ಕರ್ನಾಟಕ

ಮಸೀದಿಗಳಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆಯ ಸಮಯ ಕಡಿತಗೊಳಿಸಲು ಸೂಚನೆ

Pinterest LinkedIn Tumblr


ಬೆಂಗಳೂರು: ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ಪೂರಕವಾಗಿ ಮಸೀದಿಗಳಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆಯ (ಜುಮಾ ನಮಾಜ್) ಸಮಯವನ್ನು ಕಡಿತಗೊಳಿಸಲು ಸೂಚಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬುಧವಾರ (ಮಾ.18) ರಂದು ಪ್ರಕಟಣೆ ಹೊರಡಿಸಿದೆ.

ಈ ಕುರಿತು ಕರ್ನಾಟಕದ ಅಮಿರೆ ಶರಿಯತ್ ಮೌಲಾನ ಸಗೀರ್ ಅಹ್ಮದ್ ರಶಾದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಧಾರ್ಮಿಕ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ. ಮಹ್ಮದ್ ಯೂಸುಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಶುಕ್ರವಾರದ ಪ್ರಾರ್ಥನೆಯನ್ನು ಮುಂದಿನ ಮೂರು ವಾರಗಳ ಕಾಲ 15 ನಿಮಿಷಕ್ಕೆ ಸಿಮೀತಗೊಳಿಸಬೇಕು. ಈ ವೇಳೆ ಸಾರ್ವಜನಿಕವಾಗಿ ಧ್ವನಿವರ್ಧಕಗಳನ್ನು ಬಳಸಬಾರದು.

– ಪ್ರತಿ ದಿನದ ಐದು ಹೊತ್ತಿನ ನಮಾಜ್ ವೇಳೆ ಮಸೀದಿಯಲ್ಲಿ ಶುಚಿತ್ವ ಕಾಪಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾರ್ಥನೆಯನ್ನು ಆದಷ್ಟು ಕಡಿಮೆ ಸಮಯದಲ್ಲಿ ಮುಗಿಸಬೇಕು. ಬಳಿಕ ಸಾಧ್ಯವಾದಷ್ಟು ಬೇಗ ಅಲ್ಲಿಂದ ತೆರಳಬೇಕು.

– ಮಸೀದಿ ಹಾಗೂ ದರ್ಗಾಗಳ ಆವರಣಗಳನ್ನು ಸ್ವಚ್ಚವಾಗಿಡಬೇಕು. ಹೆಚ್ಚು ಜನರು ಸೇರಲು ಅಥವಾ ತಂಗಲು ಅವಕಾಶ ಮಾಡಿಕೊಬಾರದು.

– ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಸರ್ಕಾರ ಹೊರಡಿಸಿರುವ ಆದೇಶದಂತೆ ಮದರಸಾಗಳಿಗೆ ರಜೆ ನೀಡಬೇಕು.

– ಧಾರ್ಮಿಕ ಸಭೆ ಹಾಗೂ ಉರುಸ್ ಆಚರಣೆ ವೇಳೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಬೇಕು.

– ಉಸಿರಾಟದ ಸಮಸ್ಯೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನ ಮಸೀದಿ, ದರ್ಗಾ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಬರದಂತೆ ಮನವಿ ಮಾಡಲಾಗಿದೆ.

-ಕೋವಿಡ್ 19 ವೈರಸ್ ಸೋಂಕು ಗಂಡಾಂತರದಿಂದ ಪಾರು ಮಾಡುವಂತೆ ದೇವರಲ್ಲಿ ವಿಶೇಷ ದುವಾ (ಪ್ರಾರ್ಥನೆ) ಮಾಡುವಂತೆ ಮನವಿ ಮಾಡಲಾಗಿದೆ.

Comments are closed.