ಮನೋರಂಜನೆ

ಚೆರ್ರಿ ಚಿತ್ರೀಕರಣ: ಶುರುವಾಯ್ತು ಹೊಸ ‘ಆಟ’

Pinterest LinkedIn Tumblr

crec30CHARRY2_0

ನಿರ್ದೇಶಕ ಆರ್‌. ಚಂದ್ರು ಬಳಿ ಸಹಾಯಕನಾಗಿ ಕೆಲಸ ಮಾಡಿದ್ದ ಜಯರಾಮ್ ಭದ್ರಾವತಿ, ‘ಚೆರ್ರಿ’ಯೊಂದಿಗೆ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಕಳೆದ ವಾರವಷ್ಟೇ ಚಿತ್ರದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಬನಶಂಕರಿ ಬಡಾವಣೆಯ ಉದ್ಯಾನಕ್ಕೆ ಪತ್ರಕರ್ತರು ಭೇಟಿ ನೀಡಿದಾಗ, ನಾಯಕ–ನಾಯಕಿ ಸಂಭಾಷಣೆ ನಡೆಸುತ್ತಿದ್ದ ದೃಶ್ಯವನ್ನು ಛಾಯಾಗ್ರಾಹಕ ಚಂದ್ರಶೇಖರ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು.

‘ಆಟ’, ‘ದಿಲ್‌ವಾಲ’ ಸಿನಿಮಾ ಬಳಿಕ ಸುಮಂತ್‌ ಶೈಲೇಂದ್ರ ‘ಚೆರ್ರಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಚೆರ್ರಿ ಅಂದರೆ ಬೇರೇನೋ ಅಲ್ಲ. ನಾಯಕ ಚರಣ್‌ನ ಹೆಸರು ಅದು. ಆತನನ್ನು ಪ್ರೀತಿಯಿಂದ ಎಲ್ಲರೂ ಹಾಗೆ ಕರೆಯುತ್ತಾರೆ’ ಅಂದರು ಜಯರಾಮ್. ಇದೊಂದು ಸರಳ, ಸುಂದರ ಪ್ರೇಮಕತೆ. ಆ್ಯಕ್ಷನ್, ಕಾಮಿಡಿ ಹಾಗೂ ಸೆಂಟಿಮೆಂಟ್‌ನೊಂದಿಗೆ ಎಲ್ಲರೂ ನೋಡಬಹುದಾದ ಚಿತ್ರವಿದು ಎಂದು ಜಯರಾಮ್ ಮಾಹಿತಿ ನೀಡಿದರು.

ಸ್ಟ್ಯಾಂಪ್‌ ವೆಂಡರ್‌ ಮಗ, ನಾಯಕ ಚರಣ್ ತನಗಿಷ್ಟದಂತೆ ಜೀವನ ನಡೆಸುವ ಯುವಕ. ಹಾಸ್ಟೆಲ್‌ನಲ್ಲಿರುವ ನಾಯಕಿ ಮೇಲೆ ಆತನಿಗೆ ಬಲು ಪ್ರೀತಿ. ಆಕೆಯ ಹೃದಯವನ್ನು ಹೇಗೆ ಗೆಲ್ಲುತ್ತಾನೆ? ಆ ಬಳಿಕ ನಡೆಯುವ ಘಟನೆಗಳೇನು ಎಂಬುದು ‘ಚೆರ್ರಿ’ ಕಥೆ. ‘ಸಿನಿಮಾದಲ್ಲಿ ಎಲ್ಲರ ಗಮನ ಸೆಳೆಯುವುದು ಪಂಚಿಂಗ್ ಸಂಭಾಷಣೆಗಳು’ ಎಂದ ನಾಯಕ ಸುಮಂತ್ ಶೈಲೇಂದ್ರ, ಈ ಚಿತ್ರ ಮನೋರಂಜನೆಯ ಪ್ಯಾಕೇಜ್‌ ಎಂದು ಬಣ್ಣಿಸಿದರು. ನಾಯಕ ಬೈಕ್ ಮೇಲೆ ಹೋಗುತ್ತಲೇ ಹಲವಾರು ಫೈಟಿಂಗ್‌ ಮಾಡುವುದರಿಂದ ಅದಕ್ಕೆ ಪೂರಕವಾಗುವಂತೆ ಆರು ತಾಸುಗಳ ಕಾಲ ಪ್ರಯತ್ನ ಮಾಡಿ ಹೇರ್‌ಸ್ಟೈಲ್ ಬದಲಾಯಿಸಿದ್ದಾರೆ ಎಂದು ನಕ್ಕರು ಸುಮಂತ್.

ಮಾಡೆಲ್ ಆಗಿದ್ದ ಮಲೆಯಾಳಿ ಬೆಡಗಿ ರಕ್ಷ ಈಗಾಗಲೇ ಎರಡು ಮಲೆಯಾಳಂ ಹಾಗೂ ಒಂದು ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಚೆರ್ರಿ ಚಿತ್ರಕಥೆ ರೊಮ್ಯಾಂಟಿಕ್ ಆಗಿದೆ. ಕನ್ನಡಕ್ಕೆ ಬರಲು ಇದೊಂದು ಒಳ್ಳೆಯ ಅವಕಾಶ’ ಎಂದು ಅವರು ಹೇಳಿಕೊಂಡರು.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳಿದ್ದು, ಎರಡು ಹಾಡುಗಳ ಚಿತ್ರೀಕರಣವನ್ನು ವಿದೇಶದಲ್ಲಿ ಚಿತ್ರಿಸುವ ಯೋಚನೆ ಇದೆ. ಸಾಹಸ ದೃಶ್ಯಗಳನ್ನು ರವಿವರ್ಮ ಸಂಯೋಜಿಸಲಿದ್ದಾರೆ. ರಂಗಾಯಣ ರಘು ಸ್ಟಾಂಪ್‌ವೆಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ತೊಡಗಿಕೊಂಡಿರುವ ಜೋಡಿದಾರ್ ಹರೀಶ್ ಹಾಗೂ ಮಂಜುನಾಥ ಬಾಬು ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Write A Comment