ಮನೋರಂಜನೆ

ಅಭಿನಯದ ಸಾಣೆಯಷ್ಟೆ ಅಕ್ಷಯ್ ಒಲವು

Pinterest LinkedIn Tumblr

psmec17Akshay

‘ಸೂಪರ್‌ಸ್ಟಾರ್ ಎನ್ನುವುದರ ಮೇಲೆಲ್ಲ ನನಗೆ ನಂಬಿಕೆ ಇಲ್ಲ. ನಾನೊಬ್ಬ ಉತ್ತಮ ನಟ ಆಗಬೇಕು ಎನ್ನುವುದರ ಕಡೆಗೇ ನನ್ನ ತುಡಿತವಿದೆ’ ಎಂದಿದ್ದಾರೆ ಬಾಲಿವುಡ್‌ ನಟ ಅಕ್ಷಯ್ ಕುಮಾರ್. ಇಪ್ಪತ್ತು ವರ್ಷಗಳ ತಮ್ಮ ನಟನಾ ವೃತ್ತಿಯಲ್ಲಿ ಹಾಸ್ಯ, ಸಾಹಸ ಸೇರಿದಂತೆ ಹಲವು ಬಗೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಅಕ್ಷಯ್, ತಮಗೆ ಸೂಪರ್ ಸ್ಟಾರ್ ಎನ್ನುವ ಟ್ಯಾಗ್ ಇಷ್ಟವಿಲ್ಲ ಎಂದಿದ್ದಾರೆ.

‘ನಾನು ಯಾವುದೇ ಒಂದು ಪ್ರಕಾರದ ಪಾತ್ರಕ್ಕೆ ಸೀಮಿತಗೊಳ್ಳಲು ಬಯಸುವುದಿಲ್ಲ. ಸೂಪರ್ ಸ್ಟಾರ್ ಪಟ್ಟಕ್ಕೇರುವುದೇ ನನ್ನ ಬಹುದೊಡ್ಡ ಆಕಾಂಕ್ಷೆ ಅಲ್ಲ. ಮುಖ್ಯವಾಗಿ ಒಬ್ಬ ಉತ್ತಮ ನಟನಾಗಬೇಕು ಎಂದು ಬಯಸುತ್ತಿರುವವನು ನಾನು’ ಎನ್ನುವುದು ಅವರ ಸ್ಪಷ್ಟ ನಿಲುವು.

ಮುಂಬರುವ ಬಹು ತಾರಾಗಣದ ‘ಬೇಬಿ’ ಚಿತ್ರ, ಭಯೋತ್ಪಾದನೆಯ ಗಂಭೀರ ವಿಷಯವನ್ನು ಒಳಗೊಂಡಿದೆ ಎಂದಿರುವ ಅಕ್ಷಯ್, ಸಂದೇಶದೊಂದಿಗೆ ಈ ಚಿತ್ರದಲ್ಲಿ ಜನರನ್ನು ಹಿಡಿದಿಡುವ ಮನರಂಜನೆಯೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ‘ಈಗ ಭಯೋತ್ಪಾದನೆ ಬಹುಮುಖ್ಯ ಹಾಗೂ ಗಂಭೀರ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಈ ಬಗ್ಗೆ ಗಂಭೀರವಾಗಿ ಮಾತನಾಡಬೇಕಾದ ಹಾಗೂ ಅದರೊಂದಿಗೆ ಹೋರಾಡುವ ಶಕ್ತಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಬೇಬಿ ಚಿತ್ರ ಇದೇ ಕಥೆಯನ್ನು ಆಧರಿಸಿದೆ’ ಎನ್ನುತ್ತಾರೆ ಅಕ್ಷಯ್.

‘ಹಾಗಂತ ಬೇಬಿ ಕೇವಲ ನೀತಿಬೋಧೆ ಮಾಡುವ ಚಿತ್ರವಲ್ಲ, ಹಾಗಾದರೆ ಅದು ಜನರಲ್ಲಿ ಉತ್ಸಾಹ ಮೂಡಿಸದು. ಆಸಕ್ತಿದಾಯಕ ರೀತಿಯಲ್ಲಿ ಯುವ ಪೀಳಿಗೆಗೆ ಈ ಸಂದೇಶವನ್ನು ಮುಟ್ಟಿಸುವುದು ನಮ್ಮ ಉದ್ದೇಶ’ ಎಂಬ ವಿವರಣೆ ಅಕ್ಷಯ್ ಅವರದು. ‘ಬೇಬಿ ಚಿತ್ರದ ಕಥೆ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ನನ್ನ ತಂದೆ ಸೇನೆಯಲ್ಲಿದ್ದರು.

ಹೀಗಾಗಿ ಇದರ ಬಗ್ಗೆ ನನಗೆ ಹೆಚ್ಚು ಆಪ್ತ ಭಾವವಿದೆ. ಅಲ್ಲದೇ, ಆರ್ಮಿ ಬಗ್ಗೆ ನಾನು ಸಾಕಷ್ಟು ತಿಳಿದುಕೊಂಡಿದ್ದೇನೆ ಕೂಡ. ಈ ವಿಷಯದ ಬಗ್ಗೆ ಚಿತ್ರ ಮಾಡುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದಿದ್ದಾರೆ ಆ್ಯಕ್ಷನ್ ಹೀರೊ ಅಕ್ಷಯ್. ತಮ್ಮ ಮುಂದಿನ ಚಿತ್ರ ‘ಬ್ರದರ್ಸ್’ ಬಗ್ಗೆಯೂ ಅಷ್ಟೇ ನಿರೀಕ್ಷೆ ಇಟ್ಟುಕೊಂಡಿರುವ ಅಕ್ಷಯ್, ‘ಏರ್‌ಲಿಫ್ಟ್’ ಚಿತ್ರದ ಮೇಲೂ ಅತ್ಯಂತ ವಿಶ್ವಾಸ ಹೊಂದಿದ್ದಾರೆ.

‘ಸ್ಪೆಷಲ್ 26’ ಚಿತ್ರದ ನಂತರ ನಿರ್ದೇಶಕ ನೀರಜ್ ಪಾಂಡೆ ಜೊತೆ ಮತ್ತೆ ಕೈಜೋಡಿಸಿದ್ದು, ಈ ಬಾರಿ ಬೇಹುಗಾರಿಕೆಯ ಏಜೆಂಟನ ಪಾತ್ರದಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಅಕ್ಷಯ್ ಜೊತೆ ನಟಿ ತಾಪ್ಸಿ ಪನ್ನು ಅಭಿನಯಿಸುತ್ತಿರುವ ‘ಬೇಬಿ’ ಜನವರಿ 23ರಂದು ತೆರೆ ಕಾಣಲಿದೆ.

Write A Comment