ಲಾಹೋರ್: 2009ರಲ್ಲಿ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿದ್ದ ಉಗ್ರರ ದಾಳಿ ವೇಳೆ ಆಟಗಾರರನ್ನು ತನ್ನ ಪ್ರಾಣ ಒತ್ತೆಯಿಟ್ಟು ಕಾಪಾಡಿದ್ದ ಬಸ್ ಚಾಲಕ ಇದೀಗ ಮೂರು ಬಸ್ ಗಳ ಮಾಲೀಕನಾಗಿದ್ದೇನೆ.
ಅಚ್ಚರಿ ಎನಿಸಿದರೂ ಇದು ಸತ್ಯ. 2009ರಲ್ಲಿ ಪಾಕಿಸ್ತಾನದ ಲಾಹೋರ್ ನ ಗಡಾಫಿ ಕ್ರೀಡಾಂಗಣದ ಸಮೀಪ ಶ್ರೀಲಂಕಾ ಆಟಗಾರರ ಮೇಲೆ ನಡೆದಿದ್ದ ಉಗ್ರರ ದಾಳಿ ವೇಳೆ ಆಟಗಾರರ ಪ್ರಾಣ ರಕ್ಷಣೆ ಮಾಡಿದ್ದ ಬಸ್ ಚಾಲಕ ಮೆಹರ್ ಖಲೀಲ್ ಇದೀಗ ಮೂರು ಬಸ್ ಗಳ ಮಾಲೀಕನಾಗಿದ್ದಾನೆ. ವಿಶೇಷವೆಂದರೆ ಈತ ಮಾಲೀಕನಾಗಿ ಬದಲಾಗಲು ಇದೇ ಉಗ್ರರ ದಾಳಿ ಕಾರಣವಂತೆ.
ವಿಷಯವೆಂದರೆ ಅಂದು ಕ್ರಿಕೆಟ್ ಆಟಗಾರರ ಪ್ರಾಣ ಉಳಿಸಿ ಇಡೀ ಪಾಕಿಸ್ತಾನಕ್ಕೆ ಹಿರೋ ಆಗಿದ್ದ ಖಲೀಲ್ ಗೆ ಸಾಕಷ್ಟು ಸನ್ಮಾನ ಮತ್ತು ಹಣದ ಬಹುಮಾನ ದೊರೆತಿದೆ. ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ದೇಶಕ್ಕೆ ಕರೆಸಿಕೊಂಡು ವಿವಿಐಪಿ ಗೌರವ ನೀಡಿದ್ದರು. ಜೊತೆಗೆ 12 ಲಕ್ಷ ರೂ. ಹಣ ನೀಡಿದ್ದರು. ಅದಾದ ನಂತರ ಮೆಹರ್ಗೆ ಶುಭಾಶಯ ಸಲ್ಲಿಸಿ ಹಲವಾರು ಮಂದಿ ಹಣ ನೀಡತೊಡಗಿದ್ದರು. ಈ ಬಹುಮಾನದ ಮೊತ್ತವನ್ನು ಒಟ್ಟುಗೂಡಿಸಿ ಖಲೀಲ್ 3 ಬಸ್ ಗಳನ್ನು ಖರೀದಿ ಮಾಡಿದ್ದಾನೆ.
ಈ ವಿಚಾರವನ್ನು ಸ್ವತಃ ಮೆಹರ್ ಖಲೀಲ್ ಮಾಧ್ಯಮಗಳಿಗೆ ಹೇಳಿದ್ದಾನೆ. ಉಗ್ರರ ದಾಳಿ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಸತತ 6 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲಾಗಿತ್ತು. ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳ ನಡುವೆ ನಿನ್ನೆ ನಡೆದ ಟಿ20 ಪಂದ್ಯದ ವೇಳೆ ಮೆಹರ್ ಖಲೀಲ್ ರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಆಗಮಿಸಿದ್ದ ಖಲೀಲ್ ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ.
ಕ್ರಿಕೆಟಿಗರ ಬಸ್ ಮೇಲೆ ಗುಂಡಿನ ದಾಳಿ ಮಾಡುತ್ತಿರುವ ಉಗ್ರರು
2009ರ ಮಾರ್ಚ್ 3ರಂದು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಲಾಹೋರ್ ನಲ್ಲಿ ಸುಮಾರು 12 ಮಂದಿ ಉಗ್ರರ ತಂಡ ಏಕಾಏಕಿ ಗುಂಡಿನ ಮಳೆಗರೆದಿತ್ತು. ಗಡಾಫಿ ಕ್ರೀಡಾಂಗಣದತ್ತ ವಿಶೇಷ ಬಸ್ ನಲ್ಲಿ ಆಗಮಿಸುತ್ತಿದ್ದ ಶ್ರೀಲಂಕಾ ಕ್ರಿಕೆಟಿಗರನ್ನು ಗುರಿಯಾಗಿಸಿಕೊಂಡು ಕ್ರೀಡಾಂಗಣದ ಸಮೀಪದ ಲಿಬರ್ಟಿ ಸ್ತ್ವೇರ್ ಬಳಿ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಆಟಗಾರರಿದ್ದ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಮೆಹರ್ ಖಲೀಲ್ ಎಂಬ ಚಾಲಕನಿಗೆ ಅಪಾಯದ ಅರಿವಾಗುತ್ತಿದ್ದಂತೆಯೇ ಆತ ಬಸ್ ನ ವೇಗವನ್ನು ಜಾಸ್ತಿ ಮಾಡಿದ.
ಈ ವೇಳೆ ಉಗ್ರರು ಆಟಗಾರರು ತಪ್ಪಿಸಿಕೊಳ್ಳುತ್ತಾರೆ ಎಂದು ಎಣಿಸಿ ಬಸ್ ಚಾಲಕನ ಮೇಲೆಯೂ ಗುಂಡಿನ ಮಳೆಗರೆದಿದ್ದರು. ಆದರೆ ಅದೃಷ್ಟವಶಾತ್ ಯಾವು ಗುಂಡುಗಳೂ ಖಲೀಲ್ ಅವರ ದೇಹಕ್ಕೆ ತಾಗಿರಲಿಲ್ಲ. ಉಗ್ರರ ದಾಳಿಗೆ ಎದೆಗುಂದದ ಖಲೀಲ್ ಬಸ್ ಅನ್ನು ನೇರವಾಗಿ ಗಡಾಫಿ ಕ್ರೀಡಾಂಗಣದ ಒಳಗೆ ತಂದು ನಿಲ್ಲಿಸಿದ್ದ. ಅಷ್ಟು ಹೊತ್ತಿಗಾಗಲೇ ಉಗ್ರರು ಹಾರಿಸಿದ ಗುಂಡು ಶ್ರೀಲಂಕಾದ ಪರಿಣವಿತರಣ ಮತ್ತು ಸಮರವೀರ ಅವರ ತೋಳು ಮತ್ತು ತೊಡೆಯನ್ನು ಹೊಕ್ಕಿತ್ತು. ಬಸ್ ಚಾಲಕ ಖಲೀಲ್ ಕೊಂಚ ಹಿಂದೇಟು ಹಾಕಿದ್ದರೂ, ಬಸ್ ನಲ್ಲಿದ್ದ ಎಲ್ಲ ಆಟಗಾರರನ್ನು ಉಗ್ರರು ಕೊಂದು ಹಾಕುವ ಸಂಭವವಿತ್ತು. ಆದರೆ ಅಂತಿಮ ಸಮಯದಲ್ಲಿ ಎದೆಗಾರಿಕೆ ಮರೆದೆ ಖಲೀಲ್ ಲಂಕಾ ಆಟಗಾರರನ್ನು ರಕ್ಷಿಸಿದ್ದ.
ಅಷ್ಟು ಹೊತ್ತಿಗಾಗಲೇ ಸ್ಥಳಕ್ಕಾಗಮಿಸಿದ್ದ ಭದ್ರತಾ ಪಡೆಗಳು ಉಗ್ರರೊಂದಿಗೆ ಕಾಳಗಕ್ಕೆ ಮುಂದಾಗಿತ್ತು. ಅಂತಿಮವಾಗಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾದಾಟದಲ್ಲಿ 6 ಮಂದಿ ಪೊಲೀಸರು ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಆಟಗಾರರ ಪ್ರಾಣ ರಕ್ಷಿಸಿದ ಖಲೀಲ್ ರನ್ನು ಶ್ರೀಲಂಕಾದ ಅಂದಿನ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಕೊಲಂಬೋಗೆ ಕರೆಯಿಸಿ ಸನ್ಮಾನಿಸಿದ್ದರು. ಅಲ್ಲದೆ ಆತನಿಗೆ 12 ಲಕ್ಷ ರು. ಗೌರವ ಮೊತ್ತವನ್ನು ನೀಡಿದ್ದರು. ಇದೀಗ ಇದೇ ಹಣದಲ್ಲಿ ಖಲೀಲ್ ಬಸ್ ಗಳನ್ನು ಖರೀದಿ ಮಾಡಿದ್ದಾನೆ.