ಮನೋರಂಜನೆ

ಬಿಗ್ ಬಾಸ್’ಗೆ ನನ್ನನ್ನು ವಾಪಾಸ್ ಕರೆಯದಿದ್ದರೆ ಗ್ರ್ಯಾಂಡ್ ಫಿನಾಲೆ ನಡೆಸಲು ಬಿಡಲ್ಲ: ಬೆದರಿಕೆ ಹಾಕಿದ ಓಂ ಸ್ವಾಮಿ!

Pinterest LinkedIn Tumblr

ಮುಂಬೈ: ಹಿಂದಿಯ ಬಿಗ್ ಬಾಸ್ ಶೋನಲ್ಲಿ ಟಾಸ್ಕ್ ನಡೆಯುತ್ತಿದ್ದ ವೇಳೆ ಪ್ರತಿಸ್ಪರ್ಧಿಗಳ ಮೇಲೆ ಮೂತ್ರವೆರಚಿ ವಿವಾದ ಸೃಷ್ಟಿಸಿದ್ದ ಸ್ವಾಮಿ ಓಂರನ್ನು ಬಿಗ್ ಮನೆಯಿಂದ ಶುಕ್ರವಾರದಂದು ಭದ್ರತಾ ಸಿಬ್ಬಂದಿಗಳು ಹೊರದಬ್ಬಿದ್ದರು. ಈ ಮೂಲಕ ಹಿಂದಿ ಬಿಗ್ ಓಂ ಸ್ವಾಮಿ ಈವರೆಗಿನ ಬಾಸ್ ಶೋನಲ್ಲಿ ಕೆಟ್ಟ ವರ್ತನೆಗಾಗಿ ಹೊರ ಹಾಕಲ್ಪಟ್ಟ ಮೊದಲ ವ್ಯಕ್ತಿ ಇವರಾಗಿದ್ದಾರೆ. ಆದರೆ ಇದೀಗ ಹೊರ ಬಂದಿರುವ ಸ್ವಾಮಿ ಓಂ ಬಿಗ್ ಬಾಸ್ ವಿರುದ್ಧ ಕಿಡಿಕಾರಿದ್ದು, ಬೆದರಿಕೆಯನ್ನೂ ಒಡ್ಡಿದ್ದಾರೆ.

ಮೂತ್ರವೆರಚಿದ ಬಳಿಕ ತನ್ನ ನಡತೆಯನ್ನು ಸಮರ್ಥಿಸಿಕೊಂಡಿದ್ದ ಸ್ವಾಮಿ ಓಂ ತಾನ್ನನ್ನು ಬಿಗ್ ಮನೆಯಿಂದ ಹೊರಹಾಕುತ್ತಾರೆ ಎಂದು ತಿಳಿದಾಕ್ಷಣ ತಾನು ಎರಚಿದ್ದು ಮೂತ್ರವಲ್ಲ ಎಂದು ಮಾತು ಬದಲಿಸಿಕೊಂಡಿದ್ದರು. ಆದರೆ ಇದ್ಯಾವುದೂ ಅವರ ಉಪಯೋಗಕ್ಕೆ ಬೀಳಲಿಲ್ಲ, ಕೊನೆಗೂ ಅವರನ್ನು ಹೊರ ಹಾಕಲಾಯಿತು. ಆದರೆ ಈ ಬೆಳವಣಿಗೆಯ ನಂತರ ABP ನ್ಯೂಸ್ ನಿರ್ಮಾಪಕನ ನೇತೃತ್ವದಲ್ಲಿ ಕಲರ್ಸ್ ಚಾನೆಲ್ ಆಯೋಜಿಸುವ ಸಂದರ್ಶನದಲ್ಲಿ ಸ್ವಾಮಿ ಓಂ ಪಾಲ್ಗೊಂಡಿದ್ದರು. ಈ ವೇಳೆ ನಿರ್ಮಾಪಕ ದಿಬಾಂಗ್ ಸ್ವಾಮೀಜಿಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಸ್ವಾಮೀಜಿ ಕೂಡಾ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಧಮ್ಕಿ ಹಾಕಿದ್ದಾರೆ. ಅವರು ಹಾಕಿದ ಬೆದರಿಕೆ ಏನು ಇಲ್ಲಿದೆ ವಿವರ….

ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಓಂ ನಾನು ಬೇಕೆಂದೇ ಬಿಗ್ ಮನೆಯ ವಿಲನ್ ಆಗಿಲ್ಲ, ಪರಿಸ್ಥಿತಿ ನನ್ನನ್ನು ಹಾಗೆ ಮಾಡಿತು. ಮನೆಗೆ ಹೋಗುವ ಮೊದಲು ನನಗೆ ಬಿಗ್ ಬಾಸ್ ಮನೆ ಕುರಿತಾಗಿ ಕೊಂಚವೂ ತಿಳಿದಿರಲಿಲ್ಲ. ಜನರು ನನ್ನ ಬಳಿ ಏನಿಲ್ಲದಿದ್ದರೆ ಸಿಟ್ಟು ಮಾಡಿಕೊಳ್ಳಿ ಆಗ ನೀವು ಜಯಶಾಲಿಯಾಗುತ್ತೀರಿ ಎಂದಿದ್ದರು ಹೀಗಾಗಿ ನಾನು ಬೇರೆ ವಿಧಿ ಇಲ್ಲದೆ ಹೀಗೆ ವರ್ತಿಸಿದೆ ಎಂದು ಕಣ್ಣೀರಿಟ್ಟಿದ್ದಾರೆ. ಆದರೆ ಇದನ್ನು ಕಂಡ ನಿರ್ಮಾಪಕ ರಾಮರಾಜ್ಯ ಸ್ಥಾಪಿಸುತ್ತೇನೆ ಎಂಬ ಧ್ಯೇಯವಿಟ್ಟುಕೊಂಡು ಒಳಹೋದವರು ರಾವಣನಂತೆ ವರ್ತಿಸಿದ್ದು ಸರಿಯಲ್ಲ. ಈಗ ಇಲ್ಲಿ ಕುಳಿತು ‘ಓವರ್ ಆ್ಯಕ್ಟ್’ ಮಾಡಬೇಡಿ ಎಂದು ಬಾಯಿ ಮುಚ್ಚಿಸಿದರು.

ಆದರೆ ಇವರ ಈ ಮಾತಿಗೆ ಪ್ರತ್ಯುತ್ತರ ಎಂಬಂತೆ ಮಾತನಾಡಿದ ಸ್ವಾಮಿ ಓಂ ‘ನಿಮಗೆ ತಿಳಿದಿಲ್ಲ ಇನ್ಮುಂದೆ ನಾನು ಜಗತ್ತಿನ ಬಹುದೊಡ್ಡ ವಿಲನ್ ಆಗುತ್ತೇನೆ. ರಿಯಲ್ ಲೈಫ್’ನಲ್ಲಿ ಸಾಧ್ಯವಿಲ್ಲದಿದ್ದರೆ ರೀಲ್ ಲೈಫ್’ನಲ್ಲಾದರೂ ನಾನು ಇದನ್ನು ಸಾಧಿಸಿ ತೋರಿಸುತ್ತೇನೆ. ನಾನು ಸಿನಿಮಾಗೆ ಎಂಟ್ರಿ ಕೊಡುತ್ತೇನೆ’ ಎಂದು ತಿಳಿಸಿದರು.

ಸಂದರ್ಶನದ ಕೊನೆಯಲ್ಲಿ ಈ ಮನೆಯಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂದು ನಿಮಗನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ ಕುಪಿತಗೊಂಡ ಸ್ವಾಮಿ ಓಂ ‘ಇದಕ್ಕೆ ಉತ್ತರ ನೀಡುವುದಿಲ್ಲ. ನಾನು ಎರಡು ವಾರ ಕಾಯುತ್ತೇನೆ, ಎರಡು ವಾರದಷ್ಟು ಸಮಯ ಬಿಗ್ ಬಾಸ್’ಗೆ ನೀಡುತ್ತೇನೆ. ಇಷ್ಟರಲ್ಲಿ ನನ್ನನ್ನು ಮನೆಗೆ ವಾಪಾಸ್ ಕರೆಸಿಕೊಳ್ಳದಿದ್ದರೆ ಬಿಗ್ ಬಾಸ್ ಶೋನ ಗ್ರ್ಯಾಂಡ್ ಫಿನಾಲೆ ನಡೆಯಲು ಖಂಡಿತವಾಗಿಯೂ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ.

ಅದೇನೇ ಇರಲಿ ಹೊರ ಪ್ರಪಂಚದಲ್ಲಿ ಅಧ್ಯಾತ್ಮ, ಜೋತಿಷ್ಯ ಎಂದು ಜನರ ಭಾವನೆಯೊಂದಿಗೆ ಆಟವಾಡುತ್ತಿದ್ದ ಸ್ವಾಮೀಜಿಯೊಬ್ಬರ ಅಸಲಿ ಮುಖ ಬಿಗ್ ಬಾಸ್’ನಲ್ಲಿ ಅನಾವರಣವಾಗಿದೆ. ರಾಮರಾಜ್ಯ ಸ್ಥಾಪಿಸುತ್ತೇನೆಂದು ಒಳ ಹೋದವರು, ಕೇವಲ ಕ್ಯಾಪ್ಟೆನ್ಸಿಗಾಗಿ ತೀರಾ ಕೀಳು ಮಟ್ಟಕ್ಕಿಳಿದು ರಾವಣ ಎನಿಸಿಕೊಂಡಿದ್ದಾರೆ. ಇನ್ನು ಇವರ ಮಾತು, ವರ್ತನೆ ಹಾಗೂ ಸಂದರ್ಶನವನ್ನು ನೋಡಿದರೆ ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತವಿಲ್ಲ ಹಾಗೂ ತೀರಾ ಅಸಂಭದ್ದವಾಗಿ ಮಾತನಾಡುವುದು ಸ್ಪಷ್ಟವಾಗುತ್ತದೆ.

ಇನ್ನು ಇವರು ಒಡ್ಡಿರುವ ಬೆದರಿಕೆ ಕುರಿತಾಗಿ ಹೇಳಬೇಕೆಂದರೆ ಅದೆಷ್ಟು ನಿಜ ಹಾಗೂ ಸುಳ್ಳು ಎಂಬುವುದು ಬಿಗ್ ಬಾಸ್’ನ ಗ್ರ್ಯಾಂಡ್ ಫಿನಾಲೆಯಂದು ತಿಳಿಯಲಿದೆ.

Comments are closed.