ವಡೋದರ, ಡಿ.24: ಬರೋಡ ಹಾಗೂ ಜಮ್ಮು-ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ತನ್ನನ್ನು ನಿಂದಿಸಿದ ಪ್ರೇಕ್ಷಕನನ್ನು ಡ್ರೆಸ್ಸಿಂಗ್ ಕೋಣೆಗೆ ಕರೆಸಿ ಆತನ ಕಪಾಳಕ್ಕೆ ಎರಡೇಟು ಬಿಗಿದ ಬರೋಡಾ ಆಲ್ರೌಂಡರ್ ಯೂಸುಫ್ ಪಠಾಣ್ ಇದೀಗ ದಂಡ ಹಾಗೂ ನಿಷೇಧದ ಭೀತಿ ಎದುರಿಸುವಂತಾಗಿದೆ.
ರಿಲಯೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದಾಗ ಯುವ ಕ್ರಿಕೆಟ್ ಅಭಿಮಾನಿಯೋರ್ವ ನಿಂದಿಸಿದ ಕಾರಣಕ್ಕಾಗಿ ಕೋಪಗೊಂಡ ಪಠಾಣ್ ಪಂದ್ಯದ ಬಳಿಕ ಆತನನ್ನು ಡ್ರೆಸ್ಸಿಂಗ್ ರೂಮ್ಗೆ ಕರೆಸಿ ಕಪಾಳಕ್ಕೆೆ ಹೊಡೆದಿದ್ದಾರೆ. ಪಠಾಣ್ರಿಂದ ಪೆಟ್ಟು ತಿಂದ ಯುವಕ ಅಂಬಟಿ ರಾಯುಡು ಬ್ಯಾಟಿಂಗ್ ನಡೆಸುತ್ತಿದ್ದಾಗಲೂ ಅಸಭ್ಯವಾಗಿ ವರ್ತಿಸಿದ್ದ. ಆದರೆ ಪಠಾಣ್ ಇದರಿಂದ ಕೋಪಗೊಂಡು ಆತನ ಮೇಲೆ ಹಲ್ಲೆ ನಡೆಸಿರುವುದನ್ನು ಬರೋಡ ಕ್ರಿಕೆಟ್ ಅಸೋಸಿಯೇಶನ್ನ ಕಾರ್ಯದರ್ಶಿ ಸ್ನೇಹಾಲ್ ಪಾರಿಕ್ ದೃಢಪಡಿಸಿದ್ದಾರೆ.
ಯೂಸುಫ್ ಪಠಾಣ್ ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರೇಕ್ಷಕನಿಗೆ ಥಳಿಸಿದ ವಿಚಾರ ತಿಳಿದು ಡ್ರೆಸ್ಸಿಂಗ್ ರೂಮ್ಗೆ ಧಾವಿಸಿದ ಅವರ ಸಹೋದರ ಇರ್ಫಾನ್ ಪಠಾಣ್ ತನ್ನ ಅಣ್ಣನಿಗೆ ಸಮಾಧಾನ ಹೇಳಿದರು. ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೆಟ್ಟು ತಿಂದ ಯುವಕನ ಸಂಬಂಧಿಯೊಬ್ಬರು ಬಳಿಕ ಯೂಸುಫ್ ಪಠಾಣ್ರಲ್ಲಿ ಕ್ಷಮೆ ಯಾಚಿಸಿದಾಗ ಸಮಸ್ಯೆ ಬಗೆಹರಿದಿತ್ತು.
ಯೂಸುಫ್ ಪಠಾಣ್ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ವರದಿಯನ್ನು ಪಂದ್ಯದ ರೆಫರಿ ಬಿಸಿಸಿಐಗೆ ಕಳುಹಿಸಿಕೊಟ್ಟಿದ್ದು, ಕ್ರಿಕೆಟ್ ಮಂಡಳಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪಾರಿಕ್ ತಿಳಿಸಿದ್ದಾರೆ.