ಮುಂಬೈ

ಎನ್​​ಸಿಪಿ ಶಾಸಕ ನಾಪತ್ತೆ; ದೂರು ದಾಖಲು

Pinterest LinkedIn Tumblr


ಮುಂಬೈ(ನ.24): ಮಹಾರಾಷ್ಟ್ರದ ನ್ಯಾಷನಲಿಸ್ಟ್​ ಕಾಂಗ್ರೆಸ್​​ ಪಕ್ಷದ ಶಾಸಕ ಕಾಣೆಯಾಗಿದ್ದಾರೆ ಎಂದು ಪೊಲೀಸ್​ ದೂರು ದಾಖಲಾಗಿದೆ. ಇಲ್ಲಿನ ದಿಢೀರ್​​ ರಾಜಕೀಯ ಬೆಳವಣಿಗೆ ಮಧ್ಯೆ ಅಜಿತ್​​​​ ಪವಾರ್​​ ನೇತೃತ್ವದ ಹಲವು ಎನ್​​ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರು. ನಿನ್ನೆ ಶನಿವಾರ ಬೆಳಗ್ಗೆ ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ದೇವೇಂದ್ರ ಫಡ್ನವೀಸ್​​​ ಎರಡನೇ ಬಾರಿ ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸಿದರು. ಅಜಿತ್​​ ಪವಾರ್​​​​​​​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡರು. ಈ ವೇಳೆ ಪ್ರಮಾನ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಎನ್​​ಸಿಪಿ ಶಾಸಕರು ದಿಢೀರ್​​ ಕಾಣೆಯಾಗಿದ್ದಾರೆ ಎಂಬ ದೂರು ಶಹಪುರ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದೆ.

ಎನ್​​ಸಿಪಿ ಶಾಸಕ ದೌಲತ್ ದರೋಡ ರಾಜಭವನಕ್ಕೆ ಆಗಮಿಸಿದ್ದಾಗ ಕಾಣೆಯಾದವರು ಎಂದು ಹೇಳಲಾಗುತ್ತಿದೆ. ಮಾಜಿ ಶಾಸಕ ಪಾಂಡುರಂಗ ಬರೋರ ಎಂಬುವರು ಈ ಸಂಬಂಧ ಶಹಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ದೂರಿನಲ್ಲಿ ಶುಕ್ರವಾರ ರಾತ್ರಿಯೇ ದರೊಡ ಥಾಣೆಯಿಂದ ಪುತ್ರ ಕರಣ್ ಜತೆ ಮುಂಬೈಗೆ ಆಗಮಿಸಿದ್ದರು. ಆದರೀಗ ಮುಂಬೈಗೆ ಆಗಮಿಸಿದ ನಂತರವೇ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪ್ರಸ್ತಾಪ ಮಾಡಿದ್ದಾರೆ.

ಈ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತಾಡಿದ ಪುತ್ರ ಕರಣ್​​​​​ ತಂದೆ ದರೋಡ ನಿನ್ನೆಯಿಂದಲೂ ಫೋನ್​ ಮಾಡಿಲ್ಲ. ಯಾರ ಫೋನಿಗೂ ಸಿಗುತ್ತಿಲ್ಲ. ನಮಗೂ ಶರದ್​​ ಪವಾರ್​​ಗೆ​ ಬೆಂಬಲ ನೀಡಬೇಕೆಂದು ಆಸೆ ಇದೆ ಎಂದರು.

ಮಹಾರಾಷ್ಟ್ರದಲ್ಲಿ ಮೊನ್ನೆಯವರೆಗೂ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ಎಂದಿದ್ದ ಸಮೀಕರಣ ನಿನ್ನೆ ರಾತ್ರೋರಾತ್ರಿ ಬಿಜೆಪಿ-ಎನ್​ಸಿಪಿಯಾಗಿ ಬದಲಾಗಿ ಹೋಗಿದೆ. ಒಂದೆಡೆ ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಬಿಜೆಪಿ ಜತೆ ಸರ್ಕಾರ ರಚನೆಗೆ ಕೈಜೋಡಿಸಿದ್ದಾರೆ. ಇನ್ನೊಂದೆಡೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಈಗಲೂ ಕಾಂಗ್ರೆಸ್ ಮತ್ತು ಶಿವಸೇನಾ ಜೊತೆಯೇ ನಿಂತಿದ್ದಾರೆ. ಅಣ್ಣನ ಮಗ ಅಜಿತ್ ಪವಾರ್ ಮಾತ್ರವೇ ಬಿಜೆಪಿ ಜೊತೆ ಹೋಗಿರುವುದು, ಎನ್​​ಸಿಪಿ ಶಾಸಕರು ಯಾರು ಹೋಗಿಲ್ಲ ಎಂದು ಹೇಳಲಾಗುತ್ತದೆ.

ಮೂಲಗಳ ಪ್ರಕಾರ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಬಹುಮತ ಸಾಬೀತುಪಡಿಸಲು ಇನ್ನೊಂದು ವಾರ ಕಾಲ, ಅಂದರೆ ನ. 30ರವರೆಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಶಿವಸೇನಾ ರೆಸಾರ್ಟ್​ಗಳನ್ನ ಆಯ್ಕೆ ಮಾಡಿಕೊಂಡಿವೆ. ಶಿವಸೇನಾದವರು ತಮ್ಮ ಶಾಸಕರನ್ನು ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ರೆಸಾರ್ಟ್​​ನಲ್ಲಿ ಒಂದು ವಾರ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿತ್ತು. ಈ ಮಧ್ಯೆ ಎನ್​​​ಸಿಪಿ ಶಾಸಕ ಕಾಣೆಯಾಗಿರುವುದು ಆಪರೇಷನ್​​ ಬಿಜೆಪಿ ಮುನ್ಸೂಚನೆ ಎಂಬ ಚರ್ಚೆ ನಡೆಯುತ್ತಿದೆ.

Comments are closed.