ಬೆಂಗಳೂರು: ಅಪಾರ್ಟ್ವೆುಂಟ್ನಿಂದ ತಾಯಿ, ಮಗ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇನ್ಸ್ಪೆಕ್ಟರ್ ಚಂದ್ರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಜ್ಜಾಗುತ್ತಿದ್ದಾರೆ.
2018ರ ಮಾ.6ರಂದು ಮೌನೇಶ್ (34) ಮತ್ತು ಸುಂದರಮ್ಮ (60) ಎಂಬುವರು ಕಾಡುಗೋಡಿ ಬೆಳತ್ತೂರಿನ ಅಪಾರ್ಟ್ವೆುಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಶಹಾಪುರ ತಾಲೂಕಿನ ತಾಯಿ ಮತ್ತು ಪುತ್ರನನ್ನು ಇನ್ಸ್ಪೆಕ್ಟರ್ ಚಂದ್ರಪ್ಪ ಎಳೆದುತಂದು ತಮ್ಮ ಫ್ಲ್ಯಾಟ್ನಲ್ಲಿ ಕೂಡಿ ಹಾಕಿದ್ದರು. ಆಗ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ಸ್ಪೆಕ್ಟರ್ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಇನ್ಸ್ಪೆಕ್ಟರ್ ಕಿರುಕುಳವೇ ತಾಯಿ ಹಾಗೂ ಪುತ್ರನ ಆತ್ಮಹತ್ಯೆಗೆ ಕಾರಣ ಎಂಬುದು ಖಚಿತವಾಗಿದೆ. ಮೌನೇಶ್ ತನ್ನ ಕಾಲಿನ ಮೇಲೆ ಬರೆದಿದ್ದ ಡೆತ್ನೋಟ್ ಇದಕ್ಕೆ ಪ್ರಮುಖ ಸಾಕ್ಷಿ. ಈ ಹಿನ್ನೆಲೆಯಲ್ಲಿ ಚಂದ್ರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಐಡಿ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತಂಗಿ ಓಡಿ ಹೋಗಿದ್ದಕ್ಕೆ ಗೃಹಬಂಧನ
ಕಾಡುಗೋಡಿ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಪ್ಪ, 2017ರ ಜೂನ್ನಲ್ಲಿ ಕೋಲಾರಕ್ಕೆ ವರ್ಗವಾಗಿದ್ದರು. ಬೆಳತ್ತೂರಿನ ಅಪಾರ್ಟ್ವೆುಂಟ್ನಲ್ಲಿ ತಂಗಿ ಜತೆ ನೆಲೆಸಿದ್ದರು. ಪತ್ನಿ, ಮಕ್ಕಳು, ತಾಯಿ ಜತೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಆಗಿದ್ದ ಮೌನೇಶ್ ಶಹಾಪುರದಲ್ಲಿ ನೆಲೆಸಿದ್ದ. ಯಾದಗಿರಿಯಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಚಂದ್ರಪ್ಪ ಅವರ ತಂಗಿ ಬಸ್ನಲ್ಲಿ ಓಡಾಡುವಾಗ ಮೌನೇಶ್ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. 2018ರಲ್ಲಿ ಫೆ.17ರಂದು ಸಹೋದರಿ ಮನೆ ಬಿಟ್ಟುಹೋಗಿದ್ದಳು. ಶಹಾಪುರಕ್ಕೆ ಹೋದ ಇನ್ಸ್ಪೆಕ್ಟರ್, ಮೌನೇಶ್ ಮತ್ತವನ ತಾಯಿ ಜತೆ ಗಲಾಟೆ ಮಾಡಿದ್ದರು. ತಂಗಿ ಮನೆಗೆ ಮರಳುವವರೆಗೂ ನನ್ನ ಮನೆಯಲ್ಲೇ ಇರಿ ಎಂದು ಕರೆತಂದು ಫ್ಲ್ಯಾಟ್ನಲ್ಲಿ ಕೂಡಿ ಹಾಕಿದ್ದರು. ಇದರಿಂದ ನೊಂದಿದ್ದ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು.
Comments are closed.