ಮುಂಬೈ: ಕಿರುಕುಳ ನೀಡಿದ ಆರೋಪದ ಮೇಲೆ “ಬಾಲಿಕಾ ವಧು” ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನ ಕಂಡಿವಾಲಿ ಪ್ರದೇಶದಲ್ಲಿರುವ ನಟಿ ಪ್ರತ್ಯೂಷಾ ಮನೆಗೆ ಪೊಲೀಸರು ಎಂದು ಹೇಳಿಕೊಂಡು ಬಂದ 8 ಮಂದಿ, ನಟ ರಾಹುಲ್ ರಾಜ್ ಸಿಂಗ್ ಬಗ್ಗೆ ವಿಚಾರಿಸಿದರು. ಆತ ಮನೆಯಲ್ಲಿ ಇಲ್ಲ ಎಂದು ನಾನು ಹೇಳಿದ್ದೆ. ಆದರೆ ನನ್ನ ಮಾತನ್ನು ನಂಬದ ಅವರು, ಬಲವಂತವಾಗಿ ನನ್ನನ್ನು ತಳ್ಳಿ ಮನೆ ಪ್ರವೇಶಿಸಿದ್ದರು. ಅಲ್ಲದೆ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು ಎಂದು ನಟಿ ಪ್ರತ್ಯೂಷಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಘಟನೆಯಿಂದ ನಿಜಕ್ಕೂ ನಾನು ತುಂಬಾ ಅಸಮಾಧಾನಗೊಂಡಿದ್ದು, ಈ ಕೂಡಲೇ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇನೆ. ಸಾರ್ವಜನಿಕರೊಂದಿಗೆ ಪೊಲೀಸರು ನಡೆದುಕೊಳ್ಳುವ ಪರಿ ಇದೆ ಏನೂ..? ಎಂದು ಪ್ರತ್ಯೂಷಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ 8 ಮಂದಿಯ ಪೈಕಿ ಮೂವರು ಪೊಲೀಸ್ ಪೇದೆಗಳಾಗಿದ್ದು, ಉಳಿದವರು ಪೊಲೀಸರೇ ಅಲ್ಲ. ಆದರೂ ಬಲವಂತವಾಗಿ ಮನೆಗೆ ನುಗ್ಗಿದ್ದರು. ಹೀಗಾಗಿ ನಟಿ ಪ್ರತ್ಯೂಷಾ ಪೊಲೀಸರು ಸೇರಿದಂತೆ ಎಲ್ಲ 8 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ನಟ ರಾಹುಲ್ ರಾಜ್ ಸಿಂಗ್ ಇತ್ತೀಚೆಗೆ ಕಾರು ಖರೀದಿಗಾಗಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದರು. ಆದರೆ ಈ ಸಾಲವನ್ನು ಅವರು ಸರಿಯಾಗಿ ತೀರಿಸಿರಲಿಲ್ಲ. ಇದೇ ಕಾರಣಕ್ಕಾಗಿ ರಾಹುಲ್ ರಾಜ್ ಸಿಂಗ್ ರನ್ನು ಹುಡುಕಿಕೊಂಡು ಸಾಲ ವಸೂಲಾತಿ ತಂಡದವರು ಮತ್ತು ಪೊಲೀಸರು ನಟಿ ಪ್ರತ್ಯೂಷಾ ಅವರ ಮನೆಗೆ ತೆರಳಿದ್ದರು. ಈ ವೇಳೆ ನಟಿ ಪ್ರತ್ಯೂಷಾ ಹಾಗೂ ಬ್ಯಾಂಕ್ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ.