ್ರವಾದರೂ, ಪುನೀತ್‌ ಅವರ ಇಮೇಜ್‌ಗೆ ತಕ್ಕಂತೆ ಚಿತ್ರಕತೆ ಮಾಡಿದ್ದಾರೆ ನಿರ್ದೇಶಕ ಹರ್ಷ.

ಒಂದು ಕುಟುಂಬ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬಂದಿದ್ದು, ಕಥಾನಾಯಕ ಆ ಕುಟುಂಬದ ಗೌರವ ಉಳಿಸಲು ಖಳನನ್ನು ಸದೆಬಡಿವ ಸಾಮಾನ್ಯ ಕತೆ ಇಲ್ಲಿದೆ. ಆದರೆ, ಈ ಚಿತ್ರ ಇಷ್ಟವಾಗುವುದು ಪುನೀತ್‌ರ ಲವಲವಿಕೆಯ ನಟನೆ ಮತ್ತು ವೇಗವಾಗಿ ಓಡುವ ಚಿತ್ರಕತೆಯಿಂದ. ವಿರಾಜ್‌ (ಪುನೀತ್‌) ಮಾರುಕಟ್ಟೆಯಲ್ಲಿ ಬಡ್ಡಿ ವ್ಯವಹಾರ ಮಾಡುವ ಯುವಕ. ಅಲ್ಲಿ ಅಚಾನಕ್ಕಾಗಿ ಹುಡುಗಿ ಭೇಟಿಯಾಗುತ್ತಾಳೆ. ಅವಳ ಮೇಲೆ ಲವ್‌ ಶುರುವಾಗುತ್ತದೆ. ಮೊದ ಮೊದಲು ವಿರಾಜ್‌ನನ್ನು ಮಾಮೂಲಿ ಯುವಕ ಎಂದು ಮೂದಲಿಸುವ ಆ ಹುಡುಗಿ, ಸೂಕ್ಷ್ಮ ಘಟನೆಯನ್ನು ಅವನು ನಿರ್ವಹಿಸುವ ರೀತಿಯನ್ನು ಕಂಡು ಫಿದಾ ಆಗುತ್ತಾಳೆ. ನಂತರ ಅವರಿಬ್ಬರೂ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಾರೆ ಎನ್ನುವಷ್ಟರಲ್ಲಿ ಕತೆ ಹಳ್ಳಿಗೆ ತಿರುಗುತ್ತದೆ. ಅದುವರೆಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದ ವಿರಾಜ್‌ ಶ್ರೀಮಂತ ಕುಟುಂಬದ ಕಣ್ಮಣಿ ಎನ್ನುವುದು ಹಳ್ಳಿಗೆ ಹೋದ ನಂತರ ಗೊತ್ತಾಗುತ್ತಿದೆ. ತನ್ನದಲ್ಲದ ತಪ್ಪಿಗೆ ಕುಟುಂಬ ತೊರೆದಿದ್ದ ಈತ ಬಡ್ಡಿ ವ್ಯವಹಾರಕ್ಕೆ ಇಳಿದಿರುವ ವಿಷಯ ಗೊತ್ತಾಗುತ್ತದೆ. ಈ ವಿರಾಜ್‌ ಯಾರು, ಅವನ್ಯಾಕೆ ಮನೆಯಿಂದ ಬೇರೆಯಾಗಿದ್ದ, ಮತ್ತೆ ಅವನು ತನ್ನ ಕುಟುಂಬವನ್ನು ಹುಡುಕಿಕೊಂಡು ಬಂದಿದ್ದು ಯಾಕೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಮೂಲ ಕತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪುನೀತ್‌ ಅಭಿಮಾನಿಗಳಿಗಾಗಿ ಚಿತ್ರಕತೆಯಲ್ಲಿ ಕೊಂಚ ಬದಲಿಸಿಕೊಂಡಿದ್ದಾರೆ ನಿರ್ದೇಶಕರು. ಚೇತನ್‌ ಕುಮಾರ್‌ ಮತ್ತು ರಘು ನಿಡುವಳ್ಳಿ ಬರೆದ ಸಂಭಾಷಣೆ ಅಭಿಮಾನಿಗಳ ಶಿಳ್ಳೆಗೆ ಸಾಕ್ಷಿಯಾಗಿವೆ. ಸ್ವಾಮಿ ಅವರ ಸಿನಿಮಾಟೋಗ್ರಫಿಯಿಂದಾಗಿ ಚಿತ್ರ ಗಮನ ಸೆಳೆಯುತ್ತದೆ. ಸಾಮಾನ್ಯವಾಗಿ ಪುನೀತ್‌ ಸಿನಿಮಾದಲ್ಲಿ ಗುನುಗುವ ಹಾಡುಗಳು ಇರುತ್ತಿದ್ದವು. ಅಂಜನಿಪುತ್ರದಲ್ಲಿ ಹೇಳಿಕೊಳ್ಳುವಂತಹ ಸಾಂಗ್ಸ್‌ ನೀಡಿಲ್ಲ ಸಂಗೀತ ನಿರ್ದೇಶಕ ರವಿ ಬಸ್ರೂರು.

ಎಂದಿನಂತೆ ಪುನೀತ್‌ ತಮ್ಮ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಡಾನ್ಸ್‌, ಫೈಟ್ಸ್‌, ಭಾವುಕತೆ ಸೂಪರ್‌. ಬಿಲ್ಡಪ್‌ ಡೈಲಾಗ್ಸ್‌ ಅನ್ನು ಅಷ್ಟೇ ಸಮರ್ಥವಾಗಿ ಹೊಡೆದಿದ್ದಾರೆ. ಮೂಲ ಸಿನಿಮಾದಲ್ಲಿ ರಾಧಿಕಾ ಶರತ್‌ ಕುಮಾರ್‌ ನಟನೆಗೆ, ರಮ್ಯಕೃಷ್ಣರನ್ನು ಹೋಲಿಸಿದರೆ ಸ್ವಲ್ಪ ಡಲ್‌. ಕಥಾ ನಾಯಕಿ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಮುಖೇಶ್‌ ತಿವಾರಿ ಮತ್ತು ಅಖಿಲೇಂದ್ರ ಮಿಶ್ರಾ ಖಳರಾಗಿ ಅದ್ಭುತ ಪರ್ಫಾಮೆನ್ಸ್‌ ನೀಡಿದ್ದಾರೆ. ಧರ್ಮಣ್ಣ ಕಡೂರು, ಮಿತ್ರ, ಚಿಕ್ಕಣ್ಣ ಹೀಗೆ ಸಾಕಷ್ಟು ಹಾಸ್ಯ ಕಲಾವಿದರ ದಂಡು ನಗಿಸುವಲ್ಲಿ ಯಶಸ್ವಿಯಾದರೂ, ಕೆಲವೆಡೆ ಅನವಶ್ಯಕವಾಗಿ ಹಾಸ್ಯ ದೃಶ್ಯಗಳನ್ನು ತುರುಕಿದಂತೆ ಅನಿಸುತ್ತದೆ. ಕಮರ್ಷಿಯಲ್‌ ಆಗಿ ಮೂಡಿ ಬಂದಿರುವ ಈ ಅಂಜನಿಪುತ್ರನನ್ನು ಒಮ್ಮೆ ಕುಟುಂಬ ಸಮೇತರಾಗಿ ದರ್ಶನ ಮಾಡಿಕೊಂಡು ಬರಬಹುದು.

Comments are closed.