ಮುಂಬೈ

ಧೀರೂಭಾಯಿ ಅಂಬಾನಿ ಚೌಕವನ್ನು ಸಮರ್ಪಿಸಿದ ನೀತಾ ಅಂಬಾನಿ

Pinterest LinkedIn Tumblr

ಮುಂಬಯಿ: ನಗರದ ಮೇಲಿನ ಪ್ರೀತಿಯ ದ್ಯೋತಕವಾಗಿ, ನೀತಾ ಮತ್ತು ಮುಖೇಶ್ ಅಂಬಾನಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ವತಿಯಿಂದ ನಗರದ ಹೊಸ, ಹೆಮ್ಮೆಯ ಗುರುತಾದ ಧೀರೂಭಾಯಿ ಅಂಬಾನಿ ಚೌಕವನ್ನು ಬುಧವಾರ ಉದ್ಘಾಟಿಸಲಾಯಿತು.

ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯ ಎದುರಿನಲ್ಲಿರುವ ಈ ಧೀರೂಭಾಯಿ ಅಂಬಾನಿ ಚೌಕವನ್ನು ನೀತಾ ಅಂಬಾನಿ ಮುಂಬೈ ನಗರಕ್ಕೆ, ರಾಷ್ಟ್ರಕ್ಕೆ, 20 ಮಿಲಿಯನ್ ಮುಂಬೈವಾಸಿಗಳು ಹಾಗೂ ಪ್ರವಾಸಿಗಳಿಗೆ ಸಮರ್ಪಿಸಿದ್ದಾರೆ.

ಧೀರೂಭಾಯಿ ಅಂಬಾನಿ ಚೌಕವು ವಿಶ್ವದರ್ಜೆಯ ಬಹುಪಯೋಗಿ ಕೇಂದ್ರವಾದ ಜಿಯೋ ವರ್ಲ್ಡ್ ಸೆಂಟರಿನ ಭಾಗವಾಗಿದೆ. ಅತಿದೊಡ್ಡ ಹಾಗೂ ಅತ್ಯುತ್ತಮ ಜಾಗತಿಕ ಸಮಾವೇಶ ಸವಲತ್ತು-ಸೇವೆಗಳನ್ನು ಭಾರತದಲ್ಲಿ ಹೊಂದುವ ಉದ್ದೇಶದಿಂದ, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಎಂಎಂಆರ್‌ಡಿಎಗಳ (ಮುಂಬಯಿ ಮೆಟ್ರೋಪಾಲಿಟನ್ ರೀಜನ್ ಡೆವೆಲಪ್ಮೆಂಟ್ ಅಥಾರಿಟಿ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಸಮರ್ಪಣೆಯ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಶನ್ ಸ್ಥಾಪಕಿ-ಮುಖ್ಯಸ್ಥೆ ಶ್ರೀಮತಿ ನೀತಾ ಅಂಬಾನಿ ಮಾತನಾಡಿ, “ರಾಷ್ಟ್ರನಿರ್ಮಾಣದ ಪ್ರತಿ ಹಂತದಲ್ಲೂ ನಮ್ಮ ದೇಶಕ್ಕೆ ಜಾಗತಿಕ ಹಿರಿಮೆ ಸಾಧಿಸುವ ಸಾಮರ್ಥ್ಯವಿದೆ ಎಂದು ನಂಬಿದ್ದ ಭಾರತದ ಮಹಾನ್ ಪುತ್ರನ ಕನಸನ್ನು ಧೀರೂಭಾಯಿ ಅಂಬಾನಿ ಚೌಕ ಹಾಗೂ ಜಿಯೋ ವರ್ಲ್ಡ್ ಸೆಂಟರ್ ನನಸಾಗಿಸಿವೆ” ಎಂದು ಹೇಳಿದರು.

ಭಾರತದ ಅತಿ ದೊಡ್ಡ ಸಮಾಜಸೇವಾ ಸಂಸ್ಥೆಯ ನೇತೃತ್ವ ವಹಿಸಿರುವ, ಶಿಕ್ಷಣ ಮತ್ತು ಮಕ್ಕಳ ಕಲ್ಯಾಣದಲ್ಲಿ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಮುನ್ನಡೆಸಿರುವ ನೀತಾ ಅಂಬಾನಿ ಈ ಕಾರ್ಯಕ್ರಮವನ್ನು ಅನನ್ಯ ರೀತಿಯಲ್ಲಿ ಆಯೋಜಿಸಿದ್ದುದು ವಿಶೇಷವಾಗಿತ್ತು.

ಸುಮಾರು 2000 ಸೌಲಭ್ಯವಂಚಿತ ಮಕ್ಕಳನ್ನು, ಧೀರೂಭಾಯಿ ಅಂಬಾನಿ ಚೌಕದಲ್ಲಿ ಮನಸೂರೆಗೊಳ್ಳುವ ಸಂಗೀತ ಕಾರಂಜಿ ಪ್ರದರ್ಶನಕ್ಕಾಗಿ ಆಹ್ವಾನಿಸಲಾಗಿತ್ತು. ‘ವಂದೇ ಮಾತರಂ’ ಮತ್ತು ‘ಜೈ ಹೋ’ – ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಸಂಗೀತದ ಕಾರಂಜಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

“ನಮ್ಮ ದೇಶದ ಅತಿದೊಡ್ಡ ಹಾಗೂ ಅತ್ಯುತ್ತಮ ಜಾಗತಿಕ ಸಮಾವೇಶ ಕೇಂದ್ರಗಳಲ್ಲಿ ಒಂದಾಗಲಿರುವ ವಿಶ್ವದರ್ಜೆಯ ಬಹುಪಯೋಗಿ ಜಿಯೋ ವರ್ಲ್ಡ್ ಸೆಂಟರ್‌ನ ಅಂಗವಾದ ಈ ಆಧುನಿಕ ಹಾಗೂ ಅತಿ ನವ್ಯ ಚೌಕಕ್ಕೆ ಮುಂದಿನ ದಿನಗಳಲ್ಲಿ ಭೇಟಿನೀಡುವ ಎಲ್ಲ ಮುಂಬಯಿಕರ್‌ಗಳ ಕಣ್ಣುಗಳನ್ನು ಈ ಕಾರಂಜಿ ತಣಿಸಲಿದೆ. ವರ್ಷಾಂತ್ಯದ ವೇಳೆಗೆ ಜಿಯೋ ವರ್ಲ್ಡ್ ಸೆಂಟರ್ ಪ್ರಾರಂಭವಾದಾಗ ಅದು ಜನರು ಒಟ್ಟಾಗಿ ಸೇರುವ, ಕಲೆಗಳನ್ನು ಪ್ರಶಂಸಿಸುವ, ಆಲೋಚನೆಗಳನ್ನು ಹಂಚಿಕೊಳ್ಳುವ, ಸಂಸ್ಕೃತಿಯನ್ನು ಆಚರಿಸುವ ಹಾಗೂ ನಮ್ಮ ಮಹಾನ್ ನಗರದ ಪರಂಪರೆ-ವೈಭವಗಳಲ್ಲಿ ನೆನೆಯುವ ಕೇಂದ್ರವಾಗಲಿದೆ!”, ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ನಗರದ ಎಲ್ಲ ಅನಾಥಾಲಯ ಹಾಗೂ ವೃದ್ಧಾಶ್ರಮಗಳಲ್ಲಿ ವಾರಪೂರ್ತಿ ನಡೆಯಲಿರುವ ಅನ್ನಸೇವಾ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ನೀತಾ ಅಂಬಾನಿಯವರ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಶಿಕ್ಷಣ, ಕ್ರೀಡೆ, ಗ್ರಾಮೀಣಾಭಿವೃದ್ಧಿ, ಕಲೆಯ ಪ್ರಚಾರ ಮುಂತಾದ ಕ್ಷೇತ್ರಗಳಲ್ಲಿ ಹಲವು ಪರಿಣಾಮಕಾರಿ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

Comments are closed.