ಮುಂಬಯಿ : ಶಿಸ್ತಿನ ವಾತಾವರಣದಿಂದ ಕಳೆದ 57 ವರ್ಷಗಳಿಂದ ಕನ್ನಡದ ಸೇವೆ ಮಾಡುತ್ತಿರುವ ಗೋರೆಗಾಂವ್ ಕರ್ನಾಟಕ ಸಂಘವು ಮುಂಬಯಿ ಮಹಾನಗರದ ಹಲವು ತುಳು-ಕನ್ನಡಿಗ ಹಾಗೂ ಜಾತೀಯ ಸಂಘಟನೆಗಳಿಗೆ ನುರಿತ ಕಾರ್ಯಕರ್ತರನ್ನು ನೀಡಿದೆ. ಇಲ್ಲಿ ಸೇವೆಗೈದ ಅನೇಕರು ಇತರ ಸಂಘಟನೆಗಳಲ್ಲಿ ಉನ್ನತ ಮಟ್ಟದ ಜವಾಬ್ಧಾರಿಯನ್ನು ಹೊಂದಿರುವುದು ಇದು ಈ ಸಂಘಕ್ಕೆ ಗೌರವ ಸಂಕೇತವಾಗಿದೆ. ಎಂದು ಚಾರ್ಕೋಪ್ ಕನ್ನಡಿಗರ ಬಳಗದ ಪ್ರಾಧಾನ ಕಾರ್ಯದರ್ಶಿ ರಘುನಾಥ್ ಎನ್. ಶೆಟ್ಟಿ ನುಡಿದರು.
ಫೆ. 8 ರಂದು ಇಲ್ಲಿನ ಬಾಂಗೂರು ನಗರದ ವಿದ್ಯಾಭವನದ ಸಭಾಗೃಹದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ, ನಾಡಹಬ್ಬ ಸಮಾರಂಭ ಹಾಗೂ ಸಾಹಿತ್ಯ ಗೋಷ್ಥಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಬಿಲ್ಲವರ ಅಸೋಸಿಯೇಶನ್ ನ ಯುವಾಭ್ಯುದಯದ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಕೋಟ್ಯಾನ್ ಅವರು ಮಾತನಾಡುತ್ತಾ ಸಂಘವು ಭಾಷಾಭಿವೃದ್ದಿಗಾಗಿ ಮಾಡುತ್ತಿರುವ ಸೇವೆಯನ್ನು ಪ್ರಶಂಸಿಸಿದರು. ಸಂಘದ ಅಧ್ಯಕ್ಷ ಪಯ್ಯಾರು ರಮೇಶ ಶೆಟ್ಟಿಯವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೀನಾ ಬಿ. ಕಾಲಾವರ ಕಾರ್ಯಕ್ರಮವನ್ನು ನಿರ್ವಹಿಸಿದರು. ಇನ್ನೋರ್ವ ಮುಖ್ಯ ಅತಿಥಿ ಉದ್ಯಮಿ ಗೋಪಾಲ ಎಸ್. ಪುತ್ರನ್ ಅವರೂ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ. ಕೃಷ್ಣ ಮೂರ್ತಿ ನಿಟಿಲಾಪುರ ಅವರು ವಹಿಸಿದ್ದರು. ಸಾಹಿತ್ಯ ಗೋಷ್ಥಿಯಲ್ಲಿ ಭಾರತೀಯ ಸಂಸ್ಕೃತಿ ಅನೇಕತೆಯಲ್ಲಿ ಏಕತೆ ವಿಷಯದಲ್ಲಿ ಧರ್ಮ ದ ಬಗ್ಗೆ ಡಾ. ಸೋಂದ ಭಾಸ್ಕರ್ ಭಟ್ ಮತ್ತು ಸಾಹಿತ್ಯದ ಬಗ್ಗೆ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ ಅವರು ಉಪನ್ಯಾಸ ನೀಡಿದರು.
ಅಪರಾಹ್ನ ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ ಅವರು ವಹಿಸಿದ್ದು ಉದ್ಯಮಿ ಡಾ. ಸುರೇದ್ರ ವಿ. ಶೆಟ್ಟಿ ಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಗೌರವ ಅತಿಥಿಯಾಗಿ ಆಗಮಿಸಿದ ಸಿಎ ಸುರೇಂದ್ರ ಶೆಟ್ಟಿಯವರು ಮಾತನಾಡುತ್ತಾ ಗೋರೆಗಾಂಮ್ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುದರ ಬಗ್ಗೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದರು. ವಿದ್ಯಾ ದೇಶಪಾಂಡೆಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಟ್ಕರೆ ಸಂಜೀವ ಶೆಟ್ಟಿಯವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು.
ಮನೋರಂಜನೆಯ ಅಂಗವಾಗಿ ವಿವಿಧ ಸಂಘಟನೆಗಳ ಹಿರಿ ಕಿರಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಂಘದ ರಂಗಸ್ಥಳದ ಕಲಾವಿದರಿಂದ ಹಾಸ್ಯಮಯ ಕಿರು ನಾಟಕ ಪ್ರದರ್ಶನಗೊಂಡಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್