ಬೆಂಗಳೂರು: ಪ್ರತಿ ವಾರಾಂತ್ಯ ಬಂದರೆ ಸಾಕು, ‘ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ’ ಎಂಬ ಪ್ರಶ್ನೆಯೇ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಕೊರೆಯುತ್ತಿರುತ್ತದೆ. ಅಷ್ಟರಮಟ್ಟಿಗೆ ಹವಾ ಮಾಡುತ್ತಿದೆ ‘ಬಿಗ್ಬಾಸ್’ ರಿಯಾಲಿಟಿ ಶೋ. ಈ ವಾರ ಒಂದು ಅಚ್ಚರಿ ಕಾದಿತ್ತು.
ಎಲಿಮಿನೇಷನ್ ಇಲ್ಲದೆಯೂ ಸ್ಪರ್ಧಿ ತೇಜಸ್ವಿನಿ ಪ್ರಕಾಶ್ ‘ಬಿಗ್ಬಾಸ್’ ಮನೆಯಿಂದ ಆಚೆ ಬಂದಿದ್ದರು! ಅರೆ, ಏನಾದರೂ ಕಿರಿಕ್ ಮಾಡಿಕೊಂಡರೇ? ಆಟದ ನಿಯಮಗಳನ್ನು ಮೀರಿ ವರ್ತಿಸಿದರೇ? ಹಾಗೇನೂ ಆಗಿಲ್ಲ. ತಂದೆಗೆ ಹುಷಾರಿಲ್ಲದ ಕಾರಣ ಅವರು ಮನೆಬಿಟ್ಟು ಬರುವುದು ಅನಿವಾರ್ಯ ಆಗಿತ್ತಂತೆ. ತೇಜಸ್ವಿನಿ ‘ಬಿಗ್ಬಾಸ್’ ರಿಯಾಲಿಟಿ ಶೋನಿಂದ ಹೊರನಡೆದಿದ್ದಾರೆ ಎಂಬ ಗುಸುಗುಸು ಹಬ್ಬುತ್ತಿದ್ದಂತೆಯೇ ಅನೇಕರಲ್ಲಿ ಕುತೂಹಲ ಉಂಟಾಗಿತ್ತು.
ಹಾಗಾದರೆ ಮತ್ತೆ ಅವರು ಮನೆಯೊಳಗೆ ಬರುತ್ತಾರೋ ಇಲ್ಲವೋ ಎಂಬ ಅನುಮಾನವೂ ಕಾಡಿತ್ತು. ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದರಿಂದ ‘ಬಿಗ್ ಬಾಸ್’ ಅಖಾಡಕ್ಕೆ ತೇಜಸ್ವಿನಿ ರಿ-ಎಂಟ್ರಿ ನೀಡಿದ್ದಾರೆ. ‘ಸ್ಪರ್ಧಿಗಳಿಗೆ ಅಥವಾ ಅವರ ಕುಟುಂಬದವರಿಗೆ ತೀವ್ರ ಅನಾರೋಗ್ಯ ಉಂಟಾದರೆ ಅವರನ್ನು ಮನೆಯಿಂದ ಹೊರಗೆ ಕಳಿಸುವ ಅವಕಾಶ ಈ ರಿಯಾಲಿಟಿ ಶೋನಲ್ಲಿದೆ. ಈಗ ತೇಜಸ್ವಿನಿ ಅವರು ಮತ್ತೆ ‘ಬಿಗ್ಬಾಸ್’ ಮನೆಗೆ ವಾಪಸಾಗಿದ್ದಾರೆ.
ಅಂದಹಾಗೆ, ಪ್ರಸ್ತುತ ಕನ್ನಡ ‘ಬಿಗ್ಬಾಸ್’ ಐದನೇ ಸರಣಿ ನಡೆಯುತ್ತಿದೆ. ಅನಿವಾರ್ಯ ಕಾರಣದಿಂದ ಸ್ಪರ್ಧಿಯೊಬ್ಬರು ಹೊರಬಂದು, ಮತ್ತೆ ಒಳಗೆ ಹೋಗಿರುವುದು ಈ ಐದು ಸರಣಿಗಳಲ್ಲಿ ಇದೇ ಮೊದಲು. ತೆಲುಗು ಮತ್ತು ಹಿಂದಿ ಬಿಗ್ಬಾಸ್ನಲ್ಲಿ ಈ ಹಿಂದೆ ಇಂಥ ಘಟನೆಗಳು ನಡೆದಿದ್ದವು.
ಈ ವಾರ ಮನೆಯಲ್ಲಿ ಹೊರಹೋಗಲು ನಾಮಿನೇಟ್ ಆದ ಸದಸ್ಯರು; ಸಮೀರಾ ಆಚಾರ್ಯ, ಜಯ ಶ್ರೀನಿವಾಸನ್, ನಿವೇದಿತಾ, ಜಗನ್ನಾಥ್, ಚಂದ್ರ ಶೇಖರ್, ತೇಜಸ್ವಿನಿ, ಕಾರ್ತಿಕ್ ಹಾಗು ಅನುಪಮಾ. ಇವರಲ್ಲಿ ಯಾರು ಹೊರಗೆ ಹೋಗುತ್ತಾರೆ..?
Comments are closed.