ಹುಬ್ಬಳ್ಳಿ: ಈ ಇಬ್ಬರ ಪ್ರೀತಿ ಆರು ವರ್ಷಗಳದ್ದು, ಪ್ರೀತಿಯಿಲ್ಲಿ ಮುಳುಗಿದ್ದ ಇಬ್ಬರು ಕೊನೆಗೂ ಸಪ್ತಪದಿ ತುಳಿದಿದ್ದರು. ದುರಂತ ಅಂದ್ರೆ ಮಗನ ಪ್ರೀತಿಗೆ ತಂದೆಯೆ ವಿಲನ್ ಆಗಿದ್ದು, ಜೀವ ಭಯದಲ್ಲಿರುವ ಪ್ರೇಮಿಗಳು ಈಗ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಹೌದು.. ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದವರಾದ ಈ ನವ ಜೋಡಿಗೆ ಮುಂದೆನಪ್ಪ ಅಂತಾ ದಿಕ್ಕು ತೋಚದಂತಾಗಿದೆ. ಕಳೆದ ಆರು ವರ್ಷಗಳಿಂದ ಇವರಿಬ್ಬರು ಗಾಡವಾಗಿ ಪ್ರೀತಿಸುತ್ತಿದ್ದಾರೆ. ಶಿವಾನಂದ ಬಾಲಪ್ಪ ಮಲ್ಲಿಗವಾಡ ಮತ್ತು ಜಾಹೀದಾ ಮೆಹಬೂಬಸಾಬ್ ಘಾಟಿನಾ ಪ್ರೀತಿಯಲ್ಲಿ ಬಿದ್ದು ಈಗ ಮದ್ವೆಯಾಗಿ ಆತಂಕದಲ್ಲಿ ಬದುಕುತ್ತಿದ್ದಾರೆ.
ಮಗನ ಪ್ರೀತಿಗೆ ತಂದೆಯೇ ಇಲ್ಲಿ ವಿಲನ್ ಆಗಿದ್ದು, ಅನ್ಯಧರ್ಮದ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಮಗನ ವಿರುದ್ದ ತಂದೆ ಬಾಲಪ್ಪ ಮಲ್ಲಿಗವಾಡ ತಿರುಗಿ ಬಿದ್ದಿದ್ದು ತಂದೆಯಿಂದ ರಕ್ಷಣೆ ನೀಡಿ ಎಂದು ಮಗ ಈಗ ಪೊಲೀಸರ ಮೊರೆ ಹೋಗಿದ್ದಾನೆ.
ಮನೆಯಲ್ಲಿದ್ದ ಟಿಪ್ಪರ್ ಚಲಾಯಿಸುತ್ತಿದ್ದ ಶಿವಾನಂದ ಅದೆ ಗ್ರಾಮದ ಜಾಹೀದಾಳನ್ನ ಪ್ರೀತಿ ಮಾಡುತ್ತಿದ್ದ. ಎರಡು ಕುಟುಂಬದವರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಹುಡುಗನ ಮನೆಯಲ್ಲಿ ಇವರ ಪ್ರೇಮ ಕಹಾನಿಗೆ ರೆಡ್ ಸಿಗ್ನಲ್ ನೀಡಿದ್ದಾರೆ. ಇದ್ಯಾವುದನ್ನು ಲೆಕ್ಕಿಸದ ಯುವಕ ಬೂದನಗುಡ್ಡದ ಬಸವಣ್ಣ ದೇವಸ್ಥಾನದಲ್ಲಿ ಯುವತಿಯನ್ನ ಮದ್ವೆಯಾಗಿದ್ದಾನೆ. ಅದ್ಯಾವಾಗ ತಮ್ಮ ವಿರೋಧದ ನಡುವೆಯು ಯುವತಿಗೆ ತಾಳಿ ಕಟ್ಟಿದ್ದಾನೆ ಎನ್ನುವ ಸುದ್ದಿ ತಂದೆಯ ಕಿವಿಗೆ ಬಿತ್ತೊ ಆಗಲೆ, ಮಗನ ವಿರುದ್ದ ಹುಡುಗನ ಕುಟುಂಬದವರು ತಿರುಗಿ ಬಿದ್ದಿದ್ದಾರೆ.
ಅನ್ಯ ಧರ್ಮದ ಯುವತಿಯನ್ನ ಮನೆಯ ಸೊಸೆ ಎಂದು ಸೇರಿಸಿಕೊಳ್ಳಲು ಸಿದ್ದರಾಗಿಲ್ಲ. ಬದಲಿಗೆ ಯುವತಿಯನ್ನ ಬಿಟ್ಟು ಮನೆಗೆ ಬರುವಂತೆ ಹೇಳಿದ್ದಾರೆ. ಇದ್ಯಾವುದನ್ನ ಕೇಳದಿದ್ದಾಗ ಪ್ರೇಮಿಗಳಿಗೆ ಜೀವಬೆದರಿಕೆ ಹಾಕಿದ್ದಾರಂತೆ.
ಪ್ರೇಮಿಗಳ ಮದ್ವೆಗೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಮದ್ವೆಯಾದ ಸಂಭ್ರಮದಲ್ಲಿದ್ದ ಯುವಪ್ರೇಮಿಗಳು ಈಗ ಆತಂಕದಲ್ಲಿದ್ದಾರೆ. ತಮ್ಮ ರಕ್ಷಣೆಗಾಗಿ ಈ ಇಬ್ಬರು ಈಗ ಹುಬ್ಬಳ್ಳಿಯ ಸಬರಮನ್ ಪೊಲೀಸರ ಮೊರೆ ಹೋಗಿದ್ದಾರೆ.
Comments are closed.