ಮನೋರಂಜನೆ

ಕ್ರೂರ ಕಥಾನಕದ ಹೂತೋಟ ಐ (ತಮಿಳು)

Pinterest LinkedIn Tumblr

ಚಿತ್ರ: ಐ (ತಮಿಳು)
ತಾರಾಗಣ: ವಿಕ್ರಮ್, ಆಮಿ ಜಾಕ್ಸನ್, ಸುರೇಶ್‌ ಗೋಪಿ, ಉಪೆನ್ ಪಟೇಲ್, ಓಜಸ್‌ ಎಂ. ರಜನಿ, ಸಂತಾನಂ ಮತ್ತಿತರರು.
ನಿರ್ದೇಶನ:  ಶಂಕರ್
ನಿರ್ಮಾಪಕರು: ವಿ. ರವಿಚಂದ್ರನ್, ಡಿ. ರಮೇಶ್ ಬಾಬು

i

‘ಜಂಟಲ್‌ಮನ್’, ‘ಇಂಡಿಯನ್’, ‘ಮುದಲ್‌­ವನ್’, ‘ಅನ್ನಿಯನ್’ ಈ ಎಲ್ಲಾ ಸಿನಿಮಾ­ಗಳಲ್ಲಿ ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದವರಲ್ಲಿ ಇರುವ ಕ್ರೋಧದ ದೃಶ್ಯೀಕರಣವನ್ನು ವೈಭವಯುತವಾಗಿ ಮಾಡಿದ್ದ ಶಂಕರ್‌, ‘ಐ’ ಸಿನಿಮಾದಲ್ಲಿ ಅದನ್ನು ಸಾಕಷ್ಟು ದುರ್ಬಲ­ಗೊಳಿಸಿ ವೈಯಕ್ತಿಕ ನೆಲೆಗೆ ಇಳಿಸಿದ್ದಾರೆ. ಆದರೆ, ಸಿನಿಮಾದ ಇಂಚಿಂಚನ್ನೂ ನೋಡಿಸಿ­ಕೊಳ್ಳುವಂತೆ ಮಾಡುವ ಅವರ ತಾಂತ್ರಿಕ ಜಾಣತನ ಇದರಲ್ಲಿಯೂ ಮುಂದುವರಿದಿದೆ.

ಬಾಗಿದ ಬೆನ್ನಿನ, ಬೊಬ್ಬೆಗಳೆದ್ದ ಕುರೂಪಿ ದೇಹದ ನಾಯಕ­ನನ್ನು ಅವರು ಚಿತ್ರದುದ್ದಕ್ಕೂ ಪ್ರಕಟಪಡಿಸುವ ರೀತಿಯಲ್ಲಿ, ಅದರ ಹಿಂದೆ ಅಡಗಿದ ಸತ್ಯಗಳ ಅನಾವರಣದ ನಿರೂಪಣಾ ಪರಿಯಲ್ಲಿ ಶಂಕರ್‌ಗೆ ಅವರೇ ಸಾಟಿ. ಹೊಡೆದಾಟಗಳಲ್ಲಿ, ಹಾಡುಗಳಲ್ಲಿ, ಪ್ರೇಮ ನಿವೇದನೆಯಲ್ಲಿ, ನಾಯಕನ ತಮಿಳು­ತನ ಬಿಂಬಿಸುವ ಸಣ್ಣ ಸಣ್ಣ ಪರಿಕರಗಳ ಬಳಕೆಯಲ್ಲಿ ಶಂಕರ್‌ ಅವರದ್ದೇ ಆದ ಸಿನಿಮೀಯ ಶ್ರೀಮಂತಿಕೆ, ಎಚ್ಚರಿಕೆ, ಸಾವಧಾನ ಢಾಳಾಗಿ ಇವೆ.

ಕುರೂಪಿ ನಾಯಕನನ್ನು ಇಟ್ಟುಕೊಂಡೂ ಅವರು ಮಾಡಿ­ರುವುದು ‘ಬ್ಯೂಟಿಫುಲ್‌ ಸಿನಿಮಾ’ ಎನ್ನುವುದು ವಿಶೇಷ. ನಗುವಾಗ ನಕ್ಕು, ಅಳುವಾಗ ಅತ್ತು, ಕುರೂಪಿ ನಾಯಕನನ್ನು ಅತಿ ಸುಂದರ ನಾಯಕಿ ಆತುಕೊಳ್ಳುವಾಗ ಕಣ್ಣಾಲಿಗಳಲ್ಲಿ ಹನಿ ಮೂಡಿಸಿಕೊಳ್ಳುವಂತೆ ಮಾಡುವ ‘ಮೈಮರೆಸುವ ಗುಣ’ದ ಚುಚ್ಚುಮದ್ದನ್ನು ಅವರು ನೀಡಿದ್ದಾರೆ.

ಮಿಸ್ಟರ್‌ ಇಂಡಿಯಾ ಆಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟು­ಕೊಂಡ ಮಧ್ಯಮವರ್ಗದ ಬಡ ಹುಡುಗನ ಬದುಕು ಪಡೆದು­ಕೊಳ್ಳುವ ಅನಿರೀಕ್ಷಿತ ತಿರುವುಗಳು ಸಿನಿಮಾದ ವಸ್ತು. ಆ ತಿರುವು­ಗಳಲ್ಲಿ ಕೆಲವು ಅದೃಷ್ಟಕರ, ಒಂದಿಷ್ಟು ಸುಂದರ, ಬಹುತೇಕ ಕ್ರೂರ.

ಇದನ್ನೊಂದು ಸಹನೀಯ ಪಯಣ­ವಾಗಿ­ಸುವ ತಾಂತ್ರಿಕ ಜಾಣ್ಮೆಯ ಸ್ಕ್ರಿಪ್ಟ್ ಅನ್ನು ಶಂಕರ್‌ ನೆಚ್ಚಿ­ಕೊಂಡಿ­ದ್ದಾರೆ. ಸೇಡಿನ ಒನ್‌ಲೈನರ್‌ ಇದ್ದರೂ ಸಿನಿಮಾದಲ್ಲಿ ಹುಲ್ಲು­ಗಾವಲೂ ಇದೆ. ಹೂಗಿಡಗಳನ್ನು ಅರಳಿಸಿ, ಬೆಳೆಸುವ ಸಾವ­ಧಾನದ ಪ್ರೀತಿಯ ಅನಾವರಣವೂ ಇದೆ.

ಮೂರು ಗಂಟೆಯ ಅವಧಿಯನ್ನು ಮೀರಬೇಕಾದ ಸಿನಿಮಾ ಇದು ಅಲ್ಲ. ದೃಶ್ಯಗಳನ್ನು ಲಂಬಿಸುವ ಶಂಕರ್‌ ಅವರ ಜಾಯ­ಮಾನದ ಫಲಶ್ರುತಿ ಇದು.  ನಾಯಕನ ಸೇಡಿನ ಹೊಡೆತಕ್ಕೆ ಸಿಲುಕುವವರ ನರಕಯಾತನೆಯ ತೀವ್ರತೆಯನ್ನು ಒಂದಿಷ್ಟು ಕಡಿಮೆ ಮಾಡಿ ತೋರಿಸಿದ್ದಿದ್ದರೆ ಸಿನಿಮಾ ಇನ್ನಷ್ಟು ಹಿತವೆ­ನಿಸುತ್ತಿತ್ತು. ಬಹುಶಃ ಸತ್ಯದ ಕಹಿಯ ತೀವ್ರತೆಯನ್ನು ಹಾಗೆಯೇ ಉಳಿಸಿಕೊಳ್ಳುವ ಉದ್ದಿಶ್ಯ ನಿರ್ದೇಶಕರಿಗೆ ಇದ್ದಿರಬೇಕು.

ಹಲವು ಚಹರೆಗಳು, ದೇಹಭಾಷೆಗಳು, ಆಕಾರ–ತೂಕ­ಗಳನ್ನು ಬಯಸುವ ಪಾತ್ರದ ಪರಕಾಯ ಪ್ರವೇಶ ಮಾಡಿ­ರುವ ವಿಕ್ರಮ್ ಸೋಜಿಗದ ನಟ. ನಾಯಕಿ ಆಮಿ ಜಾಕ್ಸನ್ ಅವರ ಚೆಲುವು ಈಗತಾನೆ ಅರಳಿದ ಹೂವಿನಂತೆ. ಅಭಿನಯ­ದಲ್ಲೂ ಅವರು ಹಿಂದಿಲ್ಲ. ಹಿನ್ನೆಲೆ ಸಂಗೀತದಲ್ಲಿ ಔಚಿತ್ಯ ಪ್ರಜ್ಞೆ ಮೆರೆಯುವ ಎ.ಆರ್‌. ರೆಹಮಾನ್ ನೋಡಿಸಿಕೊಳ್ಳುವ ಹಾಡುಗಳಿಗೆ ಕೇಳಿಸಿಕೊಳ್ಳುವ ಕಸುವನ್ನು ಕೊಟ್ಟಿಲ್ಲ. ಸಿನಿಮಾ-­ಟೋ­ಗ್ರಾಫರ್‌ ಪಿ.ಸಿ. ಶ್ರೀರಾಮ್ ಕೆಲಸ ಹಾಗೂ ಗ್ರಾಫಿಕ್‌ ತಂಡದ ವೃತ್ತಿಪರತೆಗೆ ದಟ್ಟ ಸಾಕ್ಷ್ಯಗಳು ಸಿನಿಮಾದಲ್ಲಿ ಇವೆ.

ಹಿಡಿದಿಡುವ, ಚರ್ಚೆಗೆ ಗ್ರಾಸ ಒದಗಿಸುವ, ತಮ್ಮ ‘ಬ್ಲ್ಯಾಕ್‌ ಅಂಡ್ ವೈಟ್‌’ ಸೂತ್ರವನ್ನೇ ಮುದ್ದಿಸುವ ಶಂಕರ್ ಇನ್ನೊಂದು ನೋಡಿಸಿಕೊಳ್ಳುವ ಸಿನಿಮಾ ಕೊಟ್ಟಿದ್ದಾರೆ.

Write A Comment