ಕರ್ನಾಟಕ

ಪುತ್ರನಿಗೆ ರಾಯನ್ ಹೆಸರಿಟ್ಟಿದ್ದಕ್ಕೆ ಮೇಘನಾ ರಾಜ್ ಸ್ಪಷ್ಟನೆ

Pinterest LinkedIn Tumblr

ಬೆಂಗಳೂರು: ನಟ ದಿ. ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರನಿಗೆ ಇತ್ತೀಚೆಗಷ್ಟೇ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ಮಗನಿಗೆ ನಾಮಕರಣ ಮಾಡಿದ್ದರ ಬಗ್ಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮೇಘನಾ ರಾಜ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ನಾಮಕರಣ ಶಾಸ್ತ್ರದ ವಿಡಿಯೋ ಹಂಚಿಕೊಂಡು ಪೋಸ್ಟ್​ವೊಂದನ್ನು ಮಾಡಿದ್ದಾರೆ.

‘ನನ್ನ ಮಗನಿಗೆ ಅತ್ಯುತ್ತಮವಾದನ್ನು ನೀಡುವುದು ತಾಯಿಯಾಗಿ ನನಗೆ ಮುಖ್ಯ ಜವಬ್ದಾರಿಯಾಗುತ್ತದೆ. ಅವನ ತಂದೆ-ತಾಯಿ ಖುಷಿಪಟ್ಟ ರೀತಿಯಲ್ಲಿ ಎರಡೂ ಧರ್ಮಗಳಲ್ಲಿ ಇರುವ ಒಳ್ಳೆಯದು ಅವನಿಗೆ ಯಾಕೆ ಸಿಗಬಾರದು? ಜಾತಿ-ಧರ್ಮಗಳ ಭೇದ ಇಲ್ಲದೇ ಎಲ್ಲ ಜನರು ಅವನಿಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದ ಬೇಡುತ್ತೇವೆ’ ಎಂದು ಮೇಘನಾ ಪೋಸ್ಟ್​ ಮಾಡಿದ್ದಾರೆ.

‘ಎರಡೂ ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಮುಖ್ಯವಾಗಿತ್ತು. ಯಾಕೆಂದರೆ ಅವನ ತಂದೆ, ನಮ್ಮ ರಾಜ ಚಿರು ಅವರು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು. ಎರಡೂ ಸಂಪ್ರದಾಯದಲ್ಲಿ ಇರುವ ಉತ್ತಮ ವಿಚಾರಗಳನ್ನು ಆಚರಿಸಿದ್ದೇವೆ’ ಎಂದು ಮೇಘನಾ ಸ್ಪಷ್ಟನೆ ನೀಡಿದ್ದಾರೆ.

‘ರಾಯನ್​ ಎಂಬ ಈ ಹೆಸರು ಕೂಡ ಎಲ್ಲ ಧರ್ಮಕ್ಕೆ ಸೇರಿದೆ. ಬೇರೆ ಬೇರೆ ವರ್ಷನ್​, ಬೇರೆ ಬೇರೆ ಉಚ್ಛಾರ ಇರಬಹುದು. ಆದರೆ ಅರ್ಥ ಒಂದೇ. ರಾಯನ್​ ರಾಜ್​ ಸರ್ಜಾ ಎಂದು ನಮ್ಮ ಯುವರಾಜನನ್ನು ಪರಿಚಯಿಸುತ್ತಿದ್ದೇವೆ. ಮಗನೇ ನೀನು ತಂದೆಯಂತೆಯೇ ಬೆಳೆಯಬೇಕು. ಜನರನ್ನು ಮತ್ತು ಜನರು ಮಾಡುವ ಮಾನವೀಯ ಕೆಲಸಗಳನ್ನು ಅವರು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ’ ಎಂದು ಮೇಘನಾ ಬರೆದುಕೊಂಡಿದ್ದಾರೆ.

Comments are closed.