ಕರ್ನಾಟಕ

ಸುಮಲತಾ ಅಂಬರೀಷ್​ಗೂ ತಗುಲಿದ ಕೊರೋನಾ ಸೋಂಕು ಪಾಸಿಟಿವ್

Pinterest LinkedIn Tumblr


ಬೆಂಗಳೂರು(ಜುಲೈ 06): ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಸುಮಲತಾ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಸದ್ಯಕ್ಕೆ ಅವರು ತಮ್ಮ ಮನೆಯಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ಧಾರೆ.

ಜುಲೈ 4ರಂದು ಸುಮಲತಾ ಅವರಿಗೆ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತಂತೆ. ಕೊರೋನಾಪೀಡಿತ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಇವತ್ತು ಅದು ಪಾಸಿಟಿವ್ ರಿಸಲ್ಟ್ ಬಂದಿದೆ.

“ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ” ಎಂದು ಸುಮಲತಾ ಅಂಬರೀಷ್ ಅವರು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ತನ್ನನ್ನು ಭೇಟಿಯಾದ ಯಾರೇ ಆದರೂ ಕೂಡಲೇ ಮುನ್ನೆಚ್ಚರಿಕೆಯಾಗಿ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಸುಮಲತಾ ಅವರು ಮನವಿ ಮಾಡಿಕೊಂಡಿದ್ದಾರೆ. “ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ” ಎಂದು ಮಂಡ್ಯ ಸಂಸದೆ ನಿವೇದಿಸಿಕೊಂಡಿದ್ಧಾರೆ.

ಸಿಎಂಗೂ ಕಂಟಕ?
ಸುಮಲತಾ ಅಂಬರೀಷ್ ಅವರು ಆರು ದಿನಗಳ ಹಿಂದಷ್ಟೇ, ಅಂದರೆ ಜೂನ್ 29ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದರು. ತಮ್ಮ ಪತಿ ದಿವಂಗತ ಅಂಬರೀಷ್ ಅವರ ಸ್ಮಾರಕ ಕುರಿತು ಮಾತನಾಡಲು ಸುಮಲತಾ ಅವರು ವಿಧಾನಸೌಧದಲ್ಲಿ ಸಿಎಂರೊಂದಿಗೆ ಮಾತನಾಡಿದ್ದರು. ಅಂದಿನ ಸಭೆಯಲ್ಲಿ ಸುಮಲತಾ ಅವರ ಜೊತೆ ಹಾಸ್ಯನಟ ದೊಡ್ಡಣ್ಣ, ರಾಕ್​ಲೈನ್ ವೆಂಕಟೇಶ್ ಮೊದಲಾದವರಿದ್ದರು. ಅವರೆಲ್ಲರಿಗೂ ಈಗ ಕೊರೋನಾ ಟೆನ್ಷನ್ ಶುರುವಾಗಿದೆ.

Comments are closed.