ದುಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ದ್ವಿಶತಕ, ತ್ರಿಶತಕ ಬಾರಿಸುವುದು ಹೇಗೆ ಅಂತ ಗೊತ್ತಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಸಚಿನ್ಗೆ ದ್ವಿಶತಕ, ತ್ರಿಶತಕ ಬಾರಿಸಲು ಬರುವುದಿಲ್ಲ ಎಂದು ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಸಚಿನ್ ತಮ್ಮ ಸಾಮರ್ಥ್ಯ, ಕೌಶಲ್ಯವನ್ನು ಚೆನ್ನಾಗಿ ಬಳಸಿಕೊಂಡಿಲ್ಲ. ಅವರೀಗ ಸಾಧನೆ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ಮುಂಬೈ ಕ್ರಿಕೆಟ್ನಲ್ಲೇ ಸ್ಥಗಿತರಾದಂತೆ ಇದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಇನ್ನೂ ಮಿಂಚಬಹುದಾಗಿತ್ತು. ನೀಟ್ ಆ್ಯಂಡ್ ಸ್ಟ್ರೈಟ್ ಕ್ರಿಕೆಟ್ ಆಡುವ ಮುಂಬೈ ಕ್ರಿಕೆಟಿಗರ ಜತೆ ಆಡುವುದಕ್ಕಿಂತ ಹೆಚ್ಚು ಸಮಯವನ್ನು ಅವರು ವಿವಿಯನ್ ರಿಚರ್ಡ್ಸ್ ಜತೆ ಆಟವಾಡುತ್ತಾ ಕಳೆಯಬೇಕಿತ್ತು. ಸಚಿನ್ ಅದ್ಭುತ ಕ್ರಿಕೆಟಿಗ, ಅವರಿಗೆ ಶತಕ ಬಾರಿಸುವುದು ಹೇಗೆ ಎಂದು ಗೊತ್ತು. ಆದರೆ ದ್ವಿಶತಕ, ತ್ರಿಶತಕ ಅಥವಾ ನಾನ್ನೂರು ರನ್ ಹೇಗೆ ಬಾರಿಸಬೇಕೆಂದು ತಿಳಿದಿಲ್ಲ ಎಂದು ಕಪಿಲ್ ಹೇಳಿದ್ದಾರೆ.
