ಸ್ಯಾಂಡಲ್ ವುಡ್’ನ ಬಹುಬೇಡಿಕೆಯ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೆಲದಿನಗಳ ಹಿಂದೆ ನಿರ್ದೇಶಕ ಸೂರಿಯ ದೃಶ್ಯಕಾವ್ಯ ‘ಕೆಂಡಸಂಪಿಗೆ’ಯನ್ನು ವೀಕ್ಷಿಸಿದ್ದಾರೆ.
ಬುಧವಾರ ಬೆಂಗಳೂರಿನ ಒರಿಯನ್ ಮಾಲ್’ನಲ್ಲಿ ಚಿತ್ರತಂಡದೊಂದಿಗೆ ಕೆಂಡಸಂಪಿಗೆಯನ್ನು ವೀಕ್ಷಿಸಿದ ಯಶ್ ವಿಭಿನ್ನ ಚಿತ್ರಕ್ಕೆ ಬಹುಪರಾಕ್ ಅಂದಿದ್ದಾರೆ. ಸ್ಟಾರ್ ನಿರ್ದೇಶಕ ಸೂರಿ ಹಾಗೂ ಕ್ಯಾಮೆರಾಮ್ಯಾನ್ ಸತ್ಯ ಹೆಗ್ಡೆಯ ಈ ಹೊಸ ಪ್ರಯತ್ನಕ್ಕೆ ರಾಕಿಂಗ್ ಸ್ಟಾರ್ ಮೆಚ್ಚುಗೆ ಸೂಚಿಸಿದ್ದಾರೆ.
ಸೂರಿ ಮತ್ತು ತಂಡದೊಂದಿಗೆ ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಕೆಂಡಸಂಪಿಗೆಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಚಿತ್ರವನ್ನು ನೋಡಿ ಹಾಗೆಯೇ ಕೆಂಡಸಂಪಿಗೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಚಿತ್ರದಲ್ಲಿ ಹೊಸ ಮುಖಗಳಾದ ವಿಕ್ಕಿ ಹಾಗೂ ಮಾನ್ವಿತಾ ನಾಯಕ-ನಾಯಕಿಯಾಗಿ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಡಸಂಪಿಗೆ ಚಿತ್ರದ ಪ್ರತಿ ಫ್ರೇಮ್’ನಲ್ಲೂ ನಿರ್ದೇಶಕ ಸೂರಿ ಕಮಾಲ್ ಮಾಡಿದ್ದು, ಈ ಚಿತ್ರವು ಸೂರಿ ನಿರ್ದೇಶಿದ ಅತ್ಯುತ್ತಮ ಚಿತ್ರ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ