ಅದು ಕನಕಪುರ. ಅಲ್ಲಿ ಶ್ರೀ ಕಂಕೇರಮ್ಮ ದೇವಿ ಜಾತ್ರೆ ನಡೆಯುತ್ತಿತ್ತು. ಆ ಜಾತ್ರೆ ನಡುವೆಯೇ ಸಿನಿಮಾ ಹಬ್ಬವೂ ಇತ್ತು! ಅಂದರೆ, ಕನಕಪುರ ಶ್ರೀನಿವಾಸ್ ತಮ್ಮ ನಿರ್ಮಾಣದ “ದನ ಕಾಯೋನು’ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ತಮ್ಮೂರಲ್ಲೇ ನಡೆಯಬೇಕು, ಅದರಲ್ಲೂ ದೇವಿ ಜಾತ್ರೆಯ ನಡುವೆಯೇ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಅವರ ಆಸೆಯಂತೆಯೇ, “ದನ ಕಾಯೋನು’ ಚಿತ್ರದ ಹಾಡುಗಳು ಆ ಕಲರ್ಫುಲ್ ವೇದಿಕೆ ಮೇಲೆ ಬಿಡುಗಡೆಯಾದವು.
ಅಂದಿನ ಹೈಲೈಟ್ ಅಂದರೆ, ನಟಿ ರಚಿತಾ ರಾಮ್. ಅವರನ್ನು ಬಿಟ್ಟರೆ ನಿರ್ದೇಶಕ ಯೋಗರಾಜ್ ಭಟ್ ಮಾತ್ರ. ನಾಯಕ “ದುನಿಯಾ’ ವಿಜಯ್ ಹಾಗೂ ನಾಯಕಿ ಪ್ರಿಯಾಮಣಿ ಅಂದು ಗೈರು. ಆದರೂ, ಜನರು ಆ ದೇವಾಲಯದ ಸುತ್ತ ತುಂಬಿಕೊಂಡಿದ್ದರು. ಅವರ ನಡುವೆಯೇ ರಚಿತಾ ರಾಮ್ ಆಡಿಯೋ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭಕೋರಿದರು. ಅದಕ್ಕೂ ಮುನ್ನ, “ಅಂಬಾ …’ ಎನ್ನುತ್ತಲೇ ಅಲ್ಲಿದ್ದವರನ್ನು ರಂಜಿಸಿದರು.
ಯೋಗರಾಜ್ ಭಟ್ ಅವರು, “ದನ ಕಾಯೋನು’ ನನ್ನ ಪಾಲಿಗೆ ಈ ಊರಿನ ಋಣ ತೀರಿಸುತ್ತೆ ಅಂದರು.ಅವರ ಮಾತುಗಳಿಗೂ ಮುನ್ನ, ಚಿತ್ರದ ಮೂರು ಹಾಡುಗಳು ಹಾಗು ಟ್ರೈಲರ್ ಅನ್ನು ಪ್ರದರ್ಶಿಸಲಾಯಿತು. ಈಗಾಗಲೇ ಚಿತ್ರದ ಚಿತ್ರೀಕರಣ ಶೇ. 90ರಷ್ಟು ಗಂಗಾವತಿಯಲ್ಲಿ ನಡೆದಿದ್ದು, ಉಳಿದಂತೆ ಬೆಂಗಳೂರು ಸುತ್ತಮುತ್ತ ನಡೆದಿದೆ. ಹಳ್ಳಿಯಲ್ಲಿನ ಹಸು, ಹೋರಿ ಪ್ರೇಮಕತೆಯನ್ನು ವಿಜಯ್ ಮತ್ತು ಪ್ರಿಯಾಮಣಿ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜೂನ್ ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಬಿರಾದಾರ್, ರಂಗಾಯಣ ರಘು, ಯೋಗಿ, ವೀಣಾ ಸುಂದರ್, ನತಾಶ ಇತರರು ನಟಿಸಿದ್ದಾರೆ.
-ಉದಯವಾಣಿ