ಬೆಂಗಳೂರು(ಜು.28): ಕೊರೋನಾ ಸೋಂಕು ಕಾಯಿಲೆ ಯಾವಾಗ ಕಡಿಮೆಯಾಗಲಿದೆ ಎಂಂದು ಹೇಳಲು ಸಾಧ್ಯವೇ ಇಲ್ಲ. ಹಾಗಾಗಿ ಎಷ್ಟು ತಯಾರಿ ಇದ್ದರೂ ಸಾಲದು ಎಂಬ ಅಭಿಪ್ರಾಯವನ್ನು ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವ್ಯಕ್ತಪಡಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಸರ್ಕಾರ ಮಾಡಿದ ವ್ಯವಸ್ಥೆಯಿಂದ ಪರೀಕ್ಷೆ ನಡೆಯುತ್ತಿದೆ. ಎಲ್ಲೋ ಒಂದು ಕಡೆ ಕೊರೋನಾ ಪ್ರಕರಣಗಳಲ್ಲಿ ಏರು ಪೇರು ಆಗಬಹುದು. ತಜ್ಞರ ಅಭಿಪ್ರಾಯ ಒಬ್ಬರು ಒಂದೊಂದು ರೀತಿಯಲ್ಲಿ ಕೊಡುತ್ತಾ ಇದ್ಧಾರೆ ಎಂದರು.
ಕೆಲವರು ಈ ತಿಂಗಳಲ್ಲಿ ಹೆಚ್ಚು ಆಗುತ್ತೆ ಎಂದು ಹೇಳುತ್ತಾರೆ. ಮತ್ತಲವರು ಮುಂದಿನ ತಿಂಗಳು ಹೆಚ್ಚಾಗುತ್ತೆ ಎನ್ನುತ್ತಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಮುಂದೆ ಯಾವುದೇ ಸವಾಲು ಇಲ್ಲ ಎಂದರೇ ಖಂಡಿತಾ ತಪ್ಪಾಗುತ್ತೇ. ಈ ಸಮಸ್ಯೆಗೆ ಪರಿಹಾರ ಡಿಟೆಕ್ಟ್ ಮಾಡುವ ಕೆಲಸ ನಡೆಯುತ್ತಿದೆ. 95% ಜನರಿಗೆ ಎ-ಸಿಮ್ಟಮ್ಯಾಟಿಕ್ ಇದೆ. ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.
ಕೇವಲ ಶೇ.5ರಷ್ಟು ಸೋಂಕಿತರಿಗೆ ಸಮಸ್ಯೆ ಇದೆ. ಅಂತವರಿಗೆ ಬೇಗ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 24 ಮಂದಿ ಶಾಸಕರಿಗೆ ನಿಗಮ ಮಂಡಳಿ ಸ್ಥಾನಗಳನ್ನು ನೀಡಿದ್ದಾರೆ. ಈ ಮೂಲಕ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ಧಾರೆ ಎಂದು ತಿಳಿಸಿದರು.
ಪ್ರೀತಮ್ ಗೌಡ ಅಸಮಾಧಾನದ ಕುರಿತು ಮಾತಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಅವರು ಮಾತಾಡಿರುವುದು ವೈಯಕ್ತಿಕ ಹೇಳಿಕೆ. ಸಿಎಂ ತಮ್ಮ ಕರ್ತವ್ಯ ಮಾಡಿ ಎಲ್ಲರಿಗೂ ನ್ಯಾಯ ಮಾಡಿದ್ದಾರೆ. ಇದನ್ನು ಪಡೆಯೋದು ಬಿಡೋದು ವೈಯಕ್ತಿಕ ಶಾಸಕರ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Comments are closed.