ಕರ್ನಾಟಕ

ಕೊರೋನಾ ಪ್ರಾಣಿ ಪಕ್ಷಿ ವೃಕ್ಷಕ್ಕೂ ಹಬ್ಬಲಿದೆ; ಕೋಡಿಶ್ರೀ ಭವಿಷ್ಯ

Pinterest LinkedIn Tumblr


ಹಾಸನ; ಜಗತ್ತಿನಾದ್ಯಂತ ಹಬ್ಬುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಇದೀಗ ಇಡೀ ಮನುಕುಲಕ್ಕೆ ಕಾರಕವಾಗಿದೆ. ಆದರೆ, ಇದೇ ಸೋಂಕು ಭವಿಷ್ಯದಲ್ಲಿ ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳಿಗೂ ಹಬ್ಬಲಿದೆ ಎಂದು ಕೋಡಿ ಮಠದ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, “ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳಿಗೂ ಆವರಿಸುವ ಸಾಧ್ಯತೆ ಇದೆ. ಆದರೂ, ಈ ಖಾಯಿಲೆ ವಿಶಾಲ ಬುದ್ದಿಯಿರುವ ಮನುಷ್ಯರಿಂದಲೇ ಹುಷಾರಾಗುವ ಲಕ್ಷಣಗಳೂ ಇದೆ.

ಈ ರೋಗ ತಡೆಯಲು ಸ್ವಚ್ಚತೆ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಹೀಗಾಗಿ ಈ ಮಾರಕ ರೋಗ ಎಂತಹ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ” ಎಂದು ಶ್ರೀಗಳು ಧೈರ್ಯದ ಮಾತುಗಳನ್ನಾಡಿದ್ದಾರೆ.

“ಇನ್ನು ಇತ್ತೀಚೆಗೆ ಕೋಡಿಮಠದ ಶಾಸ್ತ್ರಿ ಎಂಬ ವ್ಯಕ್ತಿಗೆ ರೋಗ ಹರಡಿದೆ ಎಂಬ ಸುದ್ದಿಯನ್ನು ನಾವು ಕೇಳಿದ್ದೇವೆ. ಆ ಶಾಸ್ತ್ರಿ ಎಂಬ ಹುಡುಗ ನಮ್ಮ ಮಠದ ಶಿಷ್ಯನೇ. ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿದ್ದು, ಹೋಮ, ಪೂಜೆ ಮಾಡುತ್ತಿದ್ದಾನೆ” ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

“ಹಿಂದೆ ಈ ರೋಗದ ಬಗ್ಗೆ ಎಲ್ಲವನ್ನೂ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ. ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ ಹೀಗಾಗಿ ಗಾಬರಿಯಾಗುವ ಅವಶ್ಯಕತೆ ಇಲ್ಲ” ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Comments are closed.