ಮುಂಬೈ

ಪೌರತ್ವ (ತಿದ್ದುಪಡಿ) ಕಾಯ್ದೆ ಸಿಂಧುತ್ವದ ವಿರುದ್ಧ ‘ಸುಪ್ರೀಂ’ ಮೊರೆ ಹೋದ ಕಾಂಗ್ರೆಸ್

Pinterest LinkedIn Tumblr


ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಸಿಂಧುತ್ವದ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಹೇಳಿದೆ.

ಕಾನೂನಿನ ಮುಂದೆ ಯಾವುದೇ ವ್ಯಕ್ತಿಗೆ ಸಮಾನತೆಯನ್ನು ರಾಜ್ಯವು ನಿರಾಕರಿಸುವಂತಿಲ್ಲ ಅಥವಾ ದೇಶದೊಳಗೆ ಕಾನೂನಿನಡಿ ಸಮಾನ ರಕ್ಷಣೆ ನೀಡಬೇಕೆಂದು ಭಾರತ ಸಂವಿಧಾನದ 14ನೇ ವಿಧಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನ, ಅಪ್ಘಾನಿಸ್ತಾನ, ಮತ್ತು ಬಾಂಗ್ಲಾದೇಶದ ಮುಸ್ಲೀಂಯೇತರ ವಲಸಿಗರಿಗೆ ಭಾರತದ ಪೌರತ್ವ ಕಲ್ಪಿಸುವ ಉದ್ದೇಶದ ಪೌರತ್ವ (ತಿದ್ದುಪಡಿ) ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿಯೂ ಅಂಗೀಕಾರಗೊಂಡು, ಗುರುವಾರ ರಾತ್ರಿ ರಾಷ್ಟ್ರಪತಿಯವರ ಅಂಕಿತವೂ ಬಿದ್ದಿದೆ.

ವಿವಾದಾತ್ಮಕ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್ ನಿನ್ನೆ ಹೇಳಿಕೆ ನೀಡಿತ್ತು. ಇದು
ಪ್ರಶ್ನಿಸಲು ಅರ್ಹವಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿಕೆ ನೀಡಿದ್ದರು.

ಪೌರತ್ವ ಕಾಯ್ದೆಯಿಂದ ಸಂವಿಧಾನದ ಮೂಲಭೂತ ವಿಚಾರಗಳ ಮೇಲೆ ಹಲ್ಲೆಯಾಗಲಿದ್ದು, ಸುಪ್ರೀಂಕೋರ್ಟ್ ನಲ್ಲಿ ಕಾಯ್ದೆಯ ಅದೃಷ್ಟ ನಿರ್ಧಾರವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಅಸಂವಿಧಾನಿಕ ಪೌರತ್ವ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ತಿಳಿಸಿದ್ದಾರೆ.

ತೀವ್ರ ಚರ್ಚೆಯ ನಂತರ ರಾಜ್ಯಸಭೆಯಲ್ಲಿ ಪೌರತ್ವ ( ತಿದ್ದುಪಡಿ ) ಮಸೂದೆ ಬುಧವಾರ ಅಂಗೀಕಾರಗೊಂಡಿತ್ತು. ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಕೂಡಲೇ ವಿಚಾರಣೆ ನಡೆಸುವಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಮಾಹುವಾ ಮೊಯಿತ್ರಾ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ , ಬೇರೆ ದಿನ ವಿಚಾರಣೆ ನಡೆಸುವುದಾಗಿ ಹೇಳಿತು.

Comments are closed.