ಬೆಂಗಳೂರು: ಅಸಹಿಷ್ಣುತೆ ಕುರಿತು ಬಾಲಿವುಡ್ ನಟ ಆಮಿರ್ ಖಾನ್ ಹೇಳಿಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ವಾಗ್ವಾದ ನಡೆಯುತ್ತಿದ್ದು, ಇದಕ್ಕೆ ಚಿತ್ರರಂಗದ ಕೆಲವು ಗಣ್ಯರು ಸಹ ಕೈಜೋಡಿಸಿದ್ದಾರೆ.
ಒಂದು ಕಡೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ಬಹಿರಂಗವಾಗಿಯೇ ಆಮಿರ್ ಖಾನ್ ಅವರ ಹೇಳಿಕೆಯನ್ನು ಟೀಕಿಸಿದರೆ, ಮತ್ತೊಂದು ಕಡೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ‘ಪಿಕೆ’ ನಟ ತಮ್ಮ ಹೇಳಿಕೆ ಮೂಲಕ ಭಾರತವನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದಿದ್ದಾರೆ.
ಅಸಹಿಷ್ಣುತೆ ಬಗ್ಗೆ ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಅವರ ಹೇಳಿಕೆಯಿಂದ ದೇಶದ ಬಗ್ಗೆ ತಪ್ಪು ಭಾವನೆ ಬರುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೌನ ಮುರಿದು, ನಿಲುವು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿರುವ ವರ್ಮಾ, ಪ್ರಧಾನಮಂತ್ರಿ ಈ ದೇಶದ ಮುಖ್ಯಸ್ಥರು. ಹೀಗಾಗಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಪ್ರಧಾನಿ ಹೇಳಿಕೆ ನೀಡಿದರೆ ಸಮಸ್ಯೆ ಪರಿಹಾರವಾಗುತ್ತೆ ಎಂದಿದ್ದಾರೆ.