ಮುಂಬೈ: ಪಿಎಂಸಿ ಬ್ಯಾಂಕ್ ಹಗರಣ ಸಂಬಂಧಿಸಿದ ವಿಚಾರಣೆಗೆ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರ ಪತ್ನಿಯನ್ನು ಜಾರಿ ನಿರ್ದೇಶನಾಲಯವು ಎರಡನೇ ಬಾರಿಗೆ ವಿಚಾರಣೆಗೆ ಕರೆದಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದು, ಬಿಜೆಪಿಯ 121 ನಾಯಕರ ಹೆಸರುಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುವುದಾಗಿ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ, ಸಿಬಿಐ ಎಲ್ಲವನ್ನೂ ಕೇಂದ್ರ ಸರ್ಕಾರ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಮೊದಲೆಲ್ಲಾ ಈ ಸಂಸ್ಥೆಗಳು ದಾಳಿ ನಡೆಸಿವೆ ಅಂದರೆ ಅಲ್ಲೊಂದು ಮುಖ್ಯ ಹಗರಣ ಇದೆ ಎನ್ನುವಂತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಯಾರ ಮೇಲೆ ಮುನಿಸಿಕೊಂಡಿರುತ್ತದೆಯೋ ಅವರ ಮೇಲೆ ಈ ಸಂಸ್ಥೆಗಳು ದಾಳಿ ನಡೆಸುತ್ತಿವೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ರಾಜಕೀಯ ಕಿತ್ತಾಟಗಳು ಮುಖಾಮುಖಿಯಾಗಿರಬೇಕು. ನಾನು ಈ ಕುರಿತಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದೇನೆ. ನಾವು ಬೇರೆಯದ್ದೇ ರೀತಿಯಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದೇವೆ. ಬಿಜೆಪಿಯ 121 ನಾಯಕರ ಹೆಸರು ನನ್ನ ಬಳಿ ಇದೆ. ಅವರೆಲ್ಲರ ಹೆಸರನ್ನು ಇಡಿಗೆ ಸಲ್ಲಿಸುತ್ತೇನೆ. ಇನ್ನು 5 ವರ್ಷಗಳ ಕಾಲ ಅವರ ವಿಚಾರಣೆ ನಡೆಸಲು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನಲ್ಲಿ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಜಾರಿ ನಿರ್ದೇಶನಾಲಯವು ಎರಡು ಬಾರಿ ವಿಚಾರಣೆಗೆ ಕರೆಸಿದೆ. ಈ ಹಿಂದೆ ಎರಡು ಬಾರಿ ಸಮನ್ಸ್ ನೀಡಿದಾಗಲೂ ಆರೋಗ್ಯದ ನೆಪ ಹೇಳಿ ಅವರು ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು.
Comments are closed.