ನವದೆಹಲಿ: ನಿವೃತ್ತ ಲೆಜೆಂಡ್ ವೀರೇಂದ್ರ ಸೆಹ್ವಾಗ್ ಗುರುವಾರ ತಮ್ಮ ಮಾಜಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ಸಚಿನ್ ತೆಂಡೂಲ್ಕರ್ ಅವರಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಸೆಹ್ವಾಗ್ ಅವರು ಆಡಿದ ತಂಡದಲ್ಲಿ ಸುಮಾರು 6 ವರ್ಷಗಳವರೆಗೆ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಪ್ರಸ್ತಾಪಿಸದಿರುವುದು ನಿಗೂಢವಾಗಿದೆ.
ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟೆಸ್ಟ್ ಆರಂಭಕ್ಕೆ ಮುಂಚಿತವಾಗಿ ಸೆಹ್ವಾಗ್ ಅವರ ಸಾಧನೆಗಳಿಗಾಗಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಟ್ರೋಫಿಯೊಂದನ್ನು ನೀಡಿ ಅಭಿನಂದಿಸಿದರು. ಸೆಹ್ವಾಗ್ ಜತೆ ಅವರ ತಾಯಿ ಕೃಷ್ಣ ಸೆಹ್ವಾಗ್, ಪತ್ನಿ ಆರತಿ ಮತ್ತು ಇಬ್ಬರು ಪುತ್ರರು ಜತೆಗೂಡಿದ್ದರು. ವಿದಾಯ ಭಾಷಣದಲ್ಲಿ ಬಿಸಿಸಿಐನಿಂದ ಡಿಡಿಸಿಸಿಎ ಜತೆಗೆ ಅವರ ಮೊದಲ ಕೋಚ್ ಎ.ಎನ್.ಶರ್ಮಾ ಮತ್ತು ದೆಹಲಿಯ ಯು-19ಗೆ ತಮ್ಮನ್ನು ಆರಿಸಿದ ಸತೀಶ್ ಶರ್ಮಾರಿಗೆ ಸೆಹ್ವಾಗ್ ಧನ್ಯವಾದ ಸೂಚಿಸಿದರು.
ಕೊನೆಯಲ್ಲಿ ಅಭಿಮಾನಿಗಳಿಗೆ ಕೂಡ ಧನ್ಯವಾದ ಅರ್ಪಿಸಿದರು. ಆದರೆ ತಮ್ಮ ಭಾಷಣದಲ್ಲಿ ಸೆಹ್ವಾಗ್ ಧೋನಿ ಅವರ ಹೆಸರನ್ನು ಪ್ರಸ್ತಾಪಿಸದಿರುವುದರಿಂದ ಧೋನಿ ಮತ್ತು ಸೆಹ್ವಾಗ್ ನಡುವೆ ಆಟಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿತ್ತೇ ಎಂಬ ಸಂಶಯ ಮೂಡಿದೆ.