ಕರ್ನಾಟಕ

ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಲು ನಿಯಮಗಳೇನು?

Pinterest LinkedIn Tumblr


ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಕಳೆದ 57 ದಿನಗಳಿಂದ ಸ್ಥಗಿತಗೊಂಡಿದ್ದ ಬಸ್‌ ಸೇವೆ ಮಂಗಳವಾರದಿಂದ ಶುರುವಾಗಲಿದೆ. ಕೆಎಸ್‌ಆರ್‌ಟಿಸಿಯು ಮೊದಲ ಹಂತದಲ್ಲಿ1,500 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುತ್ತಿದೆ.

ಕಂಟೈನ್ಮೆಂಟ್‌ ವಲಯಗಳಲ್ಲಿ ಬಸ್‌ ಸಂಚಾರ ಇರುವುದಿಲ್ಲ. ಹವಾನಿಯಂತ್ರಿತ, ಹೊರ ರಾಜ್ಯಗಳ ಬಸ್‌ಗಳನ್ನು ಆಚರಣೆ ಮಾಡುತ್ತಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್‌ ಸೇವೆ ಲಭ್ಯವಿದೆ, ರಾತ್ರಿ ಪಾಳಿಯ ಬಸ್‌ಗಳು ಇರುವುದಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಪ್ರತಿ ಬಸ್‌ನಲ್ಲಿ 30 ಮಂದಿಗೆ ಮಾತ್ರ ಅವಕಾಶವಿರುತ್ತದೆ. ಸದ್ಯಕ್ಕೆ ರಾಜ್ಯದೊಳಗಿನ ಪ್ರಮುಖ ಸ್ಥಳಗಳಿಗೆ ಮಾತ್ರ ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ. ಹಂತ- ಹಂತವಾಗಿ ಹೆಚ್ಚಿನ ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಟಿಕೆಟ್‌ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ.

ಪ್ರಯಾಣದ ವೇಳೆ ತೀವ್ರ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮಾಸ್ಕ್‌ ಧರಿಸಿದರಷ್ಟೇ ಬಸ್‌ನೊಳಗೆ ಪ್ರವೇಶ ಸಿಗಲಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ನಿರ್ವಾಹಕರು ಪ್ರತಿಯೊಬ್ಬ ಪ್ರಯಾಣಿಕರ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ವಿಳಾಸದ ಮಾಹಿತಿಯನ್ನು ಪಡೆದು, ನಿಗದಿತ ನಮೂನೆಗಳಲ್ಲಿ ದಾಖಲಿಸಿಕೊಳ್ಳಲಿದ್ದಾರೆ.

ಬಸ್‌ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್‌ ಮಾಡಲಾಗಿದೆ. ನಿಲ್ದಾಣದೊಳಗೆ ಬರುವ ಎಲ್ಲ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತದೆ. ಅಲ್ಲದೆ, ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಚಾಲಕ, ನಿರ್ವಾಹಕರಿಗೆ ಮಾಸ್ಕ್‌, ಕೈಗವಸು, ಸ್ಯಾನಿಟೈಸರ್‌ ಒದಗಿಸಲಾಗಿದೆ.

”ಈಗಾಗಲೇ ಮುಂಗಡವಾಗಿ ಸುಮಾರು 500 ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದ್ದಾರೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡದವರಿಗೆ ಟಿಕೆಟ್‌ ವಿತರಣೆ ಮಾಡಲಾಗುವುದು. ಆದರೆ, ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ,” ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರರೆಡ್ಡಿ ತಿಳಿಸಿದರು.

ಊಟಕ್ಕೆ ನಿಲುಗಡೆ ಇಲ್ಲ
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಾರ್ಗಮಧ್ಯೆ ಊಟ, ಉಪಹಾರಕ್ಕೆ ಬಸ್‌ ನಿಲುಗಡೆ ಮಾಡುವುದಿಲ್ಲ. ಹಾಗಾಗಿ, ಪ್ರಯಾಣಿಕರು ಮನೆಯಿಂದಲೇ ನೀರು, ಆಹಾರವನ್ನು ಕೊಂಡೊಯ್ಯಬೇಕು.

ಮಧ್ಯಾಹ್ನದ ಬಳಿಕ ಬಸ್‌ ಹೊರಡಲ್ಲ
ಮೈಸೂರಿಗೆ ತೆರಳುವ ಕೊನೆಯ ಬಸ್‌ ಸಂಜೆ 4 ಗಂಟೆಗೆ ಇರಲಿದೆ. ಶಿವಮೊಗ್ಗಕ್ಕೆ ಮಧ್ಯಾಹ್ನ 12 ಗಂಟೆಗೆ, ದಾವಣಗೆರೆ ಮಧ್ಯಾಹ್ನ 1 ಗಂಟೆ, ಹಾಸನಕ್ಕೆ ಮಧ್ಯಾಹ್ನ 3.30 ಮತ್ತು ಮಂಗಳೂರಿಗೆ ಕೊನೆಯ ಬಸ್‌ ಬೆಳಗ್ಗೆ 11.30ಕ್ಕೆ ಹೊರಡಲಿದೆ.

ಸಾರಿಗೆ ಸಿಬ್ಬಂದಿಗೆ 30 ಲಕ್ಷ ಪರಿಹಾರ
ಸಾರಿಗೆ ಸಂಸ್ಥೆಗಳಲ್ಲಿಕಾರ್ಯನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು ಕೊರೊನಾ ಸೋಂಕಿನಿಂದ ಮೃತಪಟ್ಟರೆ, ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Comments are closed.