ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಅಣ್ಣನ ಮಗಳೆಂದು ಹೇಳಿಕೊಂಡು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜ್ಞಾನಗಂಗಾ ಲೇಔಟ್ ನಿವಾಸಿ ಪಲ್ಲವಿ (32) ಬಂಧಿತ ಆರೋಪಿ. ಈಕೆ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ನಾಗದೇವನಹಳ್ಳಿ ನಿವಾಸಿ ಕ್ಯಾಬ್ ಚಾಲಕ ಯೋಗೇಶ್ ಎಂಬುವರಿಗೆ ಮಹಿಳೆ ತಾನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಅಣ್ಣನ ಮಗಳಾಗಿದ್ದು, ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದಳು. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ 10 ಲಕ್ಷ ಸಾಲ ಕೊಡಿಸುತ್ತೇನೆ ಎಂದು ಆಕೆ ಕಥೆ ಕಟ್ಟಿದ್ದಳು.
ಮೇ ತಿಂಗಳನಲ್ಲಿ ಕಾರು ಮಾಲೀಕ ರಾಜಶೇಖರ್ ಎನ್ನುವರಿಗೆ ಕರೆ ಮಾಡಿದ್ದ ಪಲ್ಲವಿ, ಎರಡು ದಿನ ಕಾರು ಬಾಡಿಗೆಗೆ ಬೇಕು ಎಂದಿದ್ದಳು. ಹೀಗಾಗಿ ಪಲ್ಲವಿಯನ್ನು ಕಾರು ಚಾಲಕ ಯೋಗೇಶ್ ಸಂಪರ್ಕಿಸಿದ್ದ. ಆಕೆಯನ್ನು ಬೆಂಗಳೂರು, ತುಮಕೂರಿಗೆ ಕರೆದೊಯ್ದಿದ್ದ. ಎರಡು ದಿನದ ಬಾಡಿಗೆ ಹಣ ಕೊಟ್ಟಿದ್ದಳು. ಹೀಗೆ ಹಲವು ಬಾರಿ ಬಾಡಿಗೆಗೆ ಕರೆಸಿಕೊಂಡು ಹಣ ನೀಡಿರಲಿಲ್ಲ. ಬಾಕಿ ಹಣ ಕೇಳಿದಾಗ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಳು.
ಕೆಲ ಸಮಯದ ಬಳಿಕ ‘ನೀನು ತುಂಬ ಇಷ್ಟ. ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಯೋಗೇಶ್ಗೆ ಸಂದೇಶ ಕಳುಹಿಸಿದ್ದಳು. ಇದಕ್ಕೆ ಯೋಗೇಶ್ ನಿರಾಕರಿಸಿ, ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಆಕೆ ವಿವಾಹವಾಗದಿದ್ದಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರು ಕೊಡುವುದಾಗಿ ಯೋಗೇಶ್ಗೆ ಬೆದರಿಕೆವೊಡ್ಡಿದ್ದಳು. ಈಕೆ ವರ್ತನೆಯಿಂದ ಅನುಮಾನಗೊಂಡ ಕಾರು ಚಾಲಕ ಯೋಗೇಶ್ ಮತ್ತು ಜರ್ನಾದನ್ ಎಂಬುವರು ನೇರವಾಗಿ ಆಕೆಯನ್ನು ಸದಾಶಿವನಗರದಲ್ಲಿರುವ ಡಾ. ಜಿ.ಪರಮೇಶ್ವರ್ ನಿವಾಸಕ್ಕೆ ಕರೆದೊಯ್ದಿದ್ದರು. ಈಕೆಯನ್ನು ನೋಡಿದ ಪರಮೇಶ್ವರ್ ಪತ್ನಿ ‘ಈಕೆಯನ್ನು ನಾನು ನೋಡಿಲ್ಲ’ ಎಂದಿದ್ದರು. ಇಷ್ಟಕ್ಕೂ ಸುಮ್ಮನಾಗದೇ ಆಕೆಯನ್ನು ತುಮಕೂರಿನಲ್ಲಿದ್ದ ಪರಮೇಶ್ವರ್ ಬಳಿ ಕರೆದುಕೊಂಡು ಹೋಗಿದ್ದರು. ‘ಈಕೆ ನನ್ನ ಅಣ್ಣನ ಮಗಳಲ್ಲ, ಕೂಡಲೇ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿಸಿ’ ಎಂದು ಪರಮೇಶ್ವರ್ ಸೂಚಿಸಿದ್ದರು. ಅದರಂತೆಯೇ ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
Comments are closed.