ಕರ್ನಾಟಕ

ಬುಧವಾರದಂದು ಮತ್ತೆ ಬಿಜೆಪಿಯ ಬಂಡಾಯ ಶಾಸಕರ ಸಭೆ

Pinterest LinkedIn Tumblr


ಬೆಂಗಳೂರು (ಮೇ 31): ಕೊರೋನಾದಿಂದಾಗಿ ಕಳೆದ ಎರಡೂವರೆ ತಿಂಗಳಿಂದ ತಣ್ಣಗಾಗಿದ್ದ ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಗಾರಿಕೆಯ ಜೊತೆಗೆ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಬಿಜೆಪಿಯಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಬುಧವಾರ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ತೀರ್ಮಾನಿಸಿದ್ದಾರೆ.

2 ದಿನಗಳ ಹಿಂದಷ್ಟೇ ಬಿಜೆಪಿ ಬಂಡಾಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಊಟಕ್ಕೆ ಸೇರಿದ್ದರು. ಊಟದ ನೆಪದಲ್ಲಿ ಅಲ್ಲಿ ಬಂಡಾಯ ಶಾಸಕರ ಸಭೆ ನಡೆಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ, ವಿಚಾರಗಳಲ್ಲಿ ತಲೆಹಾಕುತ್ತಿದ್ದಾರೆ ಎಂಬುದು ಹಲವು ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಇನ್ನು 3 ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಮ್ಮ ಕ್ಷೇತ್ರದ ಅಭಿವೃದ್ಧಿ, ಸ್ಥಾನಮಾನದ ಭರವಸೆ ನೀಡುವವರೆಗೂ ಬಂಡಾಯದ ಬಾವುಟ ಹಾರಿಸಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ಉಮೇಶ್ ಕತ್ತಿ ಮತ್ತೊಂದೆಡೆ ತಮ್ಮ ಪಟ್ಟನ್ನು ಇನ್ನೂ ಸಡಿಲಿಸಿಲ್ಲ. ತಮ್ಮನ್ನು ಮಂತ್ರಿ ಮಾಡಬೇಕು ಹಾಗೂ ಸಹೋದಯ ರಮೇಶ ಕತ್ತಿಗೆ ರಾಜ್ಯಸಭೆಯ ಟಿಕೆಟ್ ನೀಡಬೇಕು. ತಮ್ಮ ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಡ ಹೇರುತ್ತಿದ್ದಾರೆ. ನಿಗಮ‌ಮಂಡಳಿ ಹಾಗೂ ಇತರೆ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸಬೇಕು ಅನ್ನೋದು ಇತರೆ ಶಾಸಕರ ಒತ್ತಾಯವಾಗಿದೆ. ಇವೆಲ್ಲವನ್ನೂ ಈಡೇರಿಸುವ ಬಗ್ಗೆ ಸಿಎಂ‌ ಭರವಸೆ ನೀಡೋವರೆಗೂ ಬಂಡಾಯ ಮುಂದುವರೆಯಲಿದೆ. ಸದ್ಯಕ್ಕೆ ಎಲ್ಲ ಬಂಡಾಯ ಶಾಸಕರೂ ತಮ್ಮ ಕ್ಷೇತ್ರಗಳಿಗೆ ವಾಪಾಸಾಗಿದ್ದಾರೆ.

ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದಿರಿ. 8 ಬಾರಿ ಶಾಸಕನಾದ ನನಗೆ ಅವಮಾನ ಮಾಡಿದಿರಿ ಎಂದು ಉಮೇಶ್ ಕತ್ತಿ ಆಕ್ರೋಶ ಹೊರಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಉಮೇಶ್ ಕತ್ತಿ ವಿರುದ್ಧ ಮಾತಿನ ಚಕಮಕಿ ನಡೆದಿತ್ತು. ಹಾಗೇ, ಬಿಜೆಪಿ ಶಾಸಕರ ಜೊತೆ ನಮ್ಮ ಮನೆಯಲ್ಲಿ ಬಂಡಾಯ ಸಭೆ ನಡೆಸಿಲ್ಲ ಎಂದು ಕೂಡ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದರು. ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೆ. ಹಾಗಾಗಿ, ನಾವೆಲ್ಲ ಒಟ್ಟಾಗಿ ಸೇರಿದ್ದೆವು. ಆ ವೇಳೆ ಯಾವ ಸಭೆಯೂ ನಡೆದಿಲ್ಲ ಎಂದು ಅವರು ಹೇಳಿದ್ದರು.

Comments are closed.