ಎರಡು ವರ್ಷದ ಹಿಂದೆ ಮುಂಜಾಗ್ರತಾ ಕ್ರಮವಾಗಿ ನನ್ನ ಎರಡೂ ಸ್ತನಛೇದನ (ಮಾಸ್ಟೆಕ್ಟಮಿ) ಮಾಡುವ ನನ್ನ ಆಯ್ಕೆಯ ಬಗ್ಗೆ ಬರೆದಿದ್ದೆ. ಒಂದು ಸರಳ ರಕ್ತ ಪರೀಕ್ಷೆಯು, ಪರಿವರ್ತನೆಗೊಂಡ ಬಿಆರ್ಸಿಎ1 ಜೀನ್ ನನ್ನಲ್ಲಿರುವುದನ್ನು ತೋರಿಸಿಕೊಟ್ಟಿತ್ತು. ಇದು ನನಗೆ ಸ್ತನ ಕ್ಯಾನ್ಸರ್ ಬರುವ ಶೇ 87ರಷ್ಟು ಅಪಾಯವನ್ನು ಮತ್ತು ಅಂಡಾಶಯ ಕ್ಯಾನ್ಸರ್ ಬರುವ ಶೇ 50ರಷ್ಟು ಅಪಾಯವನ್ನು ಮನವರಿಕೆ ಮಾಡಿತ್ತು. ನಾನು ನನ್ನ ತಾಯಿ, ಅಜ್ಜಿ ಮತ್ತು ಅತ್ತೆಯನ್ನು ಕ್ಯಾನ್ಸರ್ನಿಂದಾಗಿಯೇ ಕಳೆದುಕೊಂಡವಳು.
ಅಪಾಯಕ್ಕೆ ಸಿಲುಕಿರುವ ಇತರ ಮಹಿಳೆಯರು ತಮ್ಮ ಮುಂದೆ ಇರುವ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಬಯಕೆಯಾಗಿತ್ತು. ನನಗೆ ತಿಳಿದ ಉಪಯುಕ್ತ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಭರವಸೆಯನ್ನು ನಾನು ಅಂದೇ ನೀಡಿದ್ದೆ. ಅದರಂತೆ ಮುಂಜಾಗ್ರತೆಯಾಗಿ ನನ್ನ ಅಂಡಾಶಯ (ಓವರಿ) ಮತ್ತು ಅಂಡಾಣುವಾಹಿ ನಾಳವನ್ನು (ಫ್ಯಾಲೋಪಿಯನ್ ಟ್ಯೂಬ್) ನಿವಾರಿಸಿಕೊಳ್ಳುವ ಬಗ್ಗೆಯೂ ಇತರರೊಂದಿಗೆ ಮೊದಲಾಗಿಯೇ ಹಂಚಿಕೊಂಡಿದ್ದೆ.
ನಾನು ಅಂಡಾಶಯ ಮತ್ತು ಅಂಡಾಣುವಾಹಿ ನಳಿಕೆ ಕತ್ತರಿಸುವ ಶಸ್ತ್ರಚಿಕಿತ್ಸೆ ಬಗ್ಗೆ ಕೆಲವು ಸಮಯದಿಂದ ಯೋಜನೆ ರೂಪಿಸಿಕೊಂಡಿದ್ದೆ. ಸ್ತನಛೇದನಕ್ಕಿಂತ ಇದು ಕಡಿಮೆ ಸಂಕೀರ್ಣದ ಶಸ್ತ್ರಚಿಕಿತ್ಸೆ, ಆದರೆ ಇದರ ದುಷ್ಪರಿಣಾಮ ತೀವ್ರ ಸ್ವರೂಪದ್ದು. ಇದು ಮಹಿಳೆಯೊಬ್ಬಳಲ್ಲಿ ಬಲಾತ್ಕಾರವಾಗಿ ಮುಟ್ಟು ನಿಲ್ಲುವಂತೆ ಮಾಡುತ್ತದೆ. ಹೀಗಾಗಿ ನಾನು ಇದರ ಬಗ್ಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅಧ್ಯಯನ ನಡೆಸುತ್ತಾ, ನನ್ನ ಮುಂದಿರುವ ಆಯ್ಕೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸುತ್ತಾ, ಬದಲಿ ಔಷಧಗಳ ಬಗ್ಗೆ ಸಂಶೋಧನೆ ನಡೆಸುತ್ತಾ, ಬೆದೆಕಾರಿ ಅಥವಾ ಗರ್ಭಧಾರಣೆಯಾದ ನಂತರ ಅದನ್ನು ಸಂರಕ್ಷಿಸುವ ನನ್ನ ಹಾರ್ಮೋನ್ಗಳ ಬಗ್ಗೆ ಪರೀಕ್ಷಿಸುವ ಕೆಲಸವನ್ನು ಮಾಡುತ್ತಲೇ ಇದ್ದೆ.
ಎರಡು ವಾರಗಳ ಹಿಂದೆ ರಕ್ತ ಪರೀಕ್ಷೆಯ ಫಲಿತಾಂಶದೊಂದಿಗೆ ನನ್ನ ವೈದ್ಯರಿಂದ ನನಗೆ ಕರೆ ಬಂತು. ‘ನಿಮ್ಮ ಸಿಎ–125 ಮಟ್ಟ ಸಹಜವಾಗಿದೆ’ ಎಂದು ಅವರು ಹೇಳಿದ್ದರು. ನಾನು ನಿರಾಳವಾಗಿ ನಿಟ್ಟುಸಿರುಬಿಟ್ಟೆ. ರಕ್ತದಲ್ಲಿರುವ ಸಿಎ–125 ಪ್ರೊಟೀನ್ ಮಟ್ಟವನ್ನು ಅದು ತೋರಿಸುತ್ತದೆ ಮತ್ತು ಅಂಡಾ ಶಯ ಕ್ಯಾನ್ಸರ್ ಬಗ್ಗೆ ನಿಗಾ ವಹಿಸಲು ಈ ಪರೀಕ್ಷೆ ನಡೆಸ ಲಾಗುತ್ತದೆ. ನನ್ನ ಕೌಟುಂ ಬಿಕ ಇತಿ ಹಾಸದ ಕಾರಣಕ್ಕಾಗಿ ನಾನು ಪ್ರತಿ ವರ್ಷ ಈ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇದ್ದೆ. ಆದರೆ ರಕ್ತ ಪರೀಕ್ಷೆಯ ಫಲಿತಾಂಶ ಅಷ್ಟಕ್ಕೇ ಮುಗಿದಿರಲಿಲ್ಲ. ‘ರಕ್ತದಲ್ಲಿ ಕೆಲವೊಂದು ದಹನಕಾರಿ ಗುರುತುಗಳು ಇವೆ.
ಇವೆಲ್ಲವನ್ನೂ ಒಟ್ಟು ಸೇರಿಸಿದರೆ ಇದು ಕ್ಯಾನ್ಸರ್ನ ಆರಂಭಿಕ ಸೂಚನೆಯೂ ಆಗಬಹುದು’ ಎಂದು ವೈದ್ಯರು ಹೇಳಿದ್ದರು. ಇದರಿಂದ ನಾನು ಸ್ತಂಭೀಭೂತಳಾದೆ. ‘ಸಿಎ–125 ಪರೀಕ್ಷೆಯಲ್ಲಿ ಅಂಡಾಶಯ ಕ್ಯಾನ್ಸರ್ ಮರೆಮಾಚಿ ಕುಳಿತಿರುವ ಶೇ 50ರಿಂದ 75ರಷ್ಟು ಸಾಧ್ಯತೆಗಳು ಇರುತ್ತವೆ’ ಎಂದು ಹೇಳಿದ ವೈದ್ಯರು, ನನ್ನ ಅಂಡಾಶಯ ಪರೀಕ್ಷಿಸಲು ತಕ್ಷಣ ಸರ್ಜನ್ರನ್ನು ಭೇಟಿ ಮಾಡುವಂತೆ ತಿಳಿಸಿದರು.
ಸಾವಿರಾರು ಮಹಿಳೆಯರು ಯೋಚಿಸುವಂತೆ ನಾನೂ ಯೋಚಿಸಿದೆ. ಶಾಂತವಾಗಿರು ಎಂದು ನನಗೇ ನಾನು ಹೇಳಿಕೊಂಡೆ. ನನ್ನ ಮಕ್ಕಳು ದೊಡ್ಡವರಾಗುವುದು ಮತ್ತು ನನ್ನ ಮೊಮ್ಮಕ್ಕಳನ್ನು ನೋಡುವಷ್ಟು ಸಮಯ ನಾನು ಬದುಕಿರುವುದಿಲ್ಲ ಎಂದು ಭಾವಿಸುವುದಕ್ಕೆ ನನಗೆ ಕಾರಣವೇ ಇರಲಿಲ್ಲ. ನಾನು ತಕ್ಷಣ ಫ್ರಾನ್ಸ್ನಲ್ಲಿದ್ದ ನನ್ನ ಪತಿಗೆ ಕರೆ ಮಾಡಿದೆ. ಕೆಲವೇ ಗಂಟೆಯೊಳಗೆ ಅವರು ವಿಮಾನ ಏರುವವರಿದ್ದರು.
ಜೀವನದಲ್ಲಿನ ಇಂತಹ ಕ್ಷಣಗಳ ಸೌಂದರ್ಯವೇ ಹಾಗೆ, ಅದು ಬಹಳ ಸ್ಪಷ್ಟವಾಗಿರು ತ್ತದೆ. ನಾವು ಯಾಕಾಗಿ ಬದುಕಿದ್ದೇವೆ ಎಂಬುದು ನಮಗೆ ಗೊತ್ತಿರು ತ್ತದೆ. ಅದಕ್ಕಾಗಿಯೇ ಅದೊಂದು ಧ್ರುವೀಕರಣಗೊಂಡ ವಿಚಾರವಾಗಿ ಬಿಡುತ್ತದೆ ಮತ್ತು ಮನಸ್ಸು ಶಾಂತಿಯಿಂದ ಕೂಡಿರುತ್ತದೆ. ಅದೇ ದಿನ ನಾನು ಸರ್ಜನ್ ಅವರನ್ನು ಭೇಟಿಯಾಗಲು ತೆರಳಿದೆ. ಅವರು ನನ್ನ ಅಮ್ಮನನ್ನೂ ತಪಾಸಣೆ ಮಾಡಿದವರು. ನಾನು ಅವರನ್ನು ಕೊನೆಯದಾಗಿ ಭೇಟಿ ಮಾಡಿದ್ದು ನನ್ನ ಅಮ್ಮ ತೀರಿಹೋದ ದಿನ.
ನನ್ನನ್ನು ನೋಡುತ್ತಲೇ ಅವರು ಗದ್ಗದಿತರಾಗಿದ್ದರು. ‘ನೀನು ಅವಳಂತೆಯೇ ಇದ್ದೀಯಾ’ ಎಂದು ಅವರು ಹೇಳಿದಾಗ ನಾನೂ ಅತ್ತುಬಿಟ್ಟಿದ್ದೆ. ಆದರೆ ನಾವು ತಕ್ಷಣ ದುಃಖ ಮರೆತು ಮುಗುಳ್ನಕ್ಕೆವು ಮತ್ತು ನನ್ನ ಸಮಸ್ಯೆಗೆ ಹುಡುಕಬೇಕಾದ ಪರಿಹಾರದ ಬಗ್ಗೆ ಮಾತನಾಡಿದೆವು. ಸರ್ಜನ್ ನನ್ನನ್ನು ಕೂಲಂಕಷವಾಗಿ ಪರೀಕ್ಷಿಸಿದರು. ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಬಂದ ಫಲಿತಾಂಶದಿಂದ ನಾನು ಗಾಬರಿಗೊಳ್ಳು ವಂಥದ್ದು ಏನೂ ಇಲ್ಲ ಎಂದು ಗೊತ್ತಾಯಿತು.
ಒಂದು ವೇಳೆ ಇಲ್ಲಿ ಕಂಡ ಲಕ್ಷಣ ಕ್ಯಾನ್ಸರ್ ಆಗಿದ್ದರೂ, ಅದು ತೀರಾ ಆರಂಭಿಕ ಹಂತದಲ್ಲಷ್ಟೇ ಇದೆ, ಅದು ದೇಹದ ಯಾವುದೋ ಒಂದು ಭಾಗದಲ್ಲಿದೆ. ಐದು ದಿನಗಳ ಬಳಿಕ ಇದರ ಬಗ್ಗೆ ಮಾಹಿತಿ ತಿಳಿಯಬಹುದು ಎಂದು ಸರ್ಜನ್ ಹೇಳಿದರು. ಆ ಐದು ದಿನ ನಾನು ಮಂಕಾಗಿದ್ದೆ. ನನ್ನ ಮಕ್ಕಳ ಫುಟ್ಬಾಲ್ ಆಟ ನೋಡುತ್ತಾ, ಶಾಂತ ಮನಸ್ಸಿನಿಂದ ಇರುವುದರತ್ತ ಹೆಚ್ಚು ಗಮನ ಹರಿಸಿದ್ದೆ. ಫಲಿತಾಂಶದ ದಿನ ಬಂದೇಬಿಟ್ಟಿತು. ಪಿಇಟಿ/ ಸಿಟಿ ಸ್ಕ್ಯಾನ್ ಸ್ಪಷ್ಟವಾಗಿತ್ತು ಮತ್ತು ಗಡ್ಡೆ ಪರೀಕ್ಷೆ ಋಣಾತ್ಮಕವಾಗಿತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ನನ್ನ ದೇಹದಲ್ಲಿದ್ದ ರೇಡಿಯೊ ಆಕ್ಟಿವ್ ಟ್ರೇಸರ್ನಿಂದಾಗಿ ನಾನು ಸಂತೋಷದಲ್ಲಿ ಮಕ್ಕಳನ್ನು ಬಿಗಿ ದಪ್ಪಿಕೊಳ್ಳುವಂತೆ ಇರಲಿಲ್ಲ. ಆದರೂ ನನ್ನಲ್ಲಿ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು ಕಾಣಿಸಿದ್ದವು. ಪೂರ್ತಿ ಬೆಳೆದ ಗಡ್ಡೆಗೆ ಹೋಲಿಸಿದಾಗ ಇದು ತೀರಾ ಚಿಕ್ಕ ಸ್ವರೂಪದ್ದಾಗಿತ್ತು. ನನ್ನ ಸಮಾಧಾನಕ್ಕಾಗಿ ನನ್ನ ಅಂಡಾಶಯ ಮತ್ತು ಅಂಡಾಣುವಾಹಿ ನಾಳವನ್ನು ತೆಗೆದುಹಾಕುವ ಇಚ್ಛೆ ನನಗೆ ಇತ್ತು. ಹೀಗಾಗಿ ನಾನು ಅದನ್ನು ಆಯ್ಕೆ ಮಾಡಿ ಕೊಂಡೆ. ನನ್ನಲ್ಲಿ ಬಿಆರ್ ಸಿಎ1 ಜೀನ್ ಪರಿ ವರ್ತನೆಗೊಂಡ ರೂಪದಲ್ಲಿ ಇದೆ ಎಂಬ ಕಾರಣಕ್ಕಾಗಿ ಯಷ್ಟೇ ನಾನು ಇದನ್ನು ಮಾಡಿದ್ದಲ್ಲ, ಬದ ಲಿಗೆ ನಾನು ನಡೆದ ಹಾದಿಯನ್ನು ಇತರ ಮಹಿಳೆಯರು ಗಮನಿಸ ಬೇಕು ಎಂಬುದು ನನ್ನ ಬಯಕೆಯಾಗಿತ್ತು.
ಬಿಆರ್ಸಿಎ ಪರೀಕ್ಷೆ ಯಲ್ಲಿ ಪಾಸಿಟಿವ್ ಕಾಣಿಸಿದ ತಕ್ಷಣ ಶಸ್ತ್ರಚಿಕಿತ್ಸೆಗೆ ಧಾವಿಸಬೇಕೆಂದೇನೂ ಇಲ್ಲ. ನಾನು ಮಾತನಾಡಿಸಿದ ಹಲವಾರು ವೈದ್ಯರು, ಸರ್ಜನ್ಗಳು, ನ್ಯಾಚುರೋಪತಿ ತಜ್ಞರು ಇದನ್ನು ನನಗೆ ತಿಳಿಸಿದ್ದಾರೆ. ಮಹಿಳೆಯರಿಗೆ ಇನ್ನೂ ಹಲವು ಆಯ್ಕೆಗಳಿವೆ. ಕೆಲವು ಮಹಿಳೆಯರು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವುದೋ, ಬದಲಿ ಔಷಧ ಸೇವಿಸುತ್ತ ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದೋ ಮಾಡುತ್ತಿರುತ್ತಾರೆ. ಆರೋಗ್ಯ ವಿಚಾರವನ್ನು ನಿಭಾಯಿಸಲು ಒಂದಕ್ಕಿಂತ ಅಧಿಕ ಮಾರ್ಗಗಳು ಇದ್ದೇ ಇರುತ್ತವೆ. ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ವೈಯಕ್ತಿಕವಾಗಿ ನಿಮಗೆ ಯಾವುದು ಸರಿ ಎಂದು ಆಯ್ಕೆ ಮಾಡಿಕೊಳ್ಳುವುದೇ ಮುಖ್ಯ ವಿಚಾರ.
ನನ್ನ ವಿಚಾರಕ್ಕೆ ಬಂದಾಗ, ಅಂಡಾಣುವಾಹಿ ನಾಳ ಮತ್ತು ಅಂಡಾಶಯ ತೆಗೆದುಹಾಕುವುದೇ ಉತ್ತಮ ಆಯ್ಕೆ ಎಂದು ಪೌರಾತ್ಯ ಮತ್ತು ಪಾಶ್ಚಿಮಾತ್ಯ ವೈದ್ಯರು ನನಗೆ ಸಲಹೆ ನೀಡಿದ್ದರು. ಏಕೆಂದರೆ ಬಿಆರ್ಸಿಎ ಜೀನ್ನ ಕಾರಣಕ್ಕೇ ನನ್ನ ಕುಟುಂಬದ ಮೂವರು ಕ್ಯಾನ್ಸರ್ಗೆ ಬಲಿಯಾಗಿದ್ದರು. ನನ್ನ ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸದ ಕಾರಣಕ್ಕೆ ನಾನು ದಶಕದ ಮೊದಲೇ ಮುಂಜಾಗ್ರತಾ ಕ್ರಮವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದಿತ್ತು ಎಂದು ನನ್ನ ವೈದ್ಯರು ನನಗೆ ಸಲಹೆ ನೀಡಿದರು. ನನ್ನ ಅಮ್ಮನ ಅಂಡಾಶಯ ಕ್ಯಾನ್ಸರ್ ಪತ್ತೆಯಾದುದು ಅವರಿಗೆ 49 ವರ್ಷವಾಗಿದ್ದಾಗ. ನನಗೀಗ 39 ವರ್ಷ.
ಕಳೆದ ವಾರ ನಾನು ಅಂಡಛೇದನ ಪರೀಕ್ಷೆಗೆ (ಓಫರೆಕ್ಟಮಿ) ಒಳಗಾದೆ. ಅಂಡಾಶಯವೊಂದರಲ್ಲಿ ಸಣ್ಣ ಗಡ್ಡೆಯ ಲಕ್ಷಣ ಇರುವುದು ಕಂಡುಬಂತು. ಆದರೆ ಯಾವುದೇ ಜೀವಕೋಶದಲ್ಲಿ ಕ್ಯಾನ್ಸರ್ನ ಲಕ್ಷಣ ಕಾಣಿಸಲಿಲ್ಲ. ಜೈವಿಕ ತದ್ರೂಪಿನಂತಹ ಬೆದೆಜನಕ ನನ್ನಲ್ಲಿ ಇರುವ ಲಕ್ಷಣ ಕಾಣಿಸಿತ್ತು. ಗರ್ಭವನ್ನು ನಿಲ್ಲಿಸುವ ಮತ್ತು ಮುಂದೆ ಅಂಡೋತ್ಪತ್ತಿಯನ್ನು ನಿಲ್ಲಿಸುವ ಸ್ಟಿರಾಯ್್ಡ ಹಾರ್ಮೋನ್ ಅನ್ನು (ಪ್ರೊಜೆಸ್ಟರೋನ್ ಐಯುಡಿ) ನನ್ನ ಗರ್ಭಕೋಶದ ಒಳಗೆ ಸೇರಿಸಲಾಯಿತು. ನನ್ನ ಹಾರ್ಮೋನ್ ಸಮತೋಲನ ಕಾಯ್ದು ಕೊಳ್ಳಲು ಇದು ನನಗೆ ನೆರವಾಗಲಿದೆ. ಅದಕ್ಕಿಂತಲೂ ಮುಖ್ಯವಾಗಿ ಗರ್ಭಕೋಶ ಕ್ಯಾನ್ಸರ್ನಿಂದ ಪಾರು ಮಾಡುವುದಕ್ಕೆ ನೆರವಾಗುತ್ತದೆ.
ನಾನು ನನ್ನ ಗರ್ಭಕೋಶ ಉಳಿಸಿಕೊಳ್ಳಲು ಬಯಸಿದ್ದೇನೆ, ಏಕೆಂದರೆ ಈ ಭಾಗದಲ್ಲಿ ಸಂಭವಿಸಬಹುದಾದ ಕ್ಯಾನ್ಸರ್ ನನ್ನ ಕೌಟುಂಬಿಕ ಇತಿಹಾಸದ ಭಾಗವಲ್ಲ. ಎಲ್ಲ ಅಪಾಯಗಳನ್ನೂ ನಿವಾರಿಸಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ನನಗೆ ಈಗಲೂ ಕ್ಯಾನ್ಸರ್ ತಟ್ಟುವ ಅಪಾಯ ಇದ್ದೇ ಇದೆ. ನನ್ನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಕ್ಕಾಗಿ ನೈಸರ್ಗಿಕ ಮಾರ್ಗಗಳನ್ನು ನಾನು ಹುಡುಕಲಿದ್ದೇನೆ. ನಾನೀಗ ಸ್ತ್ರೀಸಹಜ ಭಾವನೆಯಲ್ಲಿದ್ದೇನೆ ಮತ್ತು ನನಗೆ ಮತ್ತು ನನ್ನ ಕುಟುಂಬಕ್ಕಾಗಿ ನಾನು ಮಾಡಿಕೊಂಡ ಆಯ್ಕೆಗೆ ಬದ್ಧವಾಗಿ ಉಳಿದಿದ್ದೇನೆ.`‘ಅಮ್ಮ ಅಂಡಾಶಯ ಕ್ಯಾನ್ಸರ್ನಿಂದ ಮೃತಪಟ್ಟಳು’ ಎಂದು ನನ್ನ ಮಕ್ಕಳು ಎಂದಿಗೂ ಹೇಳಲಾರರು ಎಂಬುದು ನನಗೆ ಗೊತ್ತಿದೆ.
ನಾನೀಗ ಅಳವಡಿಸಿಕೊಂಡಿರುವ ಹಾರ್ಮೋನ್ ಬದಲಾವಣೆಯ ವಿಚಾರ ಏನೇ ಇರಲಿ, ನನಗೀಗ ಮುಟ್ಟು ನಿಂತಿದೆ. ನನಗೆ ಇನ್ನು ಮುಂದೆ ಮಕ್ಕಳಾಗುವುದಂತೂ ಸಾಧ್ಯವಿಲ್ಲ. ನನ್ನಲ್ಲಿ ಕೆಲವೊಂದು ದೈಹಿಕ ಬದಲಾವಣೆಗಳಾಗುವುದನ್ನು ನಾನು ನಿರೀಕ್ಷಿಸಿದ್ದೇನೆ. ಆದರೆ ಏನೇ ಬಂದರೂ ಅದನ್ನು ಸರಳವಾಗಿ ತೆಗೆದುಕೊಳ್ಳುವ ಮನಃಸ್ಥಿತಿಯಲ್ಲಿದ್ದೇನೆ. ಹಾಗಂತ ನಾನು ಬಹಳ ಬಲಿಷ್ಠ ಎಂದೇನಲ್ಲ, ಬದಲಿಗೆ ಇದು ನನ್ನ ಜೀವನದ ಒಂದು ಭಾಗ. ಇದು ಹೆದರಿಕೊಳ್ಳುವ ವಿಚಾರವೇನಲ್ಲ.
ಇನ್ನೂ ಮಕ್ಕಳಾಗದ ಮಹಿಳೆಯರಿಗೆ ಇಂತಹುದೇ ಪರಿಸ್ಥಿತಿ ಎದುರಾದರೆ ಹೇಗಾದೀತು ಎಂಬ ಬಗ್ಗೆ ನಾನು ಗಂಭೀರವಾಗಿ ಆಲೋಚಿಸುತ್ತಲೇ ಇರುತ್ತೇನೆ. ಅವರ ಪರಿಸ್ಥಿತಿ ನನಗಿಂತ ತುಂಬಾ ಕಠಿಣವಾದುದು. ಮಹಿಳೆಯರಿಗೆ ಅಂಡಾಣುವಾಹಕ ನಾಳವನ್ನು ತೆಗೆದುಹಾಕಿದರೂ ಅಂಡಾಶಯವನ್ನು ಉಳಿಸಿಕೊಳ್ಳುವ ಆಯ್ಕೆ ಇದೆ ಎಂಬುದು ನನ್ನ ವಿಚಾರಣೆಯಿಂದ ಗೊತ್ತಾಗಿದೆ. ಹೀಗಾಗಿ ಮುಟ್ಟಾಗುವುದನ್ನು ನಿಲ್ಲಿಸಿಕೊಳ್ಳದೆ ಗರ್ಭ ಧರಿಸುವುದು ಸಾಧ್ಯವಿದೆ. ಅವರಿಗೆ ಇದರ ಬಗ್ಗೆ ಅರಿವು ಸಿಗಲಿ ಎಂದು ಹಾರೈಸುತ್ತೇನೆ.
ಇಂತಹ ನಿರ್ಧಾರಗಳನ್ನು ಮಾಡುವುದು ಸುಲಭವಲ್ಲ. ಆದರೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನೂ ನಿಭಾಯಿಸಲು ಮತ್ತು ನಿಯಂತ್ರಿಸಲು ಸಾಧ್ಯವಿದ್ದೇ ಇದೆ. ನೀವು ಸಲಹೆಗಳನ್ನು ಕೇಳಬಹುದು, ನಿಮ್ಮ ಮುಂದಿರುವ ಆಯ್ಕೆಗಳ ಬಗೆಗೆ ತಿಳಿದುಕೊಳ್ಳಬಹುದು ಮತ್ತು ನಿಮಗೆ ಸರಿಹೊಂದುವ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಜ್ಞಾನವೇ ಶಕ್ತಿ.