ಕರ್ನಾಟಕ

ರಾಜ್ಯದಲ್ಲಿ 36 ಕೊರೊನಾ ಸೋಂಕು ಪಾಸಿಟಿವ್‌ ಪ್ರಕರಣಗಳು

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಶನಿವಾರವೂ 36 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 14 ಬೆಂಗಳೂರಿನಿಂದ ವರದಿಯಾಗಿದ್ದರೆ, ಕಲಬುರಗಿಯ 8 ಜನರಲ್ಲಿ ಕೋವಿಡ್‌-19 ವರದಿ ಪಾಸಿಟಿವ್‌ ಬಂದಿದೆ. ಹಾಸನದ 4, ಶಿವಮೊಗ್ಗ 3 ಮತ್ತು ವಿಜಯಪುರ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಮಂಡ್ಯ, ಉಡುಪಿ ಹಾಗೂ ಬಳ್ಳಾರಿಯ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜಧಾನಿಯಲ್ಲಿ ನಿಲ್ಲದ ಕೊರೊನಾ ಓಟ

ರಾಜಧಾನಿಯ ಬೆಂಗಳೂರಿನಲ್ಲಿ ಶನಿವಾರವೂ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.
ಎಲ್ಲವೂ ಶಿವಾಜಿನಗರದಿಂದಲೇ ವರದಿಯಾಗಿವೆ. ಶಿವಾಜಿನಗರದ ಹೋಟೆಲ್‌ನಲ್ಲಿ ಹೌಸಿ ಕೀಪಿಂಗ್‌ ಕೆಲಸಕ್ಕಿದ್ದ ಹೊರ ರಾಜ್ಯದ ವ್ಯಕ್ತಿಯಿಂದ (ಪಿ-653) ಶುಕ್ರವಾರ 11 ಜನರಿಗೆ ಸೋಂಕು ತಗುಲಿತ್ತು. ಇದೀಗ ಶನಿವಾರವೂ ಆತನ ದ್ವಿತೀಯ ಸಂಪರ್ಕದಲ್ಲಿದ್ದ 14 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಒಬ್ಬರು 50 ವರ್ಷದ ಪುರುಷರಾಗಿದ್ದರೆ, ಉಳಿದವರೆಲ್ಲ 17 ರಿಂದ 33 ವರ್ಷ ಪ್ರಾಯದ ಯುವಕರಾಗಿದ್ದಾರೆ.

ಕಲಬುರಗಿಯ 8 ಜನರಲ್ಲಿ ಆರು ಜನರು ಪಿ-848 ಸಂಪರ್ಕಿತರಾಗಿದ್ದರೆ. ಇವರಲ್ಲಿ 10 ವರ್ಷದ ಮಗು ಕೂಡ ಸೇರಿದೆ. ಉಳಿದಿಬ್ಬರಲ್ಲಿ ಒಬ್ಬರು ಪಿ-927 ಸಂಪರ್ಕಿತರಾಗಿದ್ದರೆ, ಇನ್ನೊಬ್ಬರಿಗೆ ಮಹಾರಾಷ್ಟ್ರದ ಮುಂಬಯಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಇದೆ.

ಮಕ್ಕಳು, ಅಂತಾರಾಜ್ಯ ಪ್ರಯಾಣಿಕರಲ್ಲಿ ಸೋಂಕು

ಶಿವಮೊಗ್ಗದ ಎಲ್ಲಾ ಮೂವರು ಸೋಂಕಿತರು ಮುಂಬಯಿನಿಂದ ರಾಜ್ಯಕ್ಕೆ ವಾಪಸ್‌ ಬಂದವರಾಗಿದ್ದಾರೆ. ಇವರಲ್ಲಿ 4 ವರ್ಷದ ಹೆಣ್ಣು ಮಗು ಕೂಡ ಸೇರಿದೆ. ಹಾಸನದ ಎಲ್ಲಾ ನಾಲ್ವರಿಗೂ ಮುಂಬಯಿ ಪ್ರಯಾಣದ ಹಿನ್ನೆಲೆ ಇದೆ.

ವಿಜಯಪುರದ ನಾಲ್ಕು ವರ್ಷದ ಹೆಣ್ಣು ಮಗುವಿಗೂ ಕೊರೊನಾ ದೃಢಪಟ್ಟಿದ್ದು, ಈ ಮಗು ಈ ಹಿಂದಿನ ರೋಗಿಯ ಸಂಪರ್ಕದಲ್ಲಿತ್ತು. ದುಬೈನಿಂದ ಮರಳಿದ ಉಡುಪಿಯ 1 ವರ್ಷದ ಹೆಣ್ಣುಮಗುವಿನ ಕೋವಿಡ್‌-19 ವರದಿಯೂ ಪಾಸಿಟಿವ್‌ ಬಂದಿದೆ.

ಬಾಗಲಕೋಟೆಯ ಏಕೈಕ ಸೋಂಕಿತರು ಮುಂಬಯಿನಿಂದ ರಾಜ್ಯಕ್ಕೆ ಬಂದವರಾಗಿದ್ದರೆ, ಬಳ್ಳಾರಿಯ ಸೋಂಕಿತರು ಗುಜರಾತ್‌ನ ಅಹಮದಾಬಾದ್‌ನ ಟ್ರಾವೆಲ್‌ ಹಿಸ್ಟರಿ ಹೊಂದಿದ್ದಾರೆ. ಧಾರವಾಡದ ಏಕೈಕ ಸೋಂಕಿತರು ಮುಂಬಯಿನಿಂದ ರಾಜ್ಯಕ್ಕೆ ವಾಪಸಾದವರಾಗಿದ್ದಾರೆ. ದಾವಣಗೆರೆಯ ಸೋಂಕಿತರು ಪಿ-533 ದ್ವಿತೀಯ ಸಂಪರ್ಕಿತರಾಗಿದ್ದಾರೆ.

ಬೆಂಗಳೂರು ಮತ್ತು ಕೋಲಾರಕ್ಕೆ ಹೋಗಿ ಬಂದಿದ್ದ ಮಂಡ್ಯದ 40 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ!

16 ಸೋಂಕಿತರು ಬಿಡುಗಡೆ

ಶನಿವಾರ ಕೊರೊನಾದಿಂದ ಚೇತರಿಸಿಕೊಂಡ 16 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ 14 ಜನರು ಸೋಂಕಿನಿಂದ ಗುಣಮುಖರಾಗಿದ್ದರೆ, ಉಳದಿಬ್ಬರು ವಿಜಯಪುರ ಮತ್ತು ಕಲಬುರಗಿಗೆ ಸೇರಿದವರಾಗಿದ್ದಾರೆ.

16 ಸೊಂಕಿತರ ಬಿಡುಗಡೆಯ ನಂತರ ರಾಜ್ಯದಲ್ಲಿ ಕೋವಿಡ್‌-19ನಿಂದ ಗುಣಮುಖರಾದವರ ಸಂಖ್ಯೆ 496ಕ್ಕೆ ತಲುಪಿದೆ. ಒಟ್ಟು 36 ಸೋಂಕಿತರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ 559 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 546 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಜನರು ಐಸಿಯುನಲ್ಲಿ ಇದ್ದಾರೆ.

Comments are closed.