ಕರ್ನಾಟಕ

ಅಕ್ರಮ ಸಂಬಂಧ: ಪ್ರಿಯಕರನ ಜೊತೆ ಪತಿಯ ಹತ್ಯೆ ಮಾಡಿ ಕಾಣೆಯಾಗಿದ್ದಾರೆಂದು ದೂರು ನೀಡಿದ ಪತ್ನಿ

Pinterest LinkedIn Tumblr


ಬೆಂಗಳೂರು(ಜು.18): ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಲೆ ಮಾಡಿದ ಬಳಿಕ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಕೆಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿ ನಿವಾಸಿ ಕೃಪಾ ಆಕೆಯ ಪ್ರಿಯಕರ ಅಭಿಷೇಕ್ ಮತ್ತು ಸ್ನೇಹಿತ ರಫಿ ಬಂಧಿತ ಆರೋಪಿಗಳು. ಆರೋಪಿತ ಮಹಿಳೆ ಕೃಪಾ, ಹರೀಶ್ ಎಂಬಾತನನ್ನು ಮದುವೆಯಾಗಿ ದಾಸರಹಳ್ಳಿಯಲ್ಲಿ ವಾಸವಿದ್ದರು. ಈ ವೇಳೆ ಅದೇ ಏರಿಯಾ ನಿವಾಸಿಯಾದ ಅಭಿಷೇಕ್ ಎಂಬಾತ ಕೃಪಾಗೆ ಪರಿಚಯವಾಗಿ ಒಳ್ಳೆ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿ ಕೃಪಾ ಮತ್ತು ಅಭಿಷೇಕ್ ಇಬ್ಬರೂ ತುಂಬಾ ಕ್ಲೋಸ್ ಆದರು.

ಇಬ್ಬರ ನಡುವಿನ ಪ್ರೇಮ ಅಕ್ರಮ ಸಂಬಂಧಕ್ಕೆ ನಾಂದಿಯಾಗಿತ್ತು. ತಮ್ಮ ಅಕ್ರಮ ಸಂಬಂಧಕ್ಕೆ ಪತಿ ಹರೀಶ್ ಅಡ್ಡಿಯಾಗುತ್ತಾನೆಂದು ಭಾವಿಸಿದ ಹೆಂಡತಿ ಕೃಪಾ ತನ್ನ ಪ್ರಿಯಕರ ಅಭಿಷೇಕ್ ಮೂಲಕ ಕೊಲೆಗೆ ಸಂಚು ರೂಪಿಸಿದ್ದಳು. ಜುಲೈ 9 ರ ರಾತ್ರಿ ಮನೆಯಲ್ಲಿ ಹರೀಶ್ ಮಲಗಿದ್ದ ವೇಳೆ ಅಭಿಷೇಕ್ ತನ್ನ ಸ್ನೇಹಿತ ರಫಿ ಜೊತೆ ಕೃಪಾ ಮನೆಗೆ ಬಂದಿದ್ದ.

ಈ ವೇಳೆ ಸೈಜು ಕಲ್ಲಿನಿಂದ ಹರೀಶ್ ತಲೆ ಜಜ್ಜಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನ ಮನೆ ಪಕ್ಕದ ರಾಜಕಾಲುವೆಯಲ್ಲಿ ಎಸೆದು ಅಸಾಮಿಗಳು ತಮಗೆ ಗೊತ್ತಿಲ್ಲದವರಂತೆ ಸುಮ್ಮನಾಗಿದ್ದರು. ಬಳಿಕ ಜುಲೈ 11 ರಂದು ಆರೋಪಿ ಮಹಿಳೆ ಕೃಪಾ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡ ಹರೀಶ್ ನಿನ್ನೆಯಿಂದ ಕಾಣುತ್ತಿಲ್ಲ ಎಂದು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಳು.

ಹರೀಶ್ ಕಾಣೆಯಾದ ಬಗ್ಗೆ ಪೊಲೀಸರು ದೂರು ದಾಖಲಿಸಿ ಎಲ್ಲೆಡೆ ಹುಡುಕಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಜುಲೈ 15 ರಂದು ರಾಜಕಾಲುವೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಪೊಲೀಸರು ಶವ ಹೊರ ತೆಗೆದು ಪರಿಶೀಲನೆ ನಡೆಸಿದರು. ಶವದ ತಲೆಯಲ್ಲಿ ಗಾಯದ ಗುರುತುಗಳು ಕಂಡು ಬಂದಿದ್ದು ಇದು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ತನಿಖೆ ಶುರು ಮಾಡಿದ್ದರು.

ತನಿಖೆ ವೇಳೆ ಆರೋಪಿ ಮಹಿಳೆ ಕೃಪಾ ಶವ ನೋಡಿ ತನ್ನ ಗಂಡನ ಶವವೆಂದು ಪತ್ತೆ ಮಾಡಿದ್ದಳು. ಈ ವೇಳೆ ಪೊಲೀಸರು ಮಹಿಳೆ ಮೇಲೆ ಸಂಶಯ ವ್ಯಕ್ತಪಡಿಸಿ ತೀವ್ರ ತನಿಖೆ ನಡೆಸಿದ ವೇಳೆ, ಕೃಪಾ ಲವ್ವಿ ಡವ್ವಿ ಪುರಾಣ ಬಯಲಿಗೆ ಬಂದಿದೆ.

ಅಮೃತಹಳ್ಳಿ ಪೊಲೀಸರು ಕೃಪಾಳನ್ನ ಬಂಧಿಸಿ ಬಳಿಕ ಆಕೆಯ ಪ್ರಿಯಕರ ಅಭಿಷೇಕ್ ಆತನ ಸ್ನೇಹಿತ ರಫಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Comments are closed.