ಮುಂಬೈ

8 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಾಯಿ

Pinterest LinkedIn Tumblr

ಥಾಣೆ : ಎಂಟು ವರ್ಷದ ಮಗನನ್ನೇ ತಾಯಿಯೊಬ್ಬಳು ಕತ್ತು ಹಿಸುಕಿ ಕೊಂದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಅರ್ನವ್ (8) ಎಂಬ ಬಾಲಕನನ್ನು ಕೊಂದ ಸಂಬಂಧ ತಾಯಿ ಶೀತಲ್ (35) ಎಂಬಾಕೆಯನ್ನು ಪೊಲೀಸರು ಬಂದಿಸಿದ್ದಾರೆ. ಪತಿಯಿಂದ ಬೇರ್ಪಟ್ಟ ಬಳಿಕ ಹಣಕಾಸು ತೊಂದರೆ ಎದುರಾದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.

ಶೀತಲ್, ಅರ್ನವ್ ಹಾಗೂ ಶೀತಲ್ ಸಹೋದರಿ ಶ್ವೇತಾ ಶಿರ್ಸತ್ (28) ಪೂರ್ವ ಬದ್ಲಾಪುರದಲ್ಲಿ ವಾಸವಿದ್ದರು. ವಿಖ್ರೋಲಿಯಲ್ಲಿ ವಾಸವಿರುವ ಪತಿ ವೈಭವ್‌ನಿಂದ ಹದಿನೆಂಟು ತಿಂಗಳ ಹಿಂದೆ ಶೀತಲ್ ಬೇರ್ಪಟ್ಟಿದ್ದು, ವಿಚ್ಛೇದನ ಪ್ರಕ್ರಿಯೆ ನಡೆದಿದೆ. ಹತ್ತು ವರ್ಷ ಹಿಂದೆ ಇವರ ವಿವಾಹವಾಗಿತ್ತು.

ಶ್ವೇತಾ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಶೀತಲ್ ಮುಂಜಾನೆ 5:30ರ ಸುಮಾರಿಗೆ ಕರೆ ಮಾಡಿ ಮಗನನ್ನು ಕೊಂದ ವಿಷಯ ತಿಳಿಸಿದ್ದಾಳೆ. ದಿವಾದಲ್ಲಿ ತಾಯಿಮನೆಯಲ್ಲಿದ್ದ ಶ್ವೇತಾ ತಕ್ಷಣ ಪೊಲೀಸರು ಹಾಗೂ ಥಾಣೆ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಪಾಳಿಯಲ್ಲಿದ್ದ ತಾಯಿ ಮಂದಾ ಶಿರ್ಸತ್ (53) ಅವರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರೂ ಶೀಲತ್ ಮನೆಗೆ ಧಾವಿಸಿದಾಗ ಮಗು ಮೃತಪಟ್ಟಿರುವುದು ಕಂಡುಬಂತು.

“ಶೀತಲ್ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಗೃಹಿಣಿಯಾಗಿರುವ ತಾನು ಮಗನನ್ನು ಹೇಗೆ ಸಾಕುವುದು ಎಂಬ ಚಿಂತೆಯಿಂದ ಈ ಕೃತ್ಯ ಎಸಗಿದ್ದಾಳೆ” ಎಂದು ತನಿಖಾಧಿಕಾರಿ ಹರ್ಷಲ್ ಕುಲಕರ್ಣಿ ಹೇಳಿದ್ದಾರೆ. ಮಗುವಿನ ಮೃತದೇಹವನ್ನು ತಂದೆಗೆ ಅಂತ್ಯಸಂಸ್ಕಾರಕ್ಕಾಗಿ ಹಸ್ತಾಂತರಿಸಲಾಗಿದೆ. ಸುದ್ದಿ ಕೇಳಿ ಆಘಾತಕ್ಕೀಡಾದ ತಂದೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದ ಕಾರಣ ಪ್ರತ್ಯೇಕವಾಗಿದ್ದಾಗಿ ಪತಿ ಹೇಳಿದ್ದಾರೆ.

Comments are closed.