ಮುಂಬೈ (ಆಗಸ್ಟ್ 22); ಕಳೆದ ಮಾರ್ಚ್ನ ನಿಜಾಮುದ್ದೀನ್ ಬಳಿ ನಡೆದಿದ್ದ ತಬ್ಲಿಘಿ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ 29 ವಿದೇಶಿ ಪ್ರಜೆಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದು ಪಡಿಸಿರುವ ಮುಂಬೈ ಹೈಕೋರ್ಟ್ಈ ಪ್ರಕರಣದಲ್ಲಿ ತಬ್ಲಿಘಿಗಳನ್ನು ’ಬಲಿಪಶು’ಗಳು ಎಂದು ಕರೆದಿದೆ.
ಈ ವೇಳೆ ರಾಷ್ಟ್ರದ ಮಾಧ್ಯಮಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, “ತಬ್ಲಿಘಿ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಪ್ರಜೆಗಳ ಬಗ್ಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿವೆ. ಭಾರತದಲ್ಲಿ ಕೊರೋನಾ ಹರಡಲು ಇವರೇ ಕಾರಣ ಎನ್ನುವ ರೀತಿಯಲ್ಲಿ ಚಿತ್ರಣವನ್ನು ಮಾಧ್ಯಮಗಳು ಪ್ರಸಾರ ಮಾಡಿದೆ” ಎಂದು ಮಾಧ್ಯಮಗಳಿಗೆ ಛೀಮಾರಿ ಹಾಕಿದೆ.
ದೆಹಲಿಯ ನಿಜಾಮುದ್ದೀನ್ನಲ್ಲಿನ ಸಭೆಗೆ ಹಾಜರಾಗುವ ಮೂಲಕ ತಮ್ಮ ಪ್ರವಾಸಿ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.
ಸರ್ಕಾರವನ್ನೂ ಟೀಕಿಸಿರುವ ನ್ಯಾಯಾಲಯ “ದೇಶದಲ್ಲಿ ಸಾಂಕ್ರಾಮಿಕ ಬಿಕ್ಕಟ್ಟು ಉಂಟಾದಾಗ ಸರ್ಕಾರವು ರಾಜಕೀಯವಾಗಿ ತಮ್ಮನ್ನು ಉಳಿಸಿಕೊಳ್ಳಲು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತಿತ್ತು” ಎಂದು ಅಭಿಪ್ರಾಯಪಟ್ಟಿದೆ.
ತಬ್ಲಿಘಿ ಜಮಾಅತ್ನ ಚಟುವಟಿಕೆಗಳು 50 ವರ್ಷಗಳಿಂದಲೂ ನಡೆಯುತ್ತಿದೆ. ನಿಝಾಮುದ್ದೀನ್ ಮರ್ಕಝ್ ಕಾರ್ಯಕ್ರಮದಲ್ಲಿ ಈ ವಿದೇಶಿಗರು ಭಾಗವಹಿಸುವ ಬಗ್ಗೆ ಮತ್ತು ವೀಸಾಗಳನ್ನು ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಅರಿವಿತ್ತು ಎಂದು ಕೋರ್ಟ್ ಹೇಳಿದೆ.
ಏಪ್ರಿಲ್ನಲ್ಲಿ ದೆಹಲಿಯ ನಿಜಾಮುದ್ದೀನ್ನಲ್ಲಿನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 9,000 ಜನರು ಭಾಗವಹಿಸಿದ್ದರು. ಈ ಘಟನೆಯನ್ನು ಬಳಸಿಕೊಂಡು ಮಾಧ್ಯಮಗಳು ಮತ್ತು ಬಿಜೆಪಿ ಸೇರಿದಂತೆ ಹಲಲವಾರು ಬಲಪಂಥೀಯ ಸಂಘಟನೆಗಳು ವಿವಾದವನ್ನು ಸೃಷ್ಟಿಸಿ ಭಾರತದಲ್ಲಿ ಕೊರೋನಾ ಪ್ರಕರಣಗಳು ಹರಡಲು ಇವರೇ ಕಾರಣ ಎಂದು ತಪ್ಪಾಗಿ ನಿರೂಪಿಸಿದ್ದರು.
Comments are closed.