ಕೋಲ್ಕತ್ತಾ, ಏ.7- ಐಪಿಎಲ್ 8ರ ರಂಗು ರಂಗಿನ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ಗಳಾದ ಹೃತಿಕ್ರೋಷನ್, ಅನುಷ್ಕಾಶರ್ಮಾ, ಸಾಹಿದ್ ಕಪೂರ್, ಸೈಫ್ ಅಲಿಖಾನ್ರ ನೃತ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆಯನ್ನು ಹೊತ್ತಿದ್ದ ಸಹಸ್ರಾರು ಅಭಿಮಾನಿಗಳಿಗೆ ವರುಣನ ಕಾಟ ಕಾಡಲಿದೆ. ಇಂದು ಸಂಜೆ ಕೋಲ್ಕಾತ್ತಾದ ಸ್ಟಾಲ್ ಲೇಕ್ ಸ್ಟೇಡಿಯಂನಲ್ಲಿ ನಡೆಯುವ ವೈಭವಯುತ ಸಮಾರಂಭಕ್ಕೆ ಕಲೆ ಕಟ್ಟಲು ಸಹ ನೃತ್ಯಗಾರರೊಂದಿಗೆ ಬಾಲಿವುಡ್ನ ನಟ, ನಟಿಯರು ಈಗಾಗಲೇ ಭಾರೀ ಅಭ್ಯಾಸ ನಡೆಸಿದ್ದಾರೆ.
ಕಳೆದ 2 ದಿನಗಳಿಂದ ಕೋಲ್ಕತ್ತಾದಲ್ಲಿ ಭಾರೀ ವರ್ಷಧಾರೆ ಆಗುತ್ತಿದ್ದು ಕೋಲ್ಕತ್ತಾ ನೈಟ್ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಅಭ್ಯಾಸಕ್ಕೂ ಅಡಚಣೆ ಆಗಿತ್ತು. ಇಂದು ರಾತ್ರಿ ನಡೆಯುವ ಕಾರ್ಯಕ್ರಮದ ಸಮಯದಲ್ಲೂ ಭಾರೀ ಮಳೆ ಆಗುವ ಸಂಭವಿಸಿದೆ ಎಂದು ಸ್ಥಳೀಯ ವಾಯುಮಾಪನ ಕೇಂದ್ರದ ನಿರ್ದೇಶಕ ಜಿ.ಸಿ.ದೇಬಾನಾಥ್ ತಿಳಿಸಿದ್ದಾರೆ.
ಕನ್ನಡಿಗರ ಕಲರವ
ಬೆಂಗಳೂರು,ಏ.7-ಐಪಿಎಲ್ನ ಆರಂಭಿಕ ಋತುವಿನಲ್ಲಿ (2008)ರಲ್ಲಿ ವಿಜಯ್ಮಲ್ಯ ಮಾಲೀಕತ್ವದ ಆರ್ಸಿಬಿ ತಂಡದಲ್ಲಿ ಕನ್ನಡಿಗರು ಮೇಲುಗೈ ಸಾಧಿಸಿದ್ದರು.
ತಂಡದ ನಾಯಕರಾಗಿ ರಾಹುಲ್ದ್ರಾವಿಡ್ ಅಲ್ಲದೆ ಅನಿಲ್ಕುಂಬ್ಳೆ, ಅಯ್ಯಪ್ಪ, ಬಾಲಚಂದ್ರ ಅಖಿಲ್, ಅಪ್ಪಣ್ಣ, ಭರತ್ಚಿಪ್ಲಿ , ಗೋಸ್ವಾಮಿ, ಸುನೀಲ್ಜೋಶಿ, ವಿನಯ್ಕುಮಾರ್ ಅಲ್ಲದೆ ತಂಡದ ಕೋಚ್ ಆಗಿ ವೆಂಕಟೇಶ್ಪ್ರಸಾದ್ರನ್ನು ಮಲ್ಯ ಆಯ್ಕೆ ಮಾಡಿಕೊಂಡಿದ್ದರು.
ಆದರೆ 2014ರಲ್ಲಿ ಆರ್ಸಿಬಿ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರನಿಗೂ ಸ್ಥಾನ ದೊರಕದಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಹುಬ್ಬಳ್ಳಿಯ ಶಿಶಿರ ಭಾವ್ನೆಗೆ ಸ್ಥಾನ ಕಲ್ಪಿಸಲಾಗಿದೆ.
ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ , ಕೆ.ಸಿ.ಕಾರ್ಯಪ್ಪ , ಮನೀಷ್ಪಾಂಡೆ, ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ರೋಹಿತ್ಮೋರೆ, ಡೆಲ್ಲಿಡೇರ್ ಡೈವಿಲ್ಸ್ನಲ್ಲಿ ಮಾಯಾಂಕ್ ಅಗರ್ವಾಲ್, ಸಿ.ಗೌತಮ್, ಮುಂಬೈ ತಂಡದಲ್ಲಿ ಶ್ರೇಯಾಸ್ಗೋಪಾಲ್,ಅಭಿಮನ್ಯುಮಿಥುನ್, ವಿನಯ್ಕುಮಾರ್, ರಾಜಸ್ಥಾನ್ ರಾಯಲ್ಸ್ನಲ್ಲಿ ಸ್ಟುವರ್ಟ್ ಬಿನ್ನಿ ,ಕರುಣ್ನಾಯರ್, ಸನ್ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಲೋಕೇಶ್ ರಾಹುಲ್ ಅವರು ಸ್ಥಾನ ಪಡೆದಿದ್ದಾರೆ.