ಕರ್ನಾಟಕ

ಇಂದಿನಿಂದ ನವ ಕರ್ನಾಟಕ ನಿರ್ಮಾಣವಾಗಲಿದೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಧ್ವಜಾರೋಹಣ ಮಾಡಿದರು. ತೆರೆದ ಜೀಪ್‌ನಲ್ಲಿ ಮುಖ್ಯಮಂತ್ರಿ ಪರೇಡ್ (Maniksha parade ground )ಪರಿವೀಕ್ಷಣೆ ಮಾಡಿದರು. ಗೌರವ ರಕ್ಷೆ ಸ್ವೀಕಾರ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯವನ್ನು ಕೋರಿದರು. ಅಮೃತ ಮಹೋತ್ಸವದ ವೇಳೆ ಧ್ವಜಾರೋಹಣದ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನನಗೆ ಈ ಅವಕಾಶ ಕೊಟ್ಟವರಿಗೆ ಚಿರಋಣಿಯಾಗಿದ್ದೇನೆ. ಭಾರತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾದ ದೇಶದಲ್ಲಿ ಭಾರತ ದೊಡ್ಡದು. ಭಾರತ ಏಕತೆ, ಅಖಂಡತೆ, ಸಾರ್ವಭೌಮತ್ವ ಉಳಿಸಿಕೊಂಡು ಪ್ರಜಾಪ್ರಭುತ್ವ ಬಹಳ ಆಳವಾಗಿ ಬೇರೂರಿದೆ. ಡಾ.ಬಿ.ಆರ್.ಅಂಬೇಡ್ಕರ್‌ರ ದೂರ ದೃಷ್ಟಿ, ಸಮಾನತೆ ದೇಶದ ಕಲ್ಯಾಣಕ್ಕೆ ಸಂವಿಧಾನ ನಮಗೆ ಭಗವದ್ಗೀತೆಯಾಗಿದೆ ಎಂದು ಬೊಮ್ಮಾಯಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ನಮನ ಸಲ್ಲಿಸಿದರು.

ಸತ್ಯಮೇವ ಜಯತೆ ನಮ್ಮ ಸ್ವಾತಂತ್ರ್ಯಕ್ಕೆ ದಾರಿದೀಪವಾಗಿದೆ. ಸ್ವಾತಂತ್ರ್ಯ ಹೋರಾಟದ ಒಳನೋಟವನ್ನು ನೋಡಿದರೆ ರೈತರು, ಕಾರ್ಮಿಕರ ಸತ್ಯಾಗ್ರಹ ಭದ್ರ ಬುನಾದಿ ಹಾಕಿಕೊಟ್ಟಿದೆ.ಆ ರೈತರು, ಕಾರ್ಮಿಕರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ. ಸಂಗೊಳ್ಳಿ ರಾಯಣ್ಣರ ಜನ್ಮದಿನವೂ ಇಂದೇ ಆಗಿದೆ. ರಾಯಣ್ಣರ ತ್ಯಾಗ, ಬಲಿದಾನ ಬಹಳ ಮಹತ್ವದ್ದಾಗಿದೆ. ರಾಯಣ್ಣ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ರಾಯಣ್ಣ ಜನ್ಮದಿನ ಆಚರಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಣೆ ಮಾಡಿದರು.

ಭಾರತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ವಿಶ್ವದ ಗಮನವನ್ನು ಸೆಳೆದಿದೆ. ಗ್ರಾಮಗಳಿಂದ ಬಾಹ್ಯಾಕಾಶದವರೆಗೂ ಪ್ರಧಾನಿ ಮೋದಿ ಹಲವು ಯೋಜನೆ ಕೊಟ್ಟಿದ್ದಾರೆ. ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಎಂದು ಘೋಷಣೆ ಮಾಡಿದರು. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ರೈತನನ್ನು ಕೇಂದ್ರ ಬಿಂದುವಾಗಿ ಅಭಿವೃದ್ಧಿ ಮಾಡಬೇಕು. ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ರೈತನ ಶ್ರಮ, ಕೂಲಿಕಾರನ ಬೆವರಿನಲ್ಲಿ ದೇವರಿದ್ದಾನೆ. ಇದಕ್ಕೆ ನಾವು ಬೆಲೆ ಕೊಡಬೇಕು. ಕೃಷಿ ಕ್ಷೇತ್ರದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ, ಕೈಗಾರಿಕಾ ಕ್ಷೇತ್ರದಲ್ಲಿ ಶೇ.4ರಷ್ಟು ಬೆಳವಣಿಗೆಯಾಗುತ್ತದೆ. ಸೇವಾ ವಲಯದಲ್ಲಿ ಶೇ.10ರಷ್ಟು ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು.

ಕೊರೊನಾ ಹಿನ್ನೆಲೆ ಸಿಮೀತ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕೊರೊನಾ ವಾರಿಯರ್ಸ್​ಗೆ ಆಹ್ವಾನಿಸಲಾಗಿದೆ. ಮಾಣಿಕ್ ಷಾ ಮೈದಾನಕ್ಕೆ ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ನರ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಮಹಾಮಾರಿ ಕೊರೊನಾದಿಂದ ಗುಣಮುಖರಾದವರಿಗೆ ಕೂಡ ವಿಶೇಷ ಆಹ್ವಾನ ನೀಡಲಾಗಿದ್ದು, ಪ್ರತಿ ಗುಂಪಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

ಮಾಣಿಕ್ ಷಾ ಮೈದಾನಕ್ಕೆ ಗಣ್ಯ ಅಧಿಕಾರಿಗಳು ಭಾಗಿಯಾಗುವ ಹಿನ್ನೆಲೆ, ಪೊಲೀಸ್ ಭದ್ರತೆ ನೀಡಲಾಗಿದೆ. ನಗರದ 2 ಹೆಚ್ಚುವರಿ ಹಾಗೂ 2 ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. 10 ಡಿಸಿಪಿಗಳು ಸೇರಿದಂತೆ 1,500 ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲಾಗಿದೆ.

ಹೆಚ್ಚುವರಿಯಾಗಿ 15 ಕೆಎಸ್ಆರ್ಪಿ ತುಕಡಿ, 10 ಸಿಎಆರ್, 2 ಕಮಾಂಡೋ ಟೀಮ್, 6 ಎಸ್ ಟಿ ಡಿಮೋಸ್ಟ್ರೇಷನ್ ಸ್ಕ್ವಾಡ್ ನಿಯೋಜಿಸಲಾಗಿದೆ. ಮೈದಾನದ ಸುತ್ತ 60ಕ್ಕೂ ಅಧಿಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಮೈದಾನದ ಎಲ್ಲಾ ಪ್ರವೇಶ ದ್ವಾರಗಳಲ್ಲೂ ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಿದ್ದು, ಕೊವಿಡ್ ಪ್ರೋಟೊಕಾಲ್ ಜಾರಿ ಇರುವ ಹಿನ್ನೆಲೆ ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತಿದೆ.

ಸಿಗರೇಟ್, ಲೈಟರ್, ಮ್ಯಾಚಸ್, ಚಾಕು, ಬಾಟಲ್, ಊಟ ಸೇರಿದಂತೆ ಕೆಲ ವಸ್ತುಗಳನ್ನು ನಿಷೇಧಿಸಲಾಗಿದೆ. ಟ್ರಾಫಿಕ್ ಜಾಮ್ ಉಂಟಾಗದ ರೀತಿ ಮೈದಾನದ ಸುತ್ತ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Comments are closed.