ತರ್ಲೆ ನನ್ಮಕ್ಳು ಸಿನಿಮಾ ಶುರುವಾಗಿ, ಎರಡು ವರ್ಷ ರಪಕ್ಕಂತ ಮಾಯವಾಗಿ ಹೋಯಿತು. ಫೈನಲೀ ಆ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಜನವರಿ 15ಕ್ಕೆ ಬಿಡುಗಡೆಯಾಗುತ್ತದೆ ಅಂತ ಘೋಷಣೆಯಾಗಿರೋ ಸಂದರ್ಭದಲ್ಲಿ ಸಿನಿಮಾದ ನಾಯಕ ನಾಗಶೇಖರ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಯಾಕೆ ಗೊತ್ತಾ? ಈ ಸಿನಿಮಾದ ಟ್ರೇಲರ್ ರಿಲೀಸಾದಾಗ ಅದರಲ್ಲೆರಡು ಡೈಲಾಗ್ ಇತ್ತು.
“ಮಾಡಿದ ಎಲ್ಲಾ ಸಿನಿಮಾ ಸೂಪರ್ಹಿಟ್ ಆಗೋಕೆ ಸುದೀಪ್ ಅಲ್ಲ. ಕೆಲವರು ಕೂಲ್ ಸಿನಿಮಾನೂ ಕೊಡ್ತಾರೆ …’ ಇದು ನೇರ ಗಣೇಶ್ಗೆ ಬೈದಂತಿತ್ತು. ಅದರ ಜೊತೆ ಯೋಗರಾಜ ಭಟ್ಟರನ್ನು ಗೇಲಿ ಮಾಡಿದ್ದರು. ಆ ಟ್ರೇಲರ್ ನೋಡಿದ ನಂತರ ಯೋಗರಾಜ್ ಭಟ್ಟರು, ನಾಗಶೇಖರ್ ಸಿಗ್ತೀನೆ ಅಂದರೆ ಸಾಕು ತಪ್ಪಿಸಿಕೊಂಡು ಹೋಗುತ್ತಾರೆ. ಗಣೇಶ್ ಅಂತು ಸಿಗುವುದೇ ಇಲ್ಲ. ಹೀಗಾಗಿ ನಾಗಶೇಖರ್ಗೆ ಬೇಜಾರಾಗಿದೆ. ಹೀಗಾಗಿ ಕ್ಷಮೆ ಯಾಚಿಸಿದ್ದಾರೆ.
“ಈ ಸಿನಿಮಾದಲ್ಲಿ ನನ್ನ ಪಾತ್ರ ಜೂನಿಯರ್ ಆರ್ಟಿಸ್ಟ್ದು. ಹಾಗಾಗಿ ಸಿನಿಮಾದವರನ್ನು ಬೈಯುತ್ತಿರುತ್ತೇನೆ. ನಿರ್ದೇಶಕರು ಹೇಳಿದ್ದನ್ನು ಹೇಳಿದ್ದೇನೆ. ಯಾವುದೇ ದುರುದ್ದೇಶದಿಂದಾಗಿ ಹೇಳಿಲ್ಲ. ಹೀಗಾಗಿ ಯಾರೂ ಬೇಸರ ಮಾಡಿಕೊಳ್ಳಬಾರದು. ಅವರಿಗೆ ನೋವಾಗಿದ್ದರೆ ನಾನು ಈ ಮೂಲಕ ಕ್ಷಮೆ ಯಾಚಿಸುತ್ತಿದ್ದೇನೆ. ಈ ಸಿನಿಮಾದ ಡೈಲಾಗ್ನಿಂದಾಗಿ ಸೆನ್ಸಾರ್ನವರು ಕೂಡ ನಂಗೆ ಬೈದಿದ್ದಿದೆ. ಇದರ ಉದ್ದೇಶ ಕೇವಲ ತಮಾಷೆ ಆದ್ದರಿಂದ ಎಲ್ಲರೂ ಅದೇ ರೀತಿ ಸ್ವೀಕರಿಸುತ್ತಾರೆ ಅಂತ ಅಂದುಕೊಂಡಿದ್ದೇನೆ’ ಎನ್ನುತ್ತಾರೆ ನಾಗಶೇಖರ್.
ಅಂದಹಾಗೆ, ಈ ಸಿನಿಮಾ ತುಂಬಾ ತಡವಾಗಿದ್ದೇಕೆ? ಕಾರಣ ಸೆನ್ಸಾರ್ ಸಮಸ್ಯೆ. ಸೆನ್ಸಾರ್ ಮಂಡಳಿ ಈ ಸಿನಿಮಾದ ಸುಮಾರು ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಆದರೆ ಕತ್ತರಿ ಹಾಕಲು ನಿರ್ದೇಶಕ ರಾಕೇಶ್ಗೆ ಮನಸ್ಸಿರಲಿಲ್ಲ. ಇದರಿಂದ ಮುಂಬೈಗೆ ಹೋಗಿ, ಅಲ್ಲಿಂದ ದೆಹಲಿ ಟ್ರಿಬ್ಯೂನಲ್ಗೆ ಹೋಗಿ ಕತ್ತರಿ ಹಾಕಲು ಅವಕಾಶ ನೀಡದೇ ಇರುವುದರಿಂದ ತಡವಾಗಿದೆ.
ಅದನ್ನು ಹೇಳಿದ್ದು ನಿರ್ಮಾಪಕರಾದ ಸಚಿನ್ ಮತ್ತು ಸತೀಶ್ಕುಮಾರ್. ಈ ಮೊದಲು ಜನವರಿ ಒಂದರಂದು ಸಿನಿಮಾ ಬಿಡುಗಡೆ ಆಗತ್ತೆ ಅಂತ ಅಂದುಕೊಂಡಿದ್ದರೂ ಅವತ್ತು “ಕಿಲ್ಲಿಂಗ್ ವೀರಪ್ಪನ್’ ಬಿಡುಗಡೆಯಾಗುತ್ತಿರುವುದರಿಂದ ಶಿವಣ್ಣನ ಮೇಲಿನ ಗೌರವದಿಂದ ಹದಿನೈದು ದಿನ ತಡವಾಗಿ ಬಿಡುಗಡೆ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿಕೊಂಡರು. ಈ ಸಿನಿಮಾದ ನಾಯಕ ಯತಿರಾಜ್ ಮತ್ತು ನಾಯಕಿ ಅಂಜನಾ ಥ್ರಿಲ್ ಆಗಿದ್ದಾರೆ. ಈ ಸಿನಿಮಾಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋ ನಿರೀಕ್ಷೆ ಅವರನ್ನು ಕಾತರದಿಂದ ಕಾಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಈ ಸಿನಿಮಾದ ಟ್ರೇಲರ್ ನೋಡಿದರೆ ನಿಮಗೂ ಅವರ ಕಾತರ, ಆತಂಕ ಅಂದಾಜಾಗಬಹುದು.
-ಉದಯವಾಣಿ