
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ತಮ್ಮ ಪಕ್ಷದ ಘೋಷ ವಾಕ್ಯವನ್ನು ಪ್ರಕಟಿಸಿದ್ದಾರೆ. ಮುಂಬರುವ 2019 ರ ಲೋಕಸಭಾ ಚುನಾವಣೆಗೆ ರಾಮಮಂದಿರ ಮೊದಲು, ಸರ್ಕಾರ ರಚನೆ ನಂತರ ಎಂದು ಉದ್ದವ್ ಠಾಕ್ರೆ ಘೋಷಿಸಿದ್ಧಾರೆ. ಈ ಮೂಲಕ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, “ಮೊದಲು ಮಂದಿರ ನಿರ್ಮಾಣವಾಗಬೇಕು, ಬಳಿಕ ಸರ್ಕಾರದ ರಚನೆ ಬಗ್ಗೆ ಯೋಚಿಸುತ್ತೇವೆ. ಇದು ನನ್ನ ಬೇಡಿಕೆಯಲ್ಲ, ಬದಲಿಗೆ ಅಖಂಡ ಹಿಂದುಗಳ ಒತ್ತಾಯವಾಗಿದೆ. ಹಾಗಾಗಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು. ನಮ್ಮ ಪಕ್ಷವೂ ಕೂಡಲೇ ನಿರ್ಮಾಣ ಕಾರ್ಯ ಶುರುಮಾಡುವಂತೆ ಆಗ್ರಹಿಸುತ್ತದೆ ಎಂದು ಹೇಳಿದರು.
ಇದೇ ನವೆಂಬರ್ 24 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರ ಜೊತೆಗೆ ರಾಮಮಂದಿರ ಬಗ್ಗೆ ಚರ್ಚೆ ನಡೆಸಲಿದ್ದೇವೆ. ದೇಶದ ವಿವಿಧ ಭಾಗಗಳಿಂದ ನಮ್ಮ ಪಕ್ಷದ ಮುಖಂಡರು ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿದ್ದರೂ ಬಿಜೆಪಿ ಮಂದಿರ ನಿರ್ಮಾಣದಲ್ಲಿ ವೈಫಲ್ಯವಾಗಿದೆ ಎಂದರು.
ಈ ಹಿಂದೆ ಕೂಡ ಉದ್ಧವ್ ಠಾಕ್ರೆ ಅವರು, ಹಿಂದೂ ಸಮಾಜದ ಬಹುದೊಡ್ಡ ಕನಸಿನ ದೇಗುಲ ರಾಮಮಂದಿರವನ್ನು ಇಲ್ಲಿಯವರೆಗೂ ಅಯೋಧ್ಯೆಯಲ್ಲಿ ಯಾಕೇ ನಿರ್ಮಾಣ ಮಾಡಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಪ್ರಶ್ನಿಸಿದ್ದರು. ಅಲ್ಲದೇ ರಾಮಮಂದಿರ ನಿರ್ಮಾಣ ವಿಳಂಬದ ಹಿಂದೆ ಏನಾದ್ರೂ ರಾಜಕೀಯ ಲೆಕ್ಕಚಾರವಿದ್ದರೆ ಹೇಳಿ? ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮುಂಬೈನಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ್ಯಾಲಿಯನ್ನುದ್ದೇಶಿಸಿ ಮಾತಾಡಿದ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭೂಗೋಳದ ಪಠ್ಯಪುಸ್ತಕದಲ್ಲಿ ಕಾಣ ಸಿಗದಿರುವ ಎಲ್ಲಾ ದೇಶಗಳಿಗೂ ಭೇಟಿ ನೀಡುತ್ತಾರೇ. ಆದರೆ, ಅಯೋಧ್ಯೆಗೆ ಏಕೆ ಹೋಗುತ್ತಿಲ್ಲ? ರಾಮಮಂದಿರದ ನಿರ್ಮಾಣಕ್ಕೆ ಯಾಕೆ ಮುಂದಾಗಿಲ್ಲ ಎಂದು ಕಿಡಿಕಾರಿದ್ದರು.
ಇನ್ನು ನವೆಂಬರ್ 25 ರಂದು ನಾನು ಅಯೋಧ್ಯೆಗೆ ತೆರಳುತ್ತೇನೆ. ರಾಮ ಜನ್ಮಭೂಮಿಯಲ್ಲೇ ನಿಂತು ಮೋದಿ ಅವರೇ ಯಾಕೆ ಇನ್ನು ಮಂದಿರ ನಿರ್ಮಾಣವಾಗಿಲ್ಲ ಎಂದು ಪ್ರಶ್ನಿಸುತ್ತೇನೆ. ಒಂದು ವೇಳೆ ಉತ್ತರಿಸದಿದ್ದರೆ, ನಾನೇ ರಾಮಮಂದಿರ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದು ಮೋದಿ ವಿರುದ್ಧ ಉದ್ದವ್ ಠಾಕ್ರೆ ಗುಟುರಿದರು.
Comments are closed.