ಕರ್ನಾಟಕ

‘ಸುಕನ್ಯಾ ಸಮೃದ್ಧಿ’ ಯೋಜನೆಯಾಗಿ ಬದಲಾದ ಭಾಗ್ಯಲಕ್ಷ್ಮಿ ಯೋಜನೆ: 18 ವರ್ಷದಿಂದ 21 ವರ್ಷಕ್ಕೆ ಮೆಚ್ಯೂರಿಟಿ ಹಣ!

Pinterest LinkedIn Tumblr


ಬೆಂಗಳೂರು: ಇದುವರೆಗೆ ‘ಭಾಗ್ಯಲಕ್ಷ್ಮಿ’ ಯೋಜನೆಯಲ್ಲಿ ಬಾಂಡ್‌ ಪಡೆದವರಿಗೆ 18 ವರ್ಷಕ್ಕೇ ಮೆಚ್ಯೂರಿಟಿ ಹಣ ಸಿಗುತ್ತಿತ್ತು. ಇನ್ನು ಮುಂದೆ 21 ವರ್ಷದವರೆಗೆ ಕಾಯಬೇಕು. ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ‘ಸುಕನ್ಯಾ ಸಮೃದ್ಧಿ’ ಯೋಜನೆಯಾಗಿ ಬದಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2006-07ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು.

ಎಲ್‌ಐಸಿ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ವರ್ಗಾಯಿಸಲಾಗಿದೆ. ಆಗಸ್ಟ್‌ನಿಂದ ಅಂಚೆ ಇಲಾಖೆಯು ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ”ಭಾಗ್ಯಲಕ್ಷ್ಮಿ ಯೋಜನೆಗಾಗಿ ಎಲ್‌ಐಸಿ ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಸರಕಾರ ಒಮ್ಮೆಗೆ ಪ್ರತಿ ಹೆಣ್ಣು ಮಗುವಿಗೆ 19,300 ರೂ. ಪಾವತಿಸುತ್ತಿತ್ತು.

ಬಾಂಡ್‌ ಮೆಚ್ಯುರಿಟಿ ಆದ ಬಳಿಕ 1 ಲಕ್ಷ ರೂ. ಹಣ ನೀಡುವ ಷರತ್ತು ಇತ್ತು. ಆದರೆ ಕ್ರಮೇಣ ಎಲ್‌ಐಸಿ ತಕರಾರು ಮಾಡಲಾರಂಭಿಸಿತು. 2015-16ರವರೆಗೂ ತಕರಾರಿನೊಂದಿಗೆ ನಡೆಯಿತು. ಸರಕಾರ ಒಂದು ಮಗುವಿಗೆ ಒಮ್ಮೆಗೇ 30 ಸಾವಿರ ರೂ. ಪಾವತಿಸಬೇಕು ಎಂದು ಹೇಳಿತು. ಹೀಗಾಗಿ ಅಂಚೆ ಇಲಾಖೆಗೆ ವರ್ಗಾಯಿಸಲಾಯಿತು,” ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ. ಎ. ದಯಾನಂದ ತಿಳಿಸಿದರು.

ಹೊಸ ಯೋಜನೆಯ ವಿಶೇಷತೆಯೇನು?
ಹೊಸ ಯೋಜನೆ (ಸುಕನ್ಯಾ ಸಮೃದ್ಧಿ ಯೋಜನೆ)ಯಲ್ಲಿ ರಾಜ್ಯ ಸರಕಾರ ಪ್ರತಿ ಮಗುವಿಗೆ ವರ್ಷಕ್ಕೆ 3 ಸಾವಿರ ರೂ.ಗಳಂತೆ 15 ವರ್ಷಗಳ ಕಾಲ (45 ಸಾವಿರ ರೂ.) ಪಾವತಿಸುತ್ತದೆ. ಫಲಾನುಭವಿಗೆ 21 ವರ್ಷವಾದಾಗ 1.27 ಲಕ್ಷ ರೂ. ಸಿಗುತ್ತದೆ. ಒಂದು ವೇಳೆ ಫಲಾನುಭವಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದರೆ ಆ ಹಣವನ್ನು ವಿತ್‌ ಡ್ರಾ ಮಾಡಿಕೊಳ್ಳಲು ಅವಕಾಶವಿದೆ.

ಸುಕನ್ಯಾ ಸಮೃದ್ಧಿ ಯೋಜನೆಗೆ ಸರಕಾರ ಹಣ ತುಂಬುತ್ತದೆ. ಒಂದು ವೇಳೆ ಪೋಷಕರಲ್ಲಿ ಹಣ ಇದ್ದರೆ ಅದನ್ನೂ ಈ ಖಾತೆಗೆ ಕಟ್ಟಿ ಹೆಚ್ಚು ಹಣಗಳಿಸಬಹುದು. ಈ ಯೋಜನೆಯ ಒಂದು ಅನಾನುಕೂಲವೆಂದರೆ ಪೋಷಕರು ನಿಧನರಾದರೆ ವಿಮೆ ಸೌಲಭ್ಯವಿಲ್ಲ. ಎಲ್‌ಐಸಿಯಲ್ಲಾದರೆ ಆ ಸೌಲಭ್ಯವಿತ್ತು.

ಇತರ ಪ್ರಮುಖ ಅಂಶಗಳೇನು?

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಎಸ್‌ಎಸ್‌ಎಲ್‌ಸಿ/ ಪಿಯುಸಿ ಓದಲು ಹಣ ಪಡೆಯಲಾಗುತ್ತಿರಲಿಲ್ಲ. ಹೊಸ ಯೋಜನೆಯಲ್ಲಿ ಲಭ್ಯ.
ಎರಡೂ ಯೋಜನೆಗಳಲ್ಲಿಕೂಡ ಮಗು ತೀರಿಕೊಂಡರೆ ಆ ಹಣ ಸರಕಾರಕ್ಕೆ ವಾಪಸ್‌ ಹೋಗುತ್ತದೆ.
ಹಿಂದಿನ ಬಿಪಿಎಲ್‌ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದ 2 ವರ್ಷದೊಳಗೆ ಬಾಂಡ್‌ ಮಾಡಿಸಬೇಕಿತ್ತು. ಅದೇ ಷರತ್ತುಗಳು ಸುಕನ್ಯಾ ಸಮೃದ್ಧಿಗೂ ಅನ್ವಯವಾಗುತ್ತವೆ. ಆದರೆ, ಸುಕನ್ಯಾ ಸಮೃದ್ಧಿ ಯೋಜನೆಯಡಿ 21 ವರ್ಷಕ್ಕೆ ಮೆಚ್ಯೂರಿಟಿ ಹಣ ನೀಡುವ ನಿಯಮ ಇರುವುದರಿಂದ ಅದೇ ಷರತ್ತು ಇಲ್ಲಿಯೂ ಅನ್ವಯ.
ಈಗಾಗಲೇ ಬಾಂಡ್‌ ಮಾಡಿಸಿರುವವರಿಗೆ ಎಲ್‌ಐಸಿಯಿಂದಲೇ ಹಣ ಬರುತ್ತದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ.

Comments are closed.