ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿರುವ ಸ್ವಚ್ಛ ಭಾರತ ಅಭಿಯಾನದಲ್ಲಿ ಶಾಲಾ ಮತ್ತು ಕಾಲೇಜು ಮಕ್ಕಳನ್ನು ದೇಶದ ಬೀದಿಗಳನ್ನು ಗುಡಿಸಲು ಹೊರಡಿಸಿರುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ ಈ ಅರ್ಜಿಯನ್ನು ಕೈಗೆತ್ತುಕೊಳ್ಳಲು ಕೋರ್ಟ್ ನಿರಾಕರಿಸಿದೆ.
ಅರ್ಜಿ ಸಲ್ಲಿಸಿರುವ ಮುಂಬೈ ನಗರದ ಲಾಯರ್ ಎಂ ವಿ ಹೊಳಮಗಿ ಅವರ ಪ್ರಕಾರ ನವೆಂಬರ್ ೧೪ ರಿಂದ ಏಳು ದಿನಗಳವರೆಗೆ ಶಾಲಾ ಮಕ್ಕಳು ಬೀದಿಗಳಲ್ಲಿ ಕಸ ಗುಡಿಸಲು ನಿರ್ದೇಶಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜಕೀಯ ನಾಯಕರು ತಮ್ಮ ಸ್ವಹಿತಾಸಕ್ತಿಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಕಾನೂನು ಬಾಹಿರ ಎಂದಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜೊತೆ ಆ ಸುತ್ತೋಲೆಯ ಪ್ರತಿಯನ್ನು ಲಗ್ಗತ್ತಿಸದೇ ಹೋದದ್ದರಿಂದ ಅನೂಪ್ ಮೊಹೊತ ಮತ್ತು ನಿತಿನ್ ಜಾಮ್ದಾರ್ ಒಳಗೊಂಡ ವಿಭಾಗೀಯ ಪೀಠ “ಸಾರ್ವಜನಿಕ ಅರ್ಜಿ ವಿಚಾರಣಾ ವೇಳೆಗೆ ಸಂಪೂರ್ಣ ಸಿದ್ಧತೆಯಿಂದ ಬರಬೇಕು” ಎಂದಿರುವ ನ್ಯಾಯಾಧೀಶರುಗಳು, ಸುತ್ತೋಲೆಯ ಪ್ರತಿಯನ್ನು ಹುಡುಕಿ ಅರ್ಜಿಗೆ ಲಗತ್ತಿಸಿ ಮತ್ತೆ ಬರುವಂತೆ ಸೂಚಿಸಿದ್ದಾರೆ.
“ಸುತ್ತೋಲೆಯ ಪ್ರತಿಯನ್ನು ಹುಡುಕಿ ಸಂಪಾದಿಸಿ ಮುಂದಿನ ವಾರ ಮತ್ತೆ ಕೋರ್ಟ್ ಗೆ ಹೋಗುತ್ತೇನೆ” ಎಂದಿದ್ದಾರೆ ಹೊಳಮಗಿ.