ಹಾಸನ: ಟಾಟಾ ಸುಮೋಗೆ ಹಿಂದಿನಿಂದ ಕ್ವಾಲೀಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯ ಕೆಂಚಟ್ಟಹಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ.
ಶಾಂತಿಗ್ರಾಮದ ಹತ್ತಿರ ಕೆಂಚಟ್ಟಹಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕ್ವಾಲೀಸ್ ಕಾರ್ ನಲ್ಲಿದ್ದ 4 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಎಲ್ಲರೂ ಕೆಜಿಎಫ್ ಮೂಲದವರಾಗಿದ್ದು, ಉಡುಪಿಗೆ ಮದುವೆಗೆಂದು ಹೊರಟಿದ್ದರು.
ಅಪಘಾತದ ತೀವ್ರತೆಗೆ ಟಾಟಾ ಸುಮೋ ಪಲ್ಟಿಯಾಗಿದೆ. ಅದರಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ. ರೋಡ್ ಹಂಪ್ ಬಳಿ ಟಾಟಾ ಸುಮೋ ನಿಧಾನವಾದಾಗ ಹಿಂದಿನಿಂದ ವೇಗವಾಗಿ ಬಂದ ಕ್ವಾಲೀಸ್ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.