ಮನೋರಂಜನೆ

ರಜನೀಕಾಂತ್ ಪುತ್ರಿ ಸೌಂದರ್ಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ

Pinterest LinkedIn Tumblr

soundarya-rajinikanth

ಬೆಂಗಳೂರು: ಸೂಪರ್‍ಸ್ಟಾರ್ ರಜನೀಕಾಂತ್‍ರ ಪುತ್ರಿ ಸೌಂದರ್ಯಾ ರಜನೀಕಾಂತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೊಚಡಿಯಾನ್ ಸಿನಿಮಾದ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಸೌಂದರ್ಯಾ ಸದ್ಯದಲ್ಲೇ ಸ್ಯಾಂಡಲ್‍ವುಡ್‍ಗೆ ಬರಲಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಾ ಎಲ್ಲರ ಗಮನ ಸೆಳೆದ ಪ್ರತಿಭೆ ಸೌಂದರ್ಯಾ ತನ್ನ ಕ್ರಿಯಾಶೀಲ ಕೆಲಸವನ್ನು ತಂದೆ ರಜನೀಕಾಂತ್‍ರ ಕೊಚಡಿಯಾನ್ ಚಿತ್ರದಲ್ಲಿ ಪ್ರಯೋಗಿಸಿದ್ದರು. ಆದರೆ ಸೌಂದರ್ಯಾ ಈ ಸಿನಿಮಾದಲ್ಲಿ ತಕ್ಕಮಟ್ಟಿಗೆ ಯಶಸ್ಸು ಪಡೆಯುವುದರಲ್ಲಿ ವಿಫಲರಾದರು.

ತಮ್ಮ ಗ್ರಾಫಿಕ್ ಡಿಸೈನ್ ಕೆಲಸದ ಜೊತೆಗೆ, ಆಗಾಗ ತಮಿಳು ಚಿತ್ರಗಳ ನಿರ್ಮಾಣದ ಜವಾಬ್ದಾರಿ ಹೊರುತ್ತಿದ್ದ ಸೌಂದರ್ಯಾ, ಸದ್ಯ ಕನ್ನಡದಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಇವರ ಈ ನಿರ್ಧಾರಕ್ಕೆ ಕಾರಣವಾಗಿರುವುದು ಯಶ್ ಅಭಿನಯದ ರಾಮಾಚಾರಿ ಚಿತ್ರ. ರಾಮಾಚಾರಿ ಚಿತ್ರ ನೋಡಿ ಫಿದಾ ಆಗಿರುವ ಸೌಂದರ್ಯಾ ತಮ್ಮ ತಂದೆಯ ತಾಯಿನಾಡಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ.

ರಾಮಾಚಾರಿ ನಿರ್ದೇಶಕ ಸಂತೋಷ್ ಆನಂದ್‍ರಾಮ್‍ಗೆ ಸಿನಿಮಾ ಮಾಡಿಕೊಡಲು ಹೇಳಿರುವ ಸೌಂದರ್ಯಾ, ಸದ್ಯದಲ್ಲೇ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಒಟ್ಟಿನಲ್ಲಿ ಇತ್ತೀಚೆಗೆ ನಮ್ಮ ಕನ್ನಡ ಚಿತ್ರರಂಗ ಭಾರತೀಯ ಸಿನಿಮಾರಂಗವನ್ನು ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹವಾದ ವಿಚಾರವಾಗಿದೆ.

ಸ್ಯಾಂಡಲ್‍ವುಡ್‍ನಲ್ಲಿ ಎಂಟ್ರಿ ನೀಡಿ ನಿರ್ದೇಶನ ಆರಂಭಿಸುತ್ತಾರ? ಇಲ್ಲಾ ತಮ್ಮ ಹಳೆಯ ಗ್ರಾಫಿಕ್ ಡಿಸೈನಿಂಗ್ ವೃತ್ತಿಯನ್ನೇ ಮುಂದುವರಿಸುತ್ತಾರ ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ.

Write A Comment