ಕರ್ನಾಟಕ

ರಾಜ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್ ಇಲ್ಲ; ಕಠಿಣ ನಿಯಮ ಜಾರಿಗೆ: ಆರ್ ಅಶೋಕ್

Pinterest LinkedIn Tumblr


ಹಾಸನ(ಜೂನ್ 30): ರಾಜ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‍ಡೌನ್ ಹೇರುವ ಚಿಂತನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಮಂಗಳವಾರ ಸ್ಪಷ್ಠಪಡಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಮಾಡಿದರೆ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಜುಲೈ. 7 ರ ನಂತರ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಹೇಳಿದರು.

ದೇಶದಾದ್ಯಂತ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದರೂ ಸರ್ಕಾರ ಅದರ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ಹರಡುವುದನ್ನು ಆದಷ್ಟು ಕಡಿಮೆ ಮಾಡುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳೊಡನೆ ಸಾರ್ವಜನಿಕರೂ ಸಹಕರಿಸಿದರೆ ಮಾತ್ರವೇ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದರು.

ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮೊದಲು ಕೇವಲ ಹೊರರಾಜ್ಯಗಳಿಂದ ಬಂದವರಿಂದ ಸೋಂಕು ಹರಡುತ್ತಿತ್ತು, ಆದರೆ ಈಗ ಸ್ಥಳೀಯರಲ್ಲೇ ಸೋಂಕು ಪತ್ತೆಯಾಗುತ್ತಿರುವುದು ಕಂಡುಬಂದಿದೆ. ಮುಖ್ಯವಾಗಿ ಹೊರಗಡೆಯಿಂದ ಪ್ರವಾಸಿಗರು ಬರುತ್ತಿರುವುದರಿಂದ ಸ್ವಲ್ಪ ಕಾಲಾವಕಾಶ ನೀಡಿ ಜಿಲ್ಲಾದ್ಯಂತ ಎಲ್ಲಾ ರೆಸಾರ್ಟ್‍ಗಳನ್ನು ಮುಚ್ಚುವಂತೆ ಆದೇಶ ಮಾಡಲು ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು.

ಕೊರೋನಾ ನಿಯಂತ್ರಣಕ್ಕಾಗಿ ಸಾರ್ವಜನಿಕರೂ ಜವಾಬ್ದಾರಿ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಅತ್ಯಂತ ಅನಿವಾರ್ಯ. ಇನ್ನೂ ಸುಮಾರು ಆರು ತಿಂಗಳುಗಳವರೆಗೆ ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಆರ್ ಅಶೋಕ್ ಮನವಿ ಮಾಡಿದರು.

ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಜನರು ತಾವಾಗಿಯೇ ಲಾಕ್‍ಡೌನ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಂತರಜಿಲ್ಲಾ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕರು ತಮ್ಮ ಹಳ್ಳಿಗಳನ್ನು ನಿರ್ದಿಷ್ಟ ಕಾರಣಕ್ಕಾಗಿ ಲಾಕ್‍ಡೌನ್ ಮಾಡಿಕೊಳ್ಳಬಹುದೇ ವಿನಃ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮಾಡಲಾಗುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಜಿಲ್ಲಾಧಿಕಾರಿಗಳು ಹಾಗೂ ವರಿಷ್ಠಾಧಿಕಾರಿಗಳು ಅದನ್ನು ತೆರವುಗೊಳಿಸುವರು ಎಂದು ಅವರು ಸ್ಪಷ್ಟಪಡಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಸುಮಾರು 7,000 ಕೋಟಿ ರೂಗಳನ್ನು ಪಿಂಚಣಿಗಾಗಿ ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಅಂಚೆ ಕಚೇರಿಗಳ ಮೂಲಕ ನೀಡಲಾಗುತ್ತಿರುವ ಪಿಂಚಣಿಗಳು ಮಾತ್ರ ತಡವಾಗುತ್ತಿವೆ. ಆದರೆ ಬ್ಯಾಂಕುಗಳ ಮೂಲಕ ಸರಿಯಾದ ಸಮಯಕ್ಕೆ ಪಿಂಚಣಿ ನೀಡಲಾಗುತ್ತಿದೆ ಎಂದು ಆರ್ ಅಶೋಕ್ ತಿಳಿಸಿದರು.

Comments are closed.