ಕೋಲ್ಕತ: ಮುಂಬರುವ ‘ಟಿಇ3ಎನ್’ ಚಿತ್ರಕ್ಕಾಗಿ ಇಲ್ಲಿ ಚಿತ್ರೀಕರಣ ಸಂದರ್ಭದಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಪಕ್ಕೆಲುಬಿನ ಬಳಿ ಗಾಯವಾಗಿದೆ. ಆದರೆ ಅಭಿಮಾನಿಗಳು ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
‘ಬುಧವಾರ ರಾತ್ರಿ ತಮಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ’ ಎಂದು 73ರ ಹರೆಯದ ಬಾಲಿವುಡ್ ನಟ ಹೇಳಿದ್ದಾರೆ.
‘ಚಿಂತೆ ಮಾಡುವಂತಹುದು ಏನೂ ಇಲ್ಲ… ನನ್ನ ಪಕ್ಕೆಲುಬಿನ ಬಳಿ ಗಾಯವಾಗಿದೆ. ಉಸಿರಾಡುವಾಗ ನೋವಾಗುತ್ತಿದೆ. ನಾನು ಮಂಜುಗಡ್ಡೆ ಇಟ್ಟುಕೊಳ್ಳುತ್ತಿದ್ದೇನೆ ಮತ್ತು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈದ್ಯರ ಬಳಿ ಮಾತನಾಡಿದ್ದೇನೆ. ವಾಸಿಯಾಗಲು 48 ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇಲ್ಲದೇ ಇದ್ದಲ್ಲಿ ವಿಕಿರಣ ಅಥವಾ ಎಂಆರ್ಐ ಯಾವುದು ಬೇಕೋ ಅದನ್ನು ಮಾಡುವ ಬಗ್ಗೆ ವೈದ್ಯರು ನಿರ್ಧರಿಸಬಹುದು’ ಎಂದು ಬಚ್ಚನ್ ತಮ್ಮ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘ಪಿಕು’ ನಟ ಕೆಲದಿನಗಳಿಂದ ನವಾಜುದ್ದೀನ್ ಸಿದ್ದಿಕಿ ಮತ್ತು ವಿದ್ಯಾಬಾಲನ್ ಅವರ ಜೊತೆಗೆ ಹೊಸ ಚಿತ್ರದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಗಾಯವಾಗಿದ್ದರೂ, ಶುಕ್ರವಾರ ಬಿಡುಗಡೆಯಾಗಲಿರುವ ‘ವಜೀರ್’ ಚಿತ್ರಕ್ಕೆ ತಮ್ಮ ಗೆಳೆಯರು ಮತ್ತು ಅಭಿಮಾನಿಗಳನ್ನು ಕರೆದೊಯ್ಯುವುದಾಗಿ ಅವರು ಹೇಳಿದ್ದಾರೆ.